ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿ ಮುಂದೆ ಜರಗಿಸುವಂತೆ ಆಗ್ರಹಿಸಿ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ಹಾಗೂ ಚನ್ನಮಾಜಿ ಅಭಿಮಾನ ಬಳಗದಿಂದ ಉಪವಿಭಾಗಧಿಕಾರಿ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ, ಮುಖಂಡ ಮುರಗೇಶ ಗುಂಡ್ಲೂರ ಮಾತನಾಡಿ, ನಮ್ಮ ನಾಡಿನ ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಹೊರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವರ್ಷದ ವಿಜಯೋತ್ಸವವು ಕಿತ್ತೂರು ನಾಡಿನಲ್ಲಿ ಅಕ್ಟೋಬರ್ 23, 24 ಮತ್ತು 25 ರಂದು ಆಚರಿಸುತ್ತಿರುವುದು ಶ್ಲಾಘನೀಯ. ಆದರೆ, ಚನ್ನಮ್ಮಾಜಿಯ ವೀರಸಮಾಧಿ ಸ್ಥಳ ಬೈಲಹೊಂಗಲದಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೆ ನಿರ್ಲಕ್ಷ ವಹಿಸಿರುವುದು ಬಹಳ ಖೇದಕರ. ಆದ್ದರಿಂದ ಅಕ್ಟೋಬರ್ 22 ರಂದು ಬೈಲಹೊಂಗಲದಲ್ಲಿ 200ನೇ ಕಿತ್ತೂರು ವಿಜಯೋತ್ಸವ ನಿಮಿತ್ತ ವಿಶೇಷ ಕಾರ್ಯಕ್ರಮವನ್ನು ಚನ್ನಮ್ಮಾಜಿಯವರ ಸಮಾಧಿ ಸ್ಥಳದಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹೇಶ ಹರಕುಣಿ ಮಾತನಾಡಿ, ದೇಶವೆ ವಿಜೃಂಭಿಸಬೇಕಾದ ಈ ಉತ್ಸವದಲ್ಲಿ ಬೈಲಹೊಂಗಲ ನಾಡನ್ನು ನಿರ್ಲಕ್ಷಿಸಿರುವುದು ಸರ್ಕಾರಕ್ಕೆ ಶೋಭೆಯಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಚನ್ನಮ್ಮಾಜಿಯ ಸಮಾಧಿ ಸ್ಥಳದಲ್ಲಿ ಭವ್ಯ ಅಲಂಕಾರಗೊಳಿಸಿಬೇಕು. ಸಮಾಧಿ ಸ್ಥಳದ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಸುಂದರವಾಗಿಸುವುದು, ಅಕ್ಟೋಬರ್ 22 ರಂದು ಬೆಳಗ್ಗೆ ಪಟ್ಟಣದಲ್ಲಿ ಶಾಲಾ-ಕಾಲೇಜು, ಎನ್ಸಿಸಿ, ಸ್ಕೌಟ್ ಆ್ಯಂಡ್ ಗೈಡ್ಸ್ ಮಕ್ಕಳ, ಪಥ ಸಂಚಲನ, ರೂಪಕಗಳು ಹಾಗೂ ಚನ್ನಮ್ಮನ ಚರಿತ್ರ ಬಿಂಬಿತ ಇತಿಹಾಸದ ಗೊಷ್ಠಿಗಳು ಹಾಗೂ ಒಂದು ದಿನದ ರಸಮಂಜರಿ, ಕಿರು ನಾಟಕ, ಚನ್ನಮ್ಮನ ಮೇಲಿನ ಜಾನಪದ ಸಾಹಿತ್ಯದ ಹಾಡು, ಲೇಜರ್ ಶೋ, ಭಜನೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.ಸರ್ಕಾರ ಈ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯವಹಿಸಿದ್ದೆ. ಆದರೆ, ಬೈಲಹೊಂಗಲ ನಾಡಿನ ಜನ ಹಾಗೂ ಚನ್ನಮ್ಮನ ಅಭಿಮಾನಿಗಳು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚನ್ನಮ್ಮಾಜಿಯ ಸಮಾಧಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದರೊಂದಿಗೆ ಚನ್ನಮ್ಮಳ ಸಮಾಧಿ ಸ್ಥಳದ ಮಹತ್ವ ನಾಡಿನ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಮತ್ತಿಕೊಪ್ಪ, ಸುನಿಲ ಪಾಟೀಲ, ಪರ್ವತಗೌಡ ಪಾಟೀಲ, ಈರಣ್ಣ ಬೆಟಗೇರಿ, ಸಂತೋಷ ಕೊಳವಿ, ಶ್ರೀಶೈಲ ಶರಣಪ್ಪನವರ, ಸುಭಾಷ ತುರಮರಿ, ಮಹೇಶ ಕೊಟಗಿ, ಬಿ.ಬಿ.ಸಂಗನಗೌಡರ, ಶ್ರೀಕಾಂತ ಶಿರಹಟ್ಟಿ, ಸುನಿಲ ಮರಕುಂಬಿ, ಸಿದ್ಧಾರೂಢ ಹೊಂಡಪ್ಪನವರ, ಮಹಾಂತೇಶ ಅಕ್ಕಿ, ರವೀಂದ್ರ ರೆಣಕೆ, ಸಿ.ಜಿ.ಉಂಡಿ, ಎಂ.ಆರ್.ಉಪ್ಪಿನ, ವಿ.ಪಿ.ಈಟಿ, ಗೌಡಪ್ಪ ಹೊಸಮನಿ, ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರು, ಮಾಜಿ ಯೋಧರು ಇದ್ದರು.