ಕನ್ನಡಪ್ರಭ ವಾರ್ತೆ ಮಂಡ್ಯ
ಚದುರಂಗ ಭಾರತದ ಪುರಾತನ ಕಾಲದ ಆಟವಾಗಿದೆ. ಬುದ್ಧಿಶಕ್ತಿಗೆ ಚುರುಕು ನೀಡುವ ಈ ಆಟ ಸಾಕಷ್ಟು ಕುತೂಹಲವನ್ನು ಕಾಯ್ದುಕೊಂಡಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಹೇಳಿದರು.ನಗರದಲ್ಲಿರುವ ವಕೀಲರ ಸಂಘದ ಆವಣದಲ್ಲಿ ಎಚ್.ಹೊಂಬೇಗೌಡ ಸ್ಮಾರಕ ಅಡ್ವೋಕೇಟ್ಸ್ ಅಸೋಸಿಯೇಷನ್ ರಿಕ್ರಿಯೇಷನ್ ಸಂಸ್ಥೆ, ರಾಜ್ಯ ಷಟಲ್ ಬ್ಯಾಡ್ಮಿಂಟನ್ ಅಸೋಸಿಯೋಷನ್ ಮತ್ತು ಜಿಲ್ಲಾ ಚೆಸ್ ಅಸೋಸಿಯೇಷನ್, ಇಂಗಳೆ ಫೌಂಡೇಷನ್ ಇವರು ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿ ಮತ್ತು ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ನವೀಕರಣ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
೧೫ ವರ್ಷಕ್ಕಿಂತ ಒಳಗಿನ ಮಕ್ಕಳು ಚೆಸ್ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ, ಚದುರಂಗ ಆಟದಲ್ಲಿ ಪರಿಣಿತಿಯನ್ನು ಹೊಂದಿ ಸಾಧನೆ ಮಾಡಲಿ, ಓದಿನೊಂದಿಗೆ ಬುದ್ಧಿಶಕ್ತಿ ಹೆಚ್ಚಿಸುವ ಚದುರಂಗದಂತಹ ಕ್ರೀಡೆಗಳು ಅತ್ಯವಶ್ಯಕ ಎಂದು ನುಡಿದರು.ಜೀವನವು ಕೂಡ ಚದುರಂಗ ಆಟದಂತೆ ಸಾಗುತ್ತದೆ, ವಿದ್ಯಾರ್ಥಿಗಳು ಚದುರಂಗ ಆಟದಲ್ಲಿ ವಿಜಯಸಾಧಿಸಿ ಉತ್ತಮ ಸಾಧನೆಯೊಂದಿಗೆ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲಿ ಎಂದು ಆಶಿಸಿದರು.
ಹೈಕೋರ್ಟ್ ವಕೀಲ ಎಂ.ಬಿ.ಹರಿಪ್ರಸಾದ್, ಚೆಸ್ ಪಂದ್ಯ ಇದು ಮೈಂಡ್ ಗೇಮ್, ದೈಹಿಕ ಶ್ರಮವಿಲ್ಲ. ಏಕಾಗ್ರತೆ ಮತ್ತು ಆಲೋಚನೆಯ ಕ್ರೀಡೆಯಾಗಿದೆ, ಮಾನಸಿಕ ಒತ್ತಡ ನಿವಾರಣೆಗೂ ಈ ಚೆಸ್ ಪಂದ್ಯವನ್ನು ಕಲಿಯಬಹುದು ಎಂದರು.ಮುಂದಿನ ದಿನಗಳಲ್ಲಿ ಅಧ್ಯಕ್ಷರ ಸಹಕಾರದೊಂದಿಗೆ ರಾಷ್ಟಮಟ್ಟದ ಚೆಸ್ ಪಂದ್ಯ ನಡೆಯಬೇಕು. ಅದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ೫೦ವರ್ಷ ವಕೀಲ ವೃತ್ತಿ ಪೂರೈಸಿದ ಹಿರಿಯ ವಕೀಲರನ್ನು ಗಣ್ಯರು ಸನ್ಮಾನಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಚೆಸ್ ಪಟುಗಳು ಸ್ಪರ್ಧೆಯಲ್ಲಿ.ಭಾಗವಹಿಸಿ ವಿಜೇತರಾದರು.ಕಾರ್ಯಕ್ರಮದಲ್ಲಿ ಎಚ್.ಹೊಂಬೇಗೌಡ ಸ್ಮಾರಕ ಸಂಸ್ಥೆ ಅಧ್ಯಕ್ಷ ಸಿ.ಎಲ್.ಶಿವಕುಮಾರ್, ಬ್ಯಾಡ್ಮಿಂಟನ್ ಸಂಸ್ಥೆ ನಿರ್ದೇಶಕ ಅನಿಲ್ಕುಮಾರ್, ಮನೋಹರ್, ರಾಯಲ್ ಚೆಸ್ ಅಕಾಡೆಮಿ ಅಧ್ಯಕ್ಷ ಚೇತನ್, ಹಿರಿಯ ವಕೀಲ ಬಸವಯ್ಯ, ದೊರೆಸ್ವಾಮಿ ಮತ್ತಿತರರಿದ್ದರು.