- ಶಿವಗಂಗಾ ಬಸವರಾಜ ಕೃಪೆಗೆ ಚನ್ನಗಿರಿ ತಾಲೂಕು ಅಧಿಕಾರಿಗಳ ಕಸರತ್ತು?
- ಗುರುವಾರ ಅವಸರದಲ್ಲೇ ನಾಡಪ್ರಭು ಕೆಂಪೇಗೌಡ ಜನ್ಮದಿನ ಆಚರಿಸಿ ತಿಮ್ಮಪ್ಪ ದರ್ಶನಕ್ಕೆ ಟೂರ್- ಸರ್ಕಾರಿ ವಾಹನಗಳಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಅಧಿಕಾರಿಗಳ ದೌಡು
- ದಾಖಲೆ ಪತ್ರ, ಸೌಲಭ್ಯಗಳಿಗೆ ಕಚೇರಿಗಳಲ್ಲಿ ಅಧಿಕಾರಿಗಳಿಗಾಗಿ ಕಾದು ಸುಸ್ತಾದ ಜನಸಾಮಾನ್ಯರು- - - ನಾಗರಾಜ ಎಸ್. ಬಡದಾಳ್
ಕನ್ನಡಪ್ರಭ ವಾರ್ತೆ, ದಾವಣಗೆರೆ
ಡಿ.ಕೆ.ಶಿವಕುಮಾರ ಸಾಹೇಬ್ರು ಮೊದಲು ಮುಖ್ಯಮಂತ್ರಿ ಆಗಬೇಕೆಂದು ಧ್ವನಿ ಎತ್ತುತ್ತಿರುವ ಶಾಸಕರಲ್ಲಿ ಅಗ್ರಗಣ್ಯರಾದ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರ ಶಾಸಕ ಶಿವಗಂಗಾ ವಿ. ಬಸವರಾಜ ಜನ್ಮದಿನಕ್ಕೆ ಚನ್ನಗಿರಿ ತಾಲೂಕಿನ ಸುಮಾರು 22 ಅಧಿಕಾರಿಗಳ ದಂಡು ಶಾಸಕರ ಜೊತೆಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದಾರೆ. ಇದರಿಂದಾಗಿ ತಾಲೂಕಿನ ಕಚೇರಿಗಳಲ್ಲಿ ಅಧಿಕಾರಿಗಳು ಇಲ್ಲದೇ, ಸರ್ಕಾರಿ ಕೆಲಸ ಕಾರ್ಯಗಳ ಸಡಗರವಿಲ್ಲದೇ ಕಚೇರಿಗಳು ಬಿಕೋ ಎನ್ನುತ್ತಿದ್ದವು!ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ತಿರುಪತಿ ತಿಮ್ಮಪ್ಪನ ಪರಮಭಕ್ತ. ಅದರಂತೆ ಪ್ರತಿವರ್ಷ ತಿಮ್ಮಪ್ಪನ ದರ್ಶನಕ್ಕೆ, ಅವಕಾಶ ಸಿಕ್ಕಾಗಲೆಲ್ಲಾ ಹೋಗಿ ದರ್ಶನ ಮಾಡಿ ಬರುತ್ತಾರೆ. ಶಾಸಕರ ಮೇಲೆ ತಿಮ್ಮಪ್ಪನ ಕೃಪೆ ಇರಲಿ, ತಮ್ಮ ಮೇಲೆ ತಮ್ಮ ಕ್ಷೇತ್ರದ ಶಾಸಕರ ಕೃಪೆ ಇರಬೇಕೆಂಬ ಕಾರಣಕ್ಕೆ ಚನ್ನಗಿರಿ ಪಟ್ಟಣದಲ್ಲಿ ಜೂ.27ರಂದು ಗುರುವಾರ ಬೆಳಗ್ಗೆಯೇ ನಾಡಪ್ರಭುವಿನ ಜನ್ಮದಿನ ಆಚರಿಸಿ, ಅದೇ ಅವಸರದಲ್ಲಿ 2 ದಿನಗಳ ಕಾಲ ಕರ್ತವ್ಯಕ್ಕೆ ರಜೆ ಹಾಕಿ, ತಿರುಪತಿಗೆ ತೆರಳಲು, ಶಿವಮೊಗ್ಗ ವಿಮಾನ ನಿಲ್ದಾಣ ತಲುಪಿದ್ದರು ಎಂಬ ಮಾತು ಕ್ಷೇತ್ರಾದ್ಯಂತ ಹರಿದಾಡುತ್ತಿದೆ.
ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದು, ಅಲ್ಲಿಯೇ ಶಾಸಕ ಶಿವಗಂಗಾ ಬಸವರಾಜ ಅವರಿಗೆ ಜನ್ಮದಿನದ ಶುಭಾಷಯ ಕೋರಿದ್ದಾರೆ. ಅನಂತರ ಶುಕ್ರವಾರ ಸಂಜೆ ಹೊತ್ತಿಗೆ ಎಲ್ಲರೂ ತಿಮ್ಮಪ್ಪನ ದರ್ಶನ ಮಾಡಿಕೊಂಡು, ಶಾಸಕರ ಕೃಪೆ ಗಳಿಸಿಕೊಂಡ ಸಂತೃಪ್ತಿಯೊಂದಿಗೆ ವಿಮಾನವನ್ನೇರಿ ಶಿವಮೊಗ್ಗಕ್ಕೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.ಚನ್ನಗಿರಿ ತಹಸೀಲ್ದಾರ್, ತಾಪಂ ಇಒ, ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ತಾಲೂಕುಮಟ್ಟದ ವೈದ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿ, ಬೆಸ್ಕಾಂ ಚನ್ನಗಿರಿ- ಸಂತೇಬೆನ್ನೂರು ಕಚೇರಿ ಹೀಗೆ ವಿವಿಧ ಇಲಾಖೆ ಅಧಿಕಾರಿಗಳ ಪೈಕಿ ಅನೇಕರು ತಿರುಪತಿಗೆ ಹೋಗಿ ಬಂದಿದ್ದಾರೆ. ಒಮ್ಮಿಂದೊಮ್ಮೆಗೆ ಅಧಿಕಾರಿಗಳಿಗೆ ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಿ ಉಕ್ಕಿ ಹರಿದಿದ್ದಾ ಅಥವಾ ಶಾಸಕರ ಮೇಲಿನ ಅಭಿಮಾನ, ಕೃಪೆ ಗಳಿಸುವ ಸರ್ಕಸ್ಸಾ ಎಂಬ ವ್ಯಂಗ್ಯದ ಮಾತು ಈಗ ಚನ್ನಗಿರಿ ತಾಲೂಕಿನಲ್ಲಿ ಕೇಳಿಬರುತ್ತಿವೆ.
ಬಹುತೇಕ ಕಚೇರಿಗಳಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ಚಾರ್ಜ್ ನೀಡಿ ಹೋಗಿದ್ದರು. ಆದರೆ, ಕೆಲಸ, ಕಾರ್ಯದ ನಿಮಿತ್ತ ತಾಲೂಕುಮಟ್ಟದ ಅಧಿಕಾರಿಗಳ ಭೇಟಿಗೆ ಬಂದಿದ್ದ ಸಾರ್ವಜನಿಕರು, ರೈತರು, ಗ್ರಾಮೀಣರು, ವಿದ್ಯಾರ್ಥಿ, ಯುವಜನರು, ಹಿರಿಯ ನಾಗರೀಕರು, ವಿಕಲಚೇತನರು ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ಸಾಗಿದ್ದಾರೆ. ಬಹುತೇಕ ಕಚೇರಿಯಲ್ಲಿ ಸಾಹೇಬರು ಊರಲಿಲ್ಲ. ಶಿವಮೊಗ್ಗ ಹೋಗಿದ್ದಾರೆ, ಬೆಂಗಳೂರು, ಮೈಸೂರಿಗೆ ಹೋಗಿದ್ದಾರೆ. ತಮ್ಮ ಊರಿಗೆ ಹೋಗಿದ್ದಾರೆಂಬ ಉತ್ತರಗಳು ಜನರಿಗೆ ವ್ಯಕ್ತವಾಗಿವೆ.- - -
ಬಾಕ್ಸ್ಶ್ರೀಮಂತ ತಾಲೂಕಿನಲ್ಲಿ ನೂರಾರು ಸಮಸ್ಯೆ
ಮತ್ತೊಂದು ಕಡೆ ಚನ್ನಗಿರಿ ತಾಲೂಕಿನಲ್ಲಿ ಮಳೆಯಾಗಿದ್ದು, ರೈತರು ಸಹ ಬಿತ್ತನೆಗೆ ಸನ್ನದ್ಧವಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆ ಕಚೇರಿಗಳ ಕುರ್ಚಿಗಳೂ ಖಾಲಿ ಇದ್ದವು. ಕೆಲವು ಕಚೇರಿಗಳಲ್ಲಿ ಅಧಿಕಾರಿಗಳ ತಿರುಪತಿ ಟ್ರಿಪ್ ಬಗ್ಗೆ ಅರಿವು ಇಲ್ಲದ ಜನರು ದಿನಗಟ್ಟಲೇ ಕಾದು ಕುಳಿತರೂ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ, ಗುರುವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಹೋಗಲು ತಾಲೂಕುಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಸರ್ಕಾರಿ ವಾಹನಗಳನ್ನೇ ಬಳಸಿಕೊಂಡು, ತಿರುಪತಿ ಹೋಗಿದ್ದರು. ವಾಪಸ್ಸಾಗುವ ಹೊತ್ತಿಗೆ ತಮ್ಮ ಇಲಾಖೆ ವಾಹನಗಳಲ್ಲೇ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.ಸಾಹೇಬರನ್ನು ಕರೆ ತರಲು ಚನ್ನಗಿರಿಯ ಸರ್ಕಾರಿ ವಾಹನಗಳ ಚಾಲಕರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೋಗಿ, ಕಾದು ಕರೆತಂದಿದ್ದೂ ಆಗಿದೆ. ತಾಲೂಕಿನಲ್ಲಿ ನೂರಾರು ಸಮಸ್ಯೆ ತಾಂಡವವಾಡುತ್ತಿದೆ. ಆದರೆ, ದೇವರ ಮೇಲಿನ ಭಕ್ತಿ, ಶಾಸಕರ ಕೃಪಾಕಟಾಕ್ಷಕ್ಕೆ ವಿಮಾನವನ್ನೇರಿ ತಿರುಪತಿಗೆ ಹೋಗಿ ಬರುವ ಅಧಿಕಾರಿಗಳಿಗೆ ತಾವು ಕಾರ್ಯ ನಿರ್ವಹಿಸುವ ತಾಲೂಕಿನ ಹಳ್ಳಿಯೊಂದರಲ್ಲಿ ವರ್ಷಗಳಿಂದ ಕಾಡುವ ಸಮಸ್ಯೆ ಹೋಗಿ, ಪರಿಶೀಲಿಸುವ ಬದ್ಧತೆ ಇಲ್ಲ. ಇಂತಹವರಿಂದ ಜನರು ಏನನ್ನು ನಿರೀಕ್ಷಿಸಲು ಸಾಧ್ಯವೆಂಬ ಪ್ರಶ್ನೆ ಜನ ಸಾಮಾನ್ಯರಿಂದ ಕೇಳಿಬರುತ್ತಿದೆ.
"ಸರ್ಕಾರಿ ಕೆಲಸ ದೇವರ ಕೆಲಸ " ಎಂಬುದಾಗಿ ಗ್ರಾಪಂ ಕಚೇರಿಯಿಂದ ವಿಧಾನಸೌಧವರೆಗೆ ಮಾತು ಕೇಳುತ್ತವೆ, ಫಲಕ ಕಂಡಿರುತ್ತವೆ. ಆದರೆ, ಚನ್ನಗಿರಿ ತಾಲೂಕು ಅಧಿಕಾರಿಗಳ ದಂಡು (ತಿರುಪತಿಗೆ ಹೋಗದವರನ್ನು ಹೊರತುಪಡಿಸಿ) ಇದೇ ದೇವರ ಮೇಲಿನ ಭಯಭಕ್ತಿ, ಶಾಸಕರ ಕೃಪಾಕಟಾಕ್ಷಕ್ಕಾಗಿ ತಮ್ಮ ಕೆಲಸಕ್ಕೆ ಎರಡು ದಿನ ರಜೆ ಹಾಕಿ, ತಮ್ಮದೇ ಹಣ ಹಾಕಿಕೊಂಡು ಹೋಗಿ ಬರುತ್ತಾರೆ. ಆದರೆ, ಸರ್ಕಾರಿ ವಾಹನ, ಸರ್ಕಾರಿ ಕಚೇರಿ, ಸರ್ಕಾರಿ ಸಂಬಳ ಹೀಗೆ ಎಲ್ಲ ಸೌಲಭ್ಯ ನೀಡಿದರೂ, ತೆರಿಗೆ ಮೂಲಕ ಇದೆಲ್ಲದರ ದಾತರಾದ ಜನರ ಸಮಸ್ಯೆಗೆ ಸರ್ಕಾರಿ ಕೆಲಸದ, ಕರ್ತವ್ಯದ ಅವಧಿಯಲ್ಲೇ ಇಂತಹ ಬದ್ಧತೆ ಯಾಕೆ ತೋರಲ್ಲವೆಂಬ ಜನರ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಿದೆ.- - - ಕೋಟ್ * ನಮ್ಮ ಹಕ್ಕಿನ ರಜೆ ತಿರುಪತಿಗೆ ಹೋಗಿದ್ದು ನಿಜ. ನಾವು ಆಸ್ತಿಕರೆ. ದೈವಭಕ್ತರೆ. ನಮ್ಮ ಹಕ್ಕಿನ ರಜೆ ಹಾಕಿ, ಹೋಗಿ ಬಂದಿದ್ದೇವೆ. ಶಿವಮೊಗ್ಗದಿಂದ ವಿಮಾನದಲ್ಲಿ ಹೋಗಿ, ತಿರುಪತಿ ಶ್ರೀ ತಿಮ್ಮಪ್ಪನ ದರ್ಶನ ಪಡೆದು, ಶಿವಮೊಗ್ಗಕ್ಕೆ ವಾಪಸ್ಸಾದೆವು. ನಾವು ದೇವರ ದರ್ಶನಕ್ಕೆ ಹೋಗಿದ್ದೇ ಹೊರತು, ಬೇರೇನೂ ಅಲ್ಲ ಎಂದು ಹೆಸರನ್ನು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
- - - -28ಕೆಡಿವಿಜಿ17, 18:ಚನ್ನಗಿರಿ ಪಟ್ಟಣದ ವಿವಿಧ ತಾಲೂಕು ಕಚೇರಿಗಳಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಕುರ್ಚಿಗಳು ಶಾಸಕರ ಜನ್ಮದಿನದ ಅಂಗವಾಗಿ ಅಧಿಕಾರಿಗಳು ತಿರುಪತಿಗೆ ತೆರಳಿದ್ದರಿಂದ ಸರ್ಕಾರಿ ಕಚೇರಿಗಳು ಭಣಗುಟ್ಟಿದವು.