ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಸಂತೆ

KannadaprabhaNewsNetwