ಸಾಮಾಜಿಕ,ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ 2 ನೇ ಸ್ಥಾನ: ಎಚ್.ಎಸ್.ಕೀರ್ತನಾ

KannadaprabhaNewsNetwork |  
Published : Oct 24, 2025, 01:00 AM IST
ನರಸಿಂಹರಾಜಪುರ ತಾಲೂಕಿನ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನ ಅವರು ಮಕ್ಕಳಿಗೆ ಶೂಗಳನ್ನು ವಿತರಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ 2 ನೇ ಸ್ಥಾನಕ್ಕೆ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ತಿಳಿಸಿದರು.

- ಮತ್ತೀಮರ ದಿವ್ಯ ಕಾರುಣ್ಯ ಆನಂದಾಶ್ರಮ, ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ 2 ನೇ ಸ್ಥಾನಕ್ಕೆ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ತಿಳಿಸಿದರು.

ಗುರುವಾರ ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶೌಚಾಲಯ, ಬಿಸಿಯೂಟ, ಆಟದ ಮೈದಾನ, ಶಾಲಾ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ರಾಜ್ಯದಲ್ಲೇ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನಕ್ಕೆ ಬಂದಿತ್ತು. ಈಗ ಶೇ. 98 ರಷ್ಟು ಸಮೀಕ್ಷೆ ಮುಗಿಸಿದ್ದೇವೆ. 10 ಸಾವಿರ ಜನರು ಮಾತ್ರ ಬಿಟ್ಟು ಹೋಗಿದ್ದಾರೆ. ಗ್ರಾಮ ಪಂಚಾಯಿತಿಯವರು ಪತ್ತೆ ಹಚ್ಚಿ ಸಮೀಕ್ಷೆ ಮಾಡುತ್ತಾರೆ. ಶೇ.100 ರಷ್ಟು ಸಾಧನೆ ಮಾಡುತ್ತೇವೆ ಎಂದರು.

ಈ ಶಾಲೆಯಲ್ಲಿ ವಿಶಾಲವಾದ ಮೈದಾನ ಇದೆ. ಹಣ್ಣಿನ ಗಿಡ, ತರಕಾರಿ ಬೆಳೆಯಬಹುದು.ಅರ್ಧ ಎಕರೆ ಅಡಕೆ ತೋಟ ಬೆಳೆದಿದ್ದಾರೆ. ಇದನ್ನು ನರೇಗ ಯೋಜನೆಯಡಿ ಸೇರಿಸಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್‌ ಕುಮಾರ್ ಗೆ ಸೂಚಿಸಿದರು.

ಗುಬ್ಬಿಗಾ ಶಾಲೆ ಮುಖ್ಯೋಪಾಧ್ಯಾಯ ಅಶೋಕ್ ಅವರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ, ಶಾಲೆ ಕಾರಿಡಾರ್ ಕಿತ್ತು ಹೋಗಿದ್ದು ಮಕ್ಕಳು ಓಡಾಡಲು ತೊಂದರೆಯಾಗಿದೆ. ಹೊಸದಾಗಿ ಟೈಲ್ಸ್ ಹಾಕಲು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಸಿಇಒ ಕೀರ್ತನ ಶಾಲೆ ಕೊಠಡಿಗೆ ಹೋಗಿ ಮಕ್ಕಳೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು.

-- ಬಾಕ್ಸ್--

ಶಾಲೆ ಮಕ್ಕಳು ಆಟದ ಜೊತೆಗೆ ಓದುವ ಬಗ್ಗೆಯೂ ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್. ಕೀರ್ತನ ಮಕ್ಕಳಿಗೆ ಸಲಹೆ ನೀಡಿದರು. ಗುಬ್ಬಿಗಾ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ಕಾರ ಮಕ್ಕಳಿಗೆ ನೀಡಿದ ಶೂಗಳನ್ನು ವಿತರಣೆ ವೇಳೆ ಮಾತನಾಡಿದರು.

