ಭೂದೇವಿಗೆ ಚರಗ ಚೆಲ್ಲಿ ಎಳ್ಳು ಅಮವಾಸ್ಯೆ ಆಚರಣೆ

KannadaprabhaNewsNetwork |  
Published : Dec 31, 2024, 01:02 AM IST
ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಡಾ. ಚನ್ನಮಲ್ಲ ಶಿವಯೋಗಿಗಳು ರೈತರು, ಮಕ್ಕಳೊಂದಿಗೆ ಎಳ್ಳು ಅಮವಾಸ್ಯೆ ಆಚರಿಸಿದರು.  | Kannada Prabha

ಸಾರಾಂಶ

ರೈತರ ಹಬ್ಬ ಎಳ್ಳು ಅಮವಾಸ್ಯೆ ದಿನವನ್ನು ಅಫಜಲ್ಪುರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರೈತರು ತಮ್ಮ ಹೊಲಗದ್ದೆಗಳಿಗೆ ವಿಶೇಷ ಭಜ್ಜಿ, ರೊಟ್ಟಿ, ಕಡುಬು, ಹೋಳಿಗೆ ಸೇರಿ ಬಗೆ ಬಗೆಯ ಖಾದ್ಯಗಳನ್ನು ಮಾಡಿಕೊಂಡು ಹೋಗಿ ಭೂದೇವಿಗೆ ಚರಗ ಚೆಲ್ಲಿ ಸಂಭ್ರಮಿಸಿದರು.

ರೈತರೊಂದಿಗೆ ಶಿವಾಚಾರ್ಯ ಶ್ರೀ ಸಾಮೂಹಿಕ ಭೊಜನ

ಕನ್ನಡಪ್ರಭ ವಾರ್ತೆ ಚವಡಾಪುರ

ರೈತರ ಹಬ್ಬ ಎಳ್ಳು ಅಮವಾಸ್ಯೆ ದಿನವನ್ನು ಅಫಜಲ್ಪುರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರೈತರು ತಮ್ಮ ಹೊಲಗದ್ದೆಗಳಿಗೆ ವಿಶೇಷ ಭಜ್ಜಿ, ರೊಟ್ಟಿ, ಕಡುಬು, ಹೋಳಿಗೆ ಸೇರಿ ಬಗೆ ಬಗೆಯ ಖಾದ್ಯಗಳನ್ನು ಮಾಡಿಕೊಂಡು ಹೋಗಿ ಭೂದೇವಿಗೆ ಚರಗ ಚೆಲ್ಲಿ ಸಂಭ್ರಮಿಸಿದರು.

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಚನ್ನಮಲ್ಲೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ರೈತರು, ಶಾಲಾ ಮಕ್ಕಳೊಂದಿಗೆ ಎಳ್ಳು ಅಮವಾಸ್ಯೆಯ ಪ್ರಯುಕ್ತ ಹೊಲದಲ್ಲಿ ಚರಗ ಚೆಲ್ಲಿ ಸಾಮೂಹಿಕ ಭೋಜನ ಸವಿದು ಮಾತನಾಡಿ, ನಮ್ಮ ಸಂಪ್ರದಾಯ, ನಮ್ಮ ಹಬ್ಬ ಹರಿದಿನಗಳೆಲ್ಲವೂ ನೆಲಮೂಲಕ್ಕೆ ಸಂಬಂಧಿಸಿದ್ದು ಮತ್ತು ನಮ್ಮ ಬದುಕಿಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದರು.

ರೈತರ ಹಬ್ಬವೆಂದು ಕರೆಯುವ ಎಳ್ಳು ಅಮವಾಸ್ಯೆ ಕೇವಲ ರೈತರ ಹಬ್ಬವಲ್ಲ. ಇದು ಎಲ್ಲರೂ ಸೇರಿ ಆಚರಿಸಬೇಕಾದ ಸುಗ್ಗಿ ಹಬ್ಬ. ಭೂಮಿ ತಾಯಿಗೆ ಚರಗ ಚೆಲ್ಲಿ ಎಲ್ಲರೂ ಕೂಡಿ ಸಾಮೂಹಿಕ ಭೋಜನ ಮಾಡುವುದೇ ಒಂದು ರೀತಿಯ ಆನಂದ. ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಗಾದೆ ಈ ಹಬ್ಬಕ್ಕೆ ಹೋಲಿಕೆಯಾಗಲಿದೆ ಎಂದ ಅವರು, ಎಳ್ಳು ಅಮವಾಸ್ಯೆಯ ಹಿನ್ನೆಲೆ ನೋಡುತ್ತಾ ಹೋದರೆ ಮಹಾ ಭಾರತಕ್ಕೂ ಈ ಹಬ್ಬಕ್ಕೂ ನಂಟು ಕಂಡು ಬರುತ್ತದೆ ಎಂದರು.

ಪಾಂಡವರು ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ವಿರಾಟರಾಜನು ಗೋವುಗಳನ್ನು ಗೋವರ್ಧನಗಿರಿಯಲ್ಲಿ ಕೌರವರಿಂದ ರಕ್ಷಣೆ ಮಾಡಿ ಒಟ್ಟಿಗೆ ಸಾಮೂಹಿಕ ಭೋಜನ ಮಾಡಿದರೆಂಬ ಪ್ರತೀತಿಯೂ ಇದೆ. ಇದು ಒಂದು ನಂಬಿಕೆಯಾದರೆ ರೈತರು ಜಮೀನಿನಲ್ಲಿ ಎಳ್ಳು, ಬೆಲ್ಲ, ಚೆಲ್ಲಿ ಬನ್ನಿ ಮರಕ್ಕೆ ಪೂಜೆ ಮಾಡಿ ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳನ್ನಿಟ್ಟು ಪೂಜೆ ಮಾಡುತ್ತಾರೆ. ಭೂಮಿ ತಾಯಿ ಒಳ್ಳೆಯ ಫಲವತ್ತತೆಯಿಂದ ಇದ್ದು ಹೆಚ್ಚು ಧಾನ್ಯ ನೀಡಿ, ಎಲ್ಲರಿಗೂ ಸಲಹು ತಾಯಿ ಎಂದು ನಮಿಸುತ್ತಾರೆ ಎಂದು ಹೇಳಿದರು.

ಇವೆಲ್ಲವೂ ಈಗಿನ ಯುವ ಪೀಳಿಗೆಗೆ ತಿಳಿಯಬೇಕಾದರೆ ನಾವುಗಳು ಪ್ರತಿ ಹಬ್ಬ ಹರಿದಿನಗಳಲ್ಲಿ ಮನೆ ಮಂದಿ ಸೇರಿ ಒಟ್ಟಾಗಿ ಹಬ್ಬ ಆಚರಿಸುವುದರ ಜೊತೆಗೆ ಅದರ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಘೋಷಯ್ಯ ಸ್ವಾಮಿ ಸೂರ್ಯಕಾಂತ ಮಾಡ್ಯಾಳ, ಶಿವಶರಣ ಹಡಪದ, ವಿನೋದ ಹಿರೇಮಠ ಸೇರಿದಂತೆ ರೈತರು, ಮಕ್ಕಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