ಕನ್ನಡಪ್ರಭ ವಾರ್ತೆ ಪಾಂಡವಪುರ
ಬೇಸಿಗೆ ರಜೆ ನಂತರ ತಾಲೂಕಿನಾದ್ಯಂತ ಬುಧವಾರದಿಂದ ಶಾಲೆಗಳು ಪುನರಾರಂಭವಾಗಿದ್ದರೂ ಶುಕ್ರವಾರ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವ ಆಚರಣೆ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಆರತಿ ಬೆಳಗಿ ಪುಷ್ಪವೃಷ್ಟಿ ಮಾಡಿ ನಗುಮುಖದಿಂದ ಸ್ವಾಗತಿಸಿಕೊಳ್ಳುವ ಮೂಲಕ ಶಾಲೆಗೆ ಮಕ್ಕಳನ್ನು ಶಿಕ್ಷಕರು ಬರಮಾಡಿಕೊಂಡರು.ಶಾಲೆ ಎದುರು ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸುವ ಮೂಲಕ ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದ ಸಿಬ್ಬಂದಿ ವರ್ಗ ಮಕ್ಕಳಿಗೆ ಸಿಹಿ ಊಟ ಉಣಬಡಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಈ ವೇಳೆ ಎಸ್ ಡಿಎಂಸಿ ಅಧ್ಯಕ್ಷ ಕೇಶವ ಹಾಗೂ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಮಂಜುನಾಥ್ ಮಕ್ಕಳ ತಲೆ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು ಎಸ್ಡಿಎಂಸಿ ಸದಸ್ಯ ಹೇಮಂತ್ ಕುಮಾರ್, ಶಿಕ್ಷಕರಾದ ಆರೋಕ್ಯಮೇರಿ, ರಾಜಲಕ್ಷ್ಮೀ, ಶಿವರತ್ನಮ್ಮ, ಶಿವಲಿಂಗಮ್ಮ, ಭವ್ಯ, ಸುಮಿತ್ರ, ಗಾಯತ್ರಿ, ಮೇರಿ ರೋಸ್ಲಿನ್, ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮ, ಅತಿಥಿ ಶಿಕ್ಷಕಿ ಸಿಂಧು ಇತರರಿದ್ದರು.
ಗುಲಾಬಿ ಹೂ ನೀಡಿ ಶಾಲೆಗೆ ಬಂದ ಮಕ್ಕಳಿಗೆ ಸ್ವಾಗತಮದ್ದೂರು:ರಜೆಯ ಮಜಾದಲ್ಲಿದ್ದ ಮಕ್ಕಳು ಶುಕ್ರವಾರ ಶಾಲೆಗೆ ಸಡಗರ ಸಂಭ್ರಮದಿಂದ ಆಗಮಿಸಿದ ವೇಳೆ ಶಿಕ್ಷಕರು ಗುಲಾಬಿ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಪಟ್ಟಣದ ಪೇಟೆಬೀದಿಯ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬಿಇಒ ಸಿ.ಎಚ್.ಕಾಳೀರಯ್ಯ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಶಾಲೆಗೆ ಬರಮಾಡಿಕೊಂಡರು. ಜತೆಗೆ ಇದೇ ವೇಳೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.ಬಿಇಒ ಸಿ.ಎಚ್.ಕಾಳೀರಯ್ಯ ಮಾತನಾಡಿ, ಶಾಲೆಗಳ ಪುನರಾರಂಭಕ್ಕೆ ಶಿಕ್ಷಣ ಇಲಾಕೆ ಸಕಲ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಂಡಿವೆ. ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಮಾಡಿರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಮುಖ್ಯ ಶಿಕ್ಷಕರಾದ ಬಸವಚಾರಿ, ಮಹದೇವಯ್ಯ, ಶಿಕ್ಷಕರಾದ ಜಿ.ಸಿ.ರಮೇಶ್, ಜ್ಯೋತಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸಂಗೀತಾ ಸೇರಿದಂತೆ ಇತರರು ಇದ್ದರು.