ಸೋಮರಡ್ಡಿ ಅಳವಂಡಿ ಕೊಪ್ಪಳ
ಇನ್ನು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮಗಳಿಗೂ ಪ್ಯಾನ್ ಇಲ್ಲ. ಅಷ್ಟೇ ಯಾಕೆ ವಾರ್ಡ್ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳ ಪಾಡು ಹೇಳತೀರದು.
ಹೀಗಾಗಿ, ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಗಳಿಂದ ಗುಣಮುಖರಾಗಲು ದಾಖಲಾಗಿರುವ ಕಂದಮ್ಮ ಮತ್ತು ರೋಗಿಗಳು ಅಕ್ಷರಶಃ ಬೇಯುತ್ತಿದ್ದಾರೆ.ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ತಾಪಮಾನ 39-40 ಆಸುಪಾಸು ಇದೆ. ಹೀಗಾಗಿ ಸಾಮಾನ್ಯರೇ ಈ ಝಳಕ್ಕೆ ಚಡಪಡಿಸುತ್ತಿದ್ದಾರೆ. ಅಂಥದ್ದರಲ್ಲಿ ನಾನಾ ರೋಗದಿಂದ ಬಲಳುತ್ತಿರುವ ಕಂದಮ್ಮ ಚಿಕಿತ್ಸೆಗಾಗಿ ಕೊಪ್ಪಳ ಕಿಮ್ಸ್ (ಮೆಡಿಕಲ್ ಕಾಲೇಜು ಬೋಧಕ ಆಸ್ಪತ್ರೆ)ಯಲ್ಲಿ ದಾಖಲಾಗಿದ್ದರೆ ಐಸಿಯು ಕೊಠಡಿಯಲ್ಲಿನ ಎಸಿ ಕೆಟ್ಟು ಹೋಗಿದೆ. ಹೀಗಾಗಿ, ಕೇವಲ 1 ಪ್ಯಾನ್ ಹಾಕಿದ್ದಾರೆ. ಇದರಿಂದ ಐಸಿಯುನಲ್ಲಿರುವ ಮಕ್ಕಳಿಗೆ ಗಾಳಿಯೂ ಬಾರದೆ ರೋದಿಸುತ್ತಿವೆ. ಐಸಿಯುನಲ್ಲಿರುವ ಮಕ್ಕಳಿಗೆ ವಿಶೇಷ ನಿಗಾ ಬೇಕು. ಆದರೆ, ಕನಿಷ್ಠ ತಂಪಾದ ವಾತಾವರಣವೂ ಇಲ್ಲದೆ ಹೇಗೆ ತಾನೇ ಆ ಮಕ್ಕಳು ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯ ಎನ್ನುವುದು ಪಾಲಕರ ಅಂಬೋಣ.
ಅಷ್ಟೇ ಅಲ್ಲ, ಅಲ್ಲಿ ಕುಡಿವ ನೀರಿನ ಸಮಸ್ಯೆಯೂ ಇದೆ. ಹೀಗಾಗಿ, ಅನೇಕರು ಮನೆಯಿಂದ ಇಲ್ಲವೇ ಹೊರಗೆ ಹೋಟೆಲ್ ನಿಂದ ನೀರು ತಂದು ಕುಡಿಯುತ್ತಿದ್ದಾರೆ. ನೀರು ಸಹ ತಂದು ಕುಡಿಯಬೇಕೆಂದರೆ ಹೇಗೆ ಸಾರ್ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
ಕೊಪ್ಪಳ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳು ಚಿಕಿತ್ಸೆಗೆಂದು ಬಂದು ಗುಣಮುಖವಾಗುವ ಬದಲು ಮತ್ತಷ್ಟು ಸುಸ್ತಾಗುತ್ತಿದ್ದಾರೆ. ಅದರಲ್ಲೂ ಹಸುಗೂಸು ಪಡುವ ಯಾತನೆ ಆ ದೇವರಿಗೆ ಪ್ರೀತಿ.
ಎಸಿ ಸರ್ವಿಸ್ ಮಾಡಬೇಕಾಗಿದ್ದರಿಂದ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಸೂಚಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಕೊಪ್ಪಳ ಕಿಮ್ಸ್ ನಿರ್ದೇಶಕ ವಿಜಯಕುಮಾರ ಇಟಗಿ ತಿಳಿಸಿದ್ದಾರೆ.
ನಮ್ಮ ದೊಡ್ಡಮ್ಮನ ಮಗನನ್ನು ಆಡ್ಮಿಶನ್ ಮಾಡಿದ್ದೇವೆ. ಮಗು ಮೊದಲೇ ಸಮಸ್ಯೆಯಿಂದ ಬಳಲುತ್ತಿದೆ. ಅಂಥದ್ದರಲ್ಲಿ ಫ್ಯಾನ್ ಸಹ ಇಲ್ಲದಿರುವ ವಾರ್ಡ್ ನಲ್ಲಿ ಸಮಸ್ಯೆಯಾಯಿತು. ಹೀಗಾಗಿ ಮನೆಯಿಂದ ಫ್ಯಾನ್ ತಂದು ಹಾಕಿದ್ದೇವೆ ಎಂದು ರೋಗಿ ಸಂಬಂಧಿ ಕಿರಣ ತಿಳಿಸಿದ್ದಾರೆ.