ಹಳಿಯಾಳ: ಶೈಕ್ಷಣಿಕ ಫಲಿತಾಂಶದಲ್ಲಿ ನನ್ನ ಕ್ಷೇತ್ರದ ಮಕ್ಕಳು ಸಾಧನೆ ಮಾಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ರಾಜ್ಯ ಮಟ್ಟದಲ್ಲಿ ಗರಿಷ್ಠ ಅಂಕಗಳು ಉತ್ತಮ ಸಾಧನೆಗೈದವರಲ್ಲಿ ನನ್ನ ಕ್ಷೇತ್ರದ ಮಕ್ಕಳ ಹೆಸರಿರಬೇಕೆಂಬ ಆಸೆ ನನಗಿದೆ. ಈ ದಿಸೆಯಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ವಿಶೇಷ ತರಗತಿ, ಶಿಬಿರ, ಕಾರ್ಯಾಗಾರಗಳನ್ನು ನಡೆಸಿ ಅವರನ್ನು ಅಣಿಗೊಳಿಸಿರಿ ಎಂದರು.
ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣವು ಅತೀ ಅವಶ್ಯಕವಾಗಿದೆ. ನನ್ನ ಕ್ಷೇತ್ರದಲ್ಲಿನ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಬೇಕಾದ ಎಲ್ಲ ರೀತಿಯ ಸಹಕಾರ ಸೌಲಭ್ಯಗಳನ್ನು ನೀಡುತ್ತೇನೆ ಎಂದರು.ಎಲ್ಲ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು. ಶಿಕ್ಷಣದಿಂದ ಯಾವುದೇ ಮಗು ವಂಚಿತರಾಗಬಾರದು ಎಂಬ ಕಳಕಳಿ ನನಗಿದೆ. ಅದಕ್ಕಾಗಿ ಶಾಲಾ ಮಕ್ಕಳು ತಮ್ಮ ನೆರೆಹೊರೆಯಲ್ಲಿ ಯಾವುದಾದರೂ ಮಗು ಶಾಲೆಗೆ ಸೇರದಿದ್ದರೆ ನಿಮ್ಮ ಅಧ್ಯಾಪಕರ ಗಮನಕ್ಕೆ ತನ್ನಿ, ಹಾಗೆಯೇ ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಯಾವುದಾದರೂ ಮಗು ಶಿಕ್ಷಣದ ಸೌಲಭ್ಯದಿಂದ ವಂಚಿತರಾಗಿದ್ದರೆ ಅದನ್ನು ಶಿಕ್ಷಣ ಇಲಾಖೆಯ ಅಥವಾ ನನ್ನ ಕಚೇರಿಯ ಗಮನಕ್ಕೆ ತನ್ನಿ ಎಂದರು.
21ನೇ ಶತಮಾನವು ಜ್ಞಾನ ಮತ್ತು ಬುದ್ಧಿಮತ್ತೆಯ ಯುಗವಾಗಿದೆ. ಇಲ್ಲಿ ಬುದ್ಧಿವಂತರೇ ಕೌಶಲ್ಯವುಳ್ಳವರಿಗೆ ಮೊದಲ ಆದ್ಯತೆ. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಭರ್ತಿ ಮಾಡಬೇಕು. ಜತೆಗೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಬೇಕು ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಗೊಂದಲು ತೊಂದರೆಗಳಾಗಬಾರದೆಂದು ಹಾಗೂ ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದರೆ ಅವುಗಳ ದುರಸ್ತಿ ಕಾರ್ಯವನ್ನು ತಕ್ಷಣ ಮಾಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದೆನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಸ್ಥಳೀಯ ಮುಖಂಡರದಾದ ರಾಮಚಂದ್ರ ಬುರ್ಲಿ, ಅರ್ಜುನ ಭೋವಿ, ಬಿಇಒ ಪ್ರಮೋದ ಮಹಾಲೆ ಹಾಗೂ ಪ್ರೌಢಶಾಲೆಯ ಮುಖ್ಯೋಧ್ಯಾಪಕರು, ಸಿಬ್ಬಂದಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮಸ್ಥರು ಇದ್ದರು.