ಮಕ್ಕಳು ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಜ್ಞಾನ ಸಂಪತ್ತು ಹೆಚ್ಚಾಗುತ್ತದೆ. ಜ್ಞಾಪಕ ಶಕ್ತಿಯೂ ವೃದ್ಧಿಸಲಿದೆ.ಪ್ರತಿ ದಿನ ಶಾಲೆಗೆ ತಪ್ಪದೆ ಬರಬೇಕು. ನಿಮ್ಮ ಶಾಲೆಯಲ್ಲಿ ಉತ್ತಮ ಬಿಸಿ ಯೂಟ ತಯಾರಿಕರು, ಉತ್ತಮ ಶಿಕ್ಷಕರಿದ್ದಾರೆ. ಎಲ್ಲರೂ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಶಾಲೆಯ ಎಸ್‌.ಡಿಎಂಸಿ ಯವರು, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಒಂದು ತಂಡದಂತೆ ಕೆಲಸ ಮಾಡುತ್ತಿದ್ದಾರೆ. ನೆರವು ನೀಡಿದ ದಾನಿಗಳಿಗೂ ಅಭಿನಂದಿಸುತ್ತೇನೆ. ಮುಂದೆ ಜಿಲ್ಲಾ ಪಂಚಾಯಿತಿಯಿಂದ ಗುಬ್ಬಿಗಾ ಶಾಲೆಗೆ ಎಲ್ಲಾ ನೆರವು ನೀಡುತ್ತೇನೆ. ಶಾಲೆ ಕಾರಿಡಾರ್ ಗೆ ಬೇಕಾದ ಟೈಲ್ಸ್ ಗಳನ್ನು ಹಾಕಿಸಲು ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಎಸ್‌.ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯ ದರ್ಶಿ ಗೌರವ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್‌ ಕುಮಾರ್, ಶಾಲೆ ಮುಖ್ಯೋಪಾಧ್ಯಾಯ ಅಶೋಕ್, ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ನಾಯ್ಕ್, ಪಿಡಿಒ ಸೀಮಾ, ತಾಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಕಾರ್ಯ ನಿರ್ವಹಣಾಧಿಕಾರಿ ಮನೀಶ್, ಸಿಡಿಪಿಒ ವಿರೇಶ್, ಎಂಜಿನಿಯರ್ ಸಾಗರ್ ಮತ್ತಿತರರು ಇದ್ದರು.

-- ಬಾಕ್ಸ್ --

ಮತ್ತೀಮರ ಸಮೀಪದ ಕಾರುಣ್ಯ ಆನಂದಾಶ್ರಮಕ್ಕೂ ಗುರುವಾರ ಬೆಳಿಗ್ಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಆಶ್ರಮದಲ್ಲಿ 65 ಜನ ಅನಾಥರು, ವಿಕಲ ಚೇತನರು, ಬುದ್ದಿ ಮಾಂದ್ಯರು ಇದ್ದು ಅವರಿಗೆ ಆಧಾರ್ ಕಾರ್ಡು, ಓಟಿನ ಕಾರ್ಡು, ಯುಡಿಐಡಿ, ಕಾರ್ಡು ಇಲ್ಲದೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳು ಬಂದಿದ್ದರಿಂದ ಪರಿಶೀಲನೆ ನಡೆಸಿ ಆಧಾರ್ ಮಾಡಿಸಲು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ 35 ಜನರಿಗೆ ಆಧಾರ್ ಆಗಿದ್ದು ಉಳಿದವರಿಗೆ ಮುಂದಿನ 2 ವಾರದಲ್ಲಿ ಮಾಡಿಸುತ್ತೇವೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಮಾಡಿಕೊಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಇಲ್ಲಿನವರಿಗೆ ಶವ ಸಂಸ್ಕಾರಕ್ಕೆ ಜಾಗ ಇಲ್ಲವಾಗಿದೆ. ಯಾರಾದರೂ ಸತ್ತರೆ ಶವ ಸಂಸ್ಕಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ವಿಷಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ತಾಲೂಕು ಪಂಚಾಯಿತಿ ಇಒ ನವೀನ್ ಕುಮಾರ್‌ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ದಿವ್ಯ ಕಾರುಣ್ಯ ಆನಂದಾಶ್ರಮದ ಗುರುಗಳಾದ ಆನಂದಸ್ವಾಮಿ, ಲಿಸ್ಸಿ, ಜಿಪಂ ಉಪ ಕಾರ್ಯದರ್ಶಿ ಗೌರವ್, ಸಿಡಿಪಿಒ ವೀರೇಶ್, ತಾಲೂಕು ಪಂಚಾಯಿತಿ ಇಒ ನವೀನ್ ಕುಮಾರ್ ಮತ್ತಿತರ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.20ರಿಂದ ಕರಾವಳಿ ಉತ್ಸವ: 6 ಬೀಚ್‍ಗಳಲ್ಲಿ ಕಾರ್ಯಕ್ರಮ
ರೈತರಿಗೆ ಭರವಸೆ ಮೂಡಿಸಿದ ಚಳಿ: ತೋಟಗಾರಿಕೆಗೆ ಅನುಕೂಲ