ದಾನ ಎಂದಿಗೂ ವ್ಯರ್ಥ ಆಗುವುದಿಲ್ಲ: ಪರ್ತಗಾಳಿ ಶ್ರೀ

KannadaprabhaNewsNetwork | Published : May 27, 2024 1:04 AM

ಅಂದು ಹಿರಿಯರು ಮಾಡಿದ ದಾನ ಇಂದು ನಿಮಗೆ ದಕ್ಕಿದ್ದು, ನೀವು ಮಾಡಿದ ದಾನವೂ ಮುಂದೆ ನಿಮ್ಮ ಹಾಗೂ ನಿಮ್ಮ ಪೀಳಿಗೆಗೆ ದಕ್ಕಲಿದೆ ಎನ್ನುವ ವಿಶ್ವಾಸವಿರಿಸಕೊಂಡು ದಾನ- ಧರ್ಮ ಮಾಡಬೇಕು ಎಂದು ಪರ್ತಗಾಳಿ ಶ್ರೀಗಳು ತಿಳಿಸಿದರು.

ಭಟ್ಕಳ: ಮುರ್ಡೇಶ್ವರದ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ಮತ್ತು ರಜತ ದ್ವಾರ ಸಮರ್ಪಣೆ ಸಮಾರಂಭ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಯಾವುದೇ ರೀತಿಯಲ್ಲಿ ಮಾಡಿದ ದಾನ ಎಂದಿಗೂ ವ್ಯರ್ಥವಾಗುವದಿಲ್ಲ. ಅದು ಯಾವುದಾದದರೂ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ. ಅಂದು ಹಿರಿಯರು ಮಾಡಿದ ದಾನ ಇಂದು ನಿಮಗೆ ದಕ್ಕಿದ್ದು, ನೀವು ಮಾಡಿದ ದಾನವೂ ಮುಂದೆ ನಿಮ್ಮ ಹಾಗೂ ನಿಮ್ಮ ಪೀಳಿಗೆಗೆ ದಕ್ಕಲಿದೆ ಎನ್ನುವ ವಿಶ್ವಾಸವಿರಿಸಕೊಂಡು ದಾನ- ಧರ್ಮ ಮಾಡಬೇಕು ಎಂದ ಅವರು, ದಾನದಿಂದ ಸಮಾಜದಲ್ಲಿ ಗೌರವವೂ ದೊರೆಯುವ ಮೂಲಕ ದೇವರ ಅನುಗ್ರಹವೂ ದೊರೆಯುತ್ತದೆ. ಹಣವನ್ನು ದಾನದಿಂದ ವಿನಿಯೋಗ ಮಾಡಿದರೆ ಮಾತ್ರ ಗೌರವ ದೊರೆಯುವುದು ಎನ್ನುವುದಕ್ಕೆ ಇಂದಿನ ಸಮಾರಂಭವೇ ಉದಾಹರಣೆ ಎಂದ ಶ್ರೀಗಳು, ಇಂದು ರಜತದ್ವಾರಕ್ಕೆ ದಾನ ನೀಡಿದವರಿಗೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಗೌರವಿಸುತ್ತಿದ್ದಾರೆ. ಇಲ್ಲಿ ಯಾರಲ್ಲಿಯೂ ಎಷ್ಟು ಹಣ ಇದೆ ಎನ್ನುವುದನ್ನು ನೋಡಿ ಗೌರವ ಫಲ ಮಂತ್ರಾಕ್ಷತೆಯನ್ನು ನೀಡುತ್ತಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದ ಅವರು, ದೇವಸ್ಥಾನಗಳ ಇಂದಿನ ಬೆಳವಣಿಗೆಗೆ ದಾನಿಗಳ ದಾನಗುಣವೇ ಕಾರಣ ಎನ್ನುತ್ತಾ ಒಂದು ಕಾಲದಲ್ಲಿ ದೇವಸ್ಥಾನಗಳಲ್ಲಿ ನಂದಾದೀಪ ಹಚ್ಚಲು ಕಷ್ಟದ ಪರಿಸ್ಥಿತಿ ಇತ್ತು. ಇಂದು ಭಕ್ತರು ಬೆಳ್ಳಿಯನ್ನು ದಾನ ಮಾಡುವ ಮಟ್ಟಕ್ಕೆ ಬೆಳೆದಿರುವದು ನಿಜಕ್ಕೂ ಅಭಿಮಾನದ ಸಂಗತಿ ಎಂದು ದಾನಿಗಳನ್ನು ಹರಸಿದರು. ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರ ಹಸ್ತದಿಂದ ದೇವರ ಗರ್ಭಗುಡಿಗೆ ರಜತದ್ವಾರ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀಮಠದ ಅಧ್ಯಕ್ಷ ಸುಂದರ ಕಾಮತ, ಕಾರ್ಯದರ್ಶಿ ಉಮೇಶ ಕಾಮತ, ಟ್ರಸ್ಟಿಗಳಾದ ವಿಶ್ವನಾಥ ಕಾಮತ, ನಾಗಪ್ಪ ಕಾಮತ, ಮಹಿಳಾ ಮಂಡಲದ ಅಧ್ಯಕ್ಷೆ ಸೀಮಾ ಕಾಮತ ಸೇರಿ ನೂರಾರು ಸಂಖ್ಯೆಯಲ್ಲಿ ಸಮಾಜದವರು ಉಪಸ್ಥಿತರಿದ್ದರು.