ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳಲ್ಲಿ ನಮ್ಮ ಇತಿಹಾಸ ಸಾರುವ ಸ್ಮಾರಕಗಳು, ನಮ್ಮ ಹಿಂದಿನ ಸಂಸ್ಕೃತಿಯ ಅರಿವು ಮೂಡಿಸಿ ಅವರಲ್ಲಿ ಸಂಸ್ಕಾರ ಬೆಳೆಸಲು ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ ಹೆಚ್ಚು ಸೂಕ್ತ ಎಂದು ವಿಷಯ ಪರಿವೀಕ್ಷಕ ಸಮೀವುಲ್ಲಾ ತಿಳಿಸಿದರು. ನಗರದ ಮೆಥೋಡಿಸ್ಟ್ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಪುರಾತನ ಸ್ಮಾರಕ, ಶಾಸನ
ಶಿಕ್ಷಣ ಸಂಯೋಜಕಿ ಹಾಗೂ ನೋಡಲ್ ಅಧಿಕಾರಿ ಲೇಖಾ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ಮಕ್ಕಳಲ್ಲಿ ಪ್ರಾಚ್ಯಪ್ರಜ್ಞೆಯ ಅರಿವನ್ನು ಹೆಚ್ಚಿಸುವ ಮೂಲಕ ಅವರಲ್ಲಿ ನಮ್ಮ ಪುರಾತನ ಸಂಸ್ಕೃತಿ, ಅಂದಿನ ಕಲೆ,ಸಾಹಿತ್ಯ ವೈಭವದ ಕುರಿತು ಜ್ಞಾನ ಹೆಚ್ಚಿಸುವ ಕೆಲಸ ಮಾಡುತ್ತಿದ್ದು, ಮಕ್ಕಳು ಇದರ ಪ್ರಯೋಜನ ಪಡೆಯಬೇಕು ಎಂದರು.ಸರ್ಕಾರ ಕರ್ನಾಟಕ ದರ್ಶನದ ಮೂಲಕ ಮಕ್ಕಳಿಗೆ ನಮ್ಮ ಪ್ರಾಚ್ಯ ಸ್ಮಾರಕಗಳ ಪರಿಚಯ ಮಾಡಿಕೊಡುತ್ತಿದೆ, ಇದರಿಂದಾಗಿ ಸಾಮಾನ್ಯ ಜ್ಞಾನ ವೃದ್ದಿಯ ಜತೆಗೆ ಹಿಂದಿನವರು ತಮ್ಮ ಬದುಕು ರೂಪಿಸಿಕೊಳ್ಳಲು ಅನುಸರಿಸುತ್ತಿದ್ದ ಕೌಶಲ್ಯಗಳ ಅರಿವು ಸಿಗುತ್ತದೆ. ವಿದ್ಯಾರ್ಥಿಗಳು ಸೋಲು,ಗೆಲುವು ಮುಖ್ಯವೆಂದು ಪರಿಗಣಿಸದೇ ಭಾಗವಹಿಸುವಿಕೆ ಮುಖ್ಯ ಮತ್ತು ಅದರಿಂದ ಜ್ಞಾನ ವೃದ್ಧಿಗೂ ಸಹಕಾರ ಎಂಬುದನ್ನು ಅರಿಯಬೇಕು ಎಂದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಪ್ರಾಚ್ಯಪ್ರಜ್ಞೆ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಮಾತನಾಡಿ, ತಾಲೂಕುಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದವರು ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟಕ್ಕೆ ಹೋಗಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ತಾಲ್ಲೂಕಿನ ಸಬರಮತಿ ಪ್ರೌಢಶಾಲೆ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿ ಬೆಗ್ಲಿಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಥಮ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಸಬರಮತಿ ಪ್ರೌಢಶಾಲೆ ಪ್ರಥಮ, ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮುದುವಾಡಿ ಪ್ರಥಮ ಸ್ಥಾನ ಪಡೆಯಿತು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮೆಥೋಡಿಸ್ಟ್ ಶಾಲೆಯ ಶಿಕ್ಷಕಿ ಮಂಜುಳಾ, ಶಿಕ್ಷಕರಾದ ಆನಂದ್ಕುಮಾರ್, ಗಂಗಾಧರಮೂರ್ತಿ, ಕಾಳಿದಾಸ ಸೇರಿದಂತೆ ತೀರ್ಪುಗಾರರು ಹಾಜರಿದ್ದರು.