ಮಕ್ಕಳು ದೇಶದ ಸಂಪತ್ತು: ಹಿರೇಮಠದ ಶ್ರೀಗಳು

KannadaprabhaNewsNetwork | Published : May 4, 2024 12:33 AM

ಸಾರಾಂಶ

ದಾಬಸ್‌ಪೇಟೆ: ಮಕ್ಕಳು ನಮ್ಮ ರಾಷ್ಟ್ರೀಯ ಸಂಪತ್ತು. ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ತುಮಕೂರಿನ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ದಾಬಸ್‌ಪೇಟೆ: ಮಕ್ಕಳು ನಮ್ಮ ರಾಷ್ಟ್ರೀಯ ಸಂಪತ್ತು. ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ತುಮಕೂರಿನ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಸೋಂಪುರ ಹೋಬಳಿಯ ಹಳೆನಿಜಗಲ್ ಬಳಿಯ ಹಿರೇಮಠದ ತಪೋವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಮಕ್ಕಳೇ ಈ ದೇಶದ ಸಂಪತ್ತು. ಅವರು ವೀರ, ಧೀರ, ಬುದ್ದಿವಂತರಾದರೆ ನಮ್ಮ ಮಂದಿರಗಳೂ ಸುರಕ್ಷಿತ. ನಮ್ಮ ಮಠಮಾನ್ಯಗಳೂ ಸುರಕ್ಷಿತ. ನಾವು ಕಟ್ಟಿ ಬೆಳೆಸಿದ ಸಂಸ್ಕೃತಿಯ ಸಂರಕ್ಷಕರು ಕೂಡ ಅವರೇ ಎಂದು ಹೇಳಿದರು.ಪೋಷಕರ ಪ್ರಯತ್ನ ತುಂಬ ಮುಖ್ಯ:

ಮಕ್ಕಳು ಕಲ್ಪವೃಕ್ಷವಾಗಬೇಕೆಂದರೆ ಅವರ ವಿಷಯದಲ್ಲಿನ ನಿಮ್ಮ ಸಂಕಲ್ಪ ಗಟ್ಟಿಯಾಗಿರಬೇಕು. ನಿಮ್ಮ ಮಕ್ಕಳು ಬರೀ ನಿಮ್ಮ ಆಸ್ತಿಯ ವಾರಸುದಾರರಾದರೆ ಸಾಲದು. ಅವರು ಈ ದೇಶದ ವಾರಸುದಾರರಾಗಬೇಕು. ಅವರು ಈ ದೇಶದ ಆಸ್ತಿಯಾಗಬೇಕು. ಮಕ್ಕಳು ನಮ್ಮ ದೇಶದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ರಾಯಭಾರಿಗಳಾಗಬೇಕು. ಈ ದಿಶೆಯಲ್ಲಿ ನಿಮ್ಮ ಯತ್ನ ಪ್ರಯತ್ನ ತುಂಬ ಮುಖ್ಯ ಎಂದು ತಿಳಿಸಿದರು.

ಶಿಬಿರಾಧಿಕಾರಿ ಶಾಂತಕುಮಾರಿ ಜಗದೀಶ್ ಮಾತನಾಡಿ, ಮಕ್ಕಳನ್ನು ಅತಿಯಾಗಿ ಮುದ್ದಿಸುವುದೂ ಅಪಾಯಕಾರಿ. ಹಾಗೆಯೇ, ಅವರ ಸುತ್ತ ಭದ್ರವಾದ ಕೋಟೆ ಕಟ್ಟಿ ಅವರನ್ನು ಅತಿಯಾಗಿ ಹೆದರಿಸುವುದು, ಬೆದರಿಸುವುದು ಮತ್ತು ನಿಯಂತ್ರಿಸುವುದೂ ಬೇಡ. ನಿಮ್ಮ ಮಕ್ಕಳೇ ನಿಮ್ಮ ಸ್ವರ್ಗ. ಅವರೇ ನಿಮ್ಮ ಕನಸಿನ ಕಲ್ಪವೃಕ್ಷ ಮತ್ತು ಕಾಮಧೇನು. ಅವರನ್ನು ಪ್ರೀತಿ ಮಮತೆಯಿಂದ ಬೆಳಸಿ ನಮ್ಮ ಸಂಸ್ಕೃತಿ, ಪರಂಪರೆ ಕಲಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ವೇದಘೋಷ:

ರಾಜ್ಯಮಟ್ಟದ ಈ ಮಕ್ಕಳ ಬೇಸಿಗೆ ಶಿಬಿರದಲ್ಲಿ 10 ಜಿಲ್ಲೆಗಳಿಂದ ಆಗಮಿಸಿದ್ದರು. 10ರಿಂದ 15 ವರ್ಷದ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರ ಸಮಾರೋಪ ಸಮಾರಂಭದಲ್ಲಿ ಮಕ್ಕಳು ವೇದಘೋಷ ಮಾಡಿದರು.

ಶಾಂತಕುಮಾರಿ ಜಗದೀಶ್ ಅವರ ಮಾಗದರ್ಶನದಲ್ಲಿ ಮಕ್ಕಳು ಸೂರ್ಯ ನಮಸ್ಕಾರ, ಪಿರಾಮಿಡ್ ಮತ್ತು ಯೋಗಗುಚ್ಚವನ್ನು ಮಾಡಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದರು. ಸಮಾರಂಭದ ಪ್ರಾರಂಭದಲ್ಲಿ 10 ವರ್ಷದ ಚಿಕ್ಕ ಬಾಲಕ ವಿಖ್ಯಾತ್ ವೀರಭದ್ರಸ್ವಾಮಿ ಛದ್ಮವೇಷವ ಧರಿಸಿ ವೀರಗಾಸೆ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಶಿಬಿರ ನಿರ್ವಾಹಕರಾದ ಪ್ರಮುಖ ಸುಹೃತ್, ಆರ್.ಉಮೇಶ್ ಮತ್ತಿತರರಿದ್ದರು. ಪೋಟೋ 3 :

ಸೋಂಪುರ ಹೋಬಳಿಯ ಹಳೆನಿಜಗಲ್ ಬಳಿಯ ಹಿರೇಮಠದ ತಪೋವನದಲ್ಲಿ ರಾಜ್ಯ ಮಟ್ಟದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ತುಮಕೂರಿನ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Share this article