ಕನ್ನಡಪ್ರಭ ವಾರ್ತೆ ವಿಜಯಪುರ
ನಿಮ್ಮ ಉತಾರೆಯನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು. ಕೆಲವು ಲಪುಟರು ನಿಮ್ಮ ಆಸ್ತಿ ಕಬಳಿಸುವವರಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.ನಗರದ ಏಕತಾ ನಗರದ ಸಿದ್ಧಿ ವಿನಾಯಕ ದೇವಸ್ಥಾನ ಹತ್ತಿರ ನಗರ ಮತಕ್ಷೇತ್ರದ ವ್ಯಾಪ್ತಿಯ ತೊರವಿ ಗ್ರಾಪಂ ವ್ಯಾಪ್ತಿಯ ನವರಸಪುರದ ವಿವಿಧ ಕಾಲೋನಿಗಳಲ್ಲಿ ಆರ್ಡಿಪಿಆರ್ ಇಲಾಖೆಯಿಂದ ಮಂಜೂರು ಮಾಡಿಸಿದ ₹10 ಕೋಟಿ ಅನುದಾನದಲ್ಲಿ ಆಂತರಿಕ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದಲ್ಲಿ ಅಮಾಯಕರ ಆಸ್ತಿಗಳನ್ನು ಕಬಳಿಸುವ ಲಪುಟರಿದ್ದಾರೆ. ತಮ್ಮ ಉತಾರೆಗಳನ್ನು ಆಗಾಗ ಪರಿಶೀಲಿಸಿ, ಆನ್ಲೈನ್ದಲ್ಲೂ ನೋಡಲು ಅವಕಾಶವಿದೆ. ಅಲ್ಲದೆ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಾಗಗಳನ್ನು ಸಹ ಪುಡಾರಿಗಳು ಕಬಳಿಸಲು ಯತ್ನಿಸುತ್ತಿದ್ದು, ತಮ್ಮ ಗಮನಕ್ಕೆ ಬಂದ ತಕ್ಷಣ ಶಾಸಕರ ಕಚೇರಿಗೆ ತಿಳಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಜಯಪುರ ನಗರದಲ್ಲಿ ನಾವು ಆರಂಭಿಸಿದ ವಕ್ಫ್ ವಿರುದ್ಧ ಹೋರಾಟ ಇಡೀ ದೇಶಕ್ಕೆ ಮುನ್ನುಡಿ ಆಯಿತು. ಇದರಿಂದ ಅಮಾಯಕರ, ಮಠ ಮಾನ್ಯಗಳ ಮತ್ತು ಸರ್ಕಾರಿ ಆಸ್ತಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.ನಗರದಲ್ಲಿ ಕಳೆದ ಏಳು ವರ್ಷಗಳಲ್ಲಿ ಗುಣಮಟ್ಟದ ರಸ್ತೆಗಳು, ಚರಂಡಿ ನಿರ್ಮಾಣ, ಕಸ ವಿಲೇವಾರಿ ಹೀಗೆ ಪ್ರತಿಯೊಂದರಲ್ಲಿಯೂ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ನಗರದ ಸೌಂದರ್ಯಿಕರಣದ ಜೊತೆಗೆ ಆಸ್ತಿಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಗರದಲ್ಲಿ ಎಲ್ಲ ಬಡಾವಣೆ, ಕಾಲೋನಿಗಳಲ್ಲಿ ಹಂತ ಹಂತವಾಗಿ ರಸ್ತೆ, ಚರಂಡಿ ಅಭಿವೃದ್ಧಿಪಡಿಸಲಾಗಿದೆ. ಅಲ್ಪಸ್ವಲ್ಪ ಉಳಿದುಕೊಂಡಿದ್ದರೆ ಗಮನಕ್ಕೆ ತನ್ನಿ ಅಲ್ಲಿಯೂ ಮಾಡಿ ಮುಗಿಸಲಾಗುವುದು. ಅದೇ ರೀತಿ ಎಲ್ಲಿಯೂ ನೀರಿನ ಕೊರತೆ ಆಗದಂತೆ, ಎಲ್ಲಾ ಪ್ರದೇಶಗಳಿಗೂ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಕುಡಿಯುವ ನೀರಿನ ಯೋಜನೆ ಹಂತ-3ರ ಮಂಜೂರಾತಿಗಾಗಿ ಸರ್ಕಾರಕ್ಕೆ ₹750 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಕಟ್ಟ ಕಡೆಯ ಮನೆಗಳಿಗೂ ಸಮರ್ಪಕವಾಗಿ ನೀರು ಬರಲಿದೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಗಚ್ಚಿನಮನಿ, ಮುಖಂಡರಾದ ಎಸ್.ಎಲ್.ಇಂಗಳೇಶ್ವರ, ದಾದಾಸಾಹೇಬ ಬಾಗಾಯತ, ಅನೀಲ ಪತ್ತೇಪೂರ, ವಿಠ್ಠಲ ಜರತಾಪ, ಬಿ.ಡಿ.ಕಡಕೋಳ, ಸುನೀಲ ಚವ್ಹಾಣ, ಶ್ರೀರಾಮ ದೇಶಪಾಂಡೆ, ಸಂತೋಷ ಪಾಟೀಲ ಉಪಸ್ಥಿತರಿದ್ದರು.