ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿನ ರೈತರು ದ್ರಾಕ್ಷಿ, ಗುಲಾಬಿ ಹಾಗೂ ತರಕಾರಿ ಬೆಳೆಯುತ್ತಿರುತ್ತಾರೆ. ತರಕಾರಿಗಳಿಗೆ ಹೆಚ್ಚಿನ ಪ್ರಮಾಣದ ರಾಸಾಯನಿಕ ಗೊಬ್ಬರ ನೀಡುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಬೆಳೆಗೆ ರೋಗ ಮತ್ತು ಕೀಟಗಳ ಹಾವಳಿ ಹೆಚ್ಚಾಗುತ್ತಿದೆ. ಮಣ್ಣಿನ ಆರೋಗ್ಯ ಹದಗೆಡುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಕಳವಳ ವ್ಯಕ್ತಪಡಿಸಿದರು.
ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ ಮಾತನಾಡಿ, 2025ರ ವಿಶ್ವ ಮಣ್ಣು ದಿನಾಚರಣೆಯ ಘೋಷವಾಕ್ಯ ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು ಎಂಬುದಾಗಿದ್ದು, ವಿಶ್ವ ಮಣ್ಣು ದಿನವನ್ನು ಪ್ರಪಂಚದಾದ್ಯಂತ ಡಿಸೆಂಬರ್ 5ರಂದು
ಥೈಲ್ಯಾಂಡ್ ರಾಜ ಅಬ್ದುಲ್ ದೇಶ್ ಭೂಮಿ ಬೋಲ್ ಇವರ ಹುಟ್ಟುಹಬ್ಬದ ಸ್ಮರಣಾರ್ಥ ಆಚರಿಸಲಾಗುತ್ತದೆ ಎಂದರು.ಮಣ್ಣು ನಾಗರಿಕತೆಯ ಮೂಲ. ಹಲವಾರು ಜೀವಿಗಳ ಆವಾಸಸ್ಥಾನ. ಮಣ್ಣಿನಿಂದ ಬೆಳೆಗಳಿಗೆ ಪೋಷಕಾಂಶಗಳು ದೊರಕುತ್ತವೆ. ಮನುಷ್ಯನ ಆರೋಗ್ಯ ಮಣ್ಣಿನ ಆರೋಗ್ಯದ ಮೇಲೆ ನೇರವಾಗಿ ಅವಲಂಬನೆ ಆಗಿರುತ್ತದೆ. ಕೃಷಿಯಲ್ಲಿ ಅಧಿಕ ರಾಸಾಯನಿಕ ಗೊಬ್ಬರಗಳ ಬಳಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು, ಬೆಳೆಗಳಲ್ಲಿ ಹೆಚ್ಚಿನ ನೀರಿನ ಬೇಡಿಕೆ ಹಾಗೂ ಹಳ್ಳ, ಕೆರೆ ಮತ್ತು ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು, ಮಣ್ಣಿನ ಫಲವತ್ತತೆ ಕ್ಷೀಣಿಸಲು ಹಲ ಕಾರಣಗಳು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ರೇಣುಕಾ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪಂಕಜ ಮತ್ತಿತರ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.
ಫೋಟೋ-5ಕೆಡಿಬಿಪಿ3- ಬೆಂ.ಗ್ರಾ ಜಿಲ್ಲಾ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ನಡೆಯಿತು.