ಬೆಟ್ಟಗೆರೆ ಗ್ರಾಮದಲ್ಲಿ ತ್ರಿಪುರ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕನ್ನಡಪ್ರಭ ವಾರ್ತೆ,ಮೂಡಿಗೆರೆ

ಜನರ ಪ್ರಬಲ ವಿರೋಧವಿದ್ದರೂ ಪಶ್ಚಿಮಘಟ್ಟದ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ 7ನೇ ಬಾರಿಗೆ ಕರಡು ಅಧಿಸೂಚನೆ ಮೂಲಕ ಅದೇ ಪ್ರಸ್ತಾವನೆ ಮುಂದಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಈ ಅಧಿಸೂಚನೆ ರದ್ದುಪಡಿಸದಿದ್ದರೆ ಬೃಹತ್‌ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಟ್ಟಗೆರೆಯಲ್ಲಿ ನಡೆದ ಬೆಟ್ಟಗೆರೆ, ತ್ರಿಪುರ, ಬಕ್ಕಿ, ಕೋವಿಲೆ ಹಾಗೂ ಹಳಿಕೆ ಗ್ರಾಮಸ್ಥರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಪಶ್ಚಿಮಘಟ್ಟದ ವಾಸ್ತವ ಪರಿಸ್ಥಿತಿ ಅರಿಯದೆ ಕೇವಲ ಉಪಗ್ರಹ ಚಿತ್ರಗಳ ಆಧಾರದ ಮೇಲೆ ನಿರ್ಧಾರ ಸರಿಯಲ್ಲ ಎಂದರು.

ಕೇಂದ್ರ ಸರ್ಕಾರ ಉಪಗ್ರಹ ಸಮೀಕ್ಷೆ ಕೈಬಿಟ್ಟು ಸ್ಥಳ ಪರಿಶೀಲನೆ ನಡೆಸಿ ಕರಡು ಅಧಿಸೂಚನೆ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ವಿಸ್ತರಣೆಯಾದರೆ ಕೃಷಿ ಚಟುವಟಿಕೆ ಮೇಲೂ ನಿರ್ಬಂಧದ ಆತಂಕ ರೈತರನ್ನು ಕಾಡುತ್ತಿದೆ. ಕಾಫಿ, ಅಡಕೆ, ಬಾಳೆ, ಮೆಣಸು ವಿವಿಧ ಬೆಳೆಗಳನ್ನು ಅವಲಂಬಿಸಿ ಬದುಕುತ್ತಿರುವ ಸಾವಿರಾರು ಕುಟುಂಬಗಳಿಗೆ ಇದು ನೇರ ಹೊಡೆತ ಎಂದರು.ಉಪವಲಯ ಅರಣ್ಯಾಧಿಕಾರಿ ರಂಜಿತ್ ಮಾತನಾಡಿ ಬಾಳೂರು ಹಾಗೂ ಸಾರಗೋಡು ವ್ಯಾಪ್ತಿಯಲ್ಲಿ ವಿಶಾಲ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ, ಕಾಡುಕೋಣ ಸೇರಿದಂತೆ ವಿವಿಧ ವನ್ಯಜೀವಿಗಳಿವೆ. ವನ್ಯಜೀವಿ–ಮಾನವ ಸಂಘರ್ಷ ನಿಯಂತ್ರಣಕ್ಕೆ ಅಗತ್ಯ ಕ್ರಮ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಸರ್ಕಾರದಿಂದ ಆದೇಶ ಬಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಉಪವಲಯ ಅರಣ್ಯಾಧಿಕಾರಿ ಬಸವರಾಜ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್, ಬೆಟ್ಟಗೆರೆ, ತ್ರಿಪುರ ಗ್ರಾಪಂ ಆಡಳಿತಾಧಿಕಾರಿ ಸಾಧಿಕಾ ಬಾನು, ಪಿಡಿಒಗಳಾದ ಪುನರ್ವ, ಎಚ್.ಎನ್. ಮಹೇಶ್, ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ್, ಮಾಜಿ ಜಿಪಂ ಸದಸ್ಯ ಬಿ.ಆರ್. ಸುಬ್ಬಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.