ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜಲಮೂಲಗಳು ಅಪಾಯಕಾರಿ ತ್ಯಾಜ್ಯದ ಪರಿಣಾಮ ಸಂಪೂರ್ಣ ಮಲಿನಗೊಂಡಿರುವ ಹಿನ್ನೆಲೆ ಗ್ರಾಮಗಳಿಗೆ 3ನೇ ಹಂತದ ಶುದ್ದೀಕರಣ ಮಾಡಿದ ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಇಲ್ಲಿನ ತಾಲೂಕು ಕಚೇರಿ ಮುಂದೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂಕ್ಷರಣಾ ಸಮಿತಿ ನೇತೃತ್ವದಲ್ಲಿ 3 ದಿನಗಳಿಂದ ನಡೆಯುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಶನಿವಾರ ಮಧ್ಯಾಹ್ನ ಕೊನೆಗೊಂಡಿದೆ.
ಸಚಿವರ ನೇತೃತ್ವದಲ್ಲಿ ಸಿಎಂ ಭೇಟಿ:
ಶನಿವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಡಾ.ಟಿ.ಎಚ್.ಆಂಜನಪ್ಪ, ಮುಖಂಡರಾದ ಆದಿತ್ಯ ನಾಗೇಶ್, ಟಿ.ಜಿ.ಮಂಜುನಾಥ್, ವೆಂಕಟೇಶ್ ಅಪ್ಪಿ, ರಾಮಕೃಷ್ಣಯ್ಯ ಸೇರಿದಂತೆ ಹಲವರು ಬೆಂಗಳೂರಿನ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.ಘಟಕ ಸ್ಥಾಪನೆ ಕುರಿತು ಈವರೆಗೆ ನಡೆದಿರುವ ಹೋರಾಟ ಹಾಗೂ ಪ್ರಕ್ರಿಯೆಗಳ ಬಗ್ಗೆ ವಿವರಿಸಲಾಯಿತು. ಅಹವಾಲು ಆಲಿಸಿದ ಸಿದ್ದರಾಮಯ್ಯ, ಈ ಬಗ್ಗೆ ನಾಳೆಯೇ ಸಭೆ ನಡೆಸುವುದಾಗಿ ಭರವಸೆ ನೀಡಿ ಹೋರಾಟವನ್ನು ಕೈಬಿಡುವಂತೆ ಸೂಚಿಸಿದರು.
ಸತ್ಯಾಗ್ರಹಿಗಳು ಎಳನೀರು ಕುಡಿದು ಸ್ಥಗಿತ:ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದ ಹೋರಾಟಗಾರರಿಗೆ ತಹಸೀಲ್ದಾರ್ ಮಲ್ಲಪ್ಪ, ಸತ್ಯಾಗ್ರಹನಿರತರಿಗೆ ಎಳನೀರು ನೀಡಿದರು. ಈ ಮೂಲಕ ಉಪವಾಸ ಸತ್ಯಾಗ್ರಹ ಸ್ಥಗಿತಗೊಂಡಿತು. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈ ಗ್ರಾಮಗಳ ಜನರ ಕುಡಿಯುವ ನೀರಿನ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಮಾಡಬಾರದು. ತಮ್ಮ ಬೇಡಿಕೆಯಾದ 3ನೇ ಹಂತದ ಶುದ್ದೀಕರಣ ಘಟಕ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಬೇಕು. ಮತ್ತು ಕಾಲಮಿತಿಯಲ್ಲಿ ಮುಕ್ತಾಯಗೊಂಡು ವ್ಯವಸ್ಥಿತ ನೀರು ಪೂರೈಕೆ ಮಾಡಬೇಕು. ಮಲಿನಗೊಂಡಿರುವ ಜಲಮೂಲಗಳ ಪುನಶ್ಚೇತನಕ್ಕೆ ವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಸಂಸ್ಕರಣೆ ಮಾಡಿದ ಬಳಿಕವಷ್ಟೇ ಜಲಮೂಲಗಳಿಗೆ ಹರಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಹೋರಾಟಗಾರರು ಮುಂದಿಟ್ಟರು.
24ಕೆಡಿಬಿಪಿ3-ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ನಿಯೋಗ ಮತ್ತಿತರ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.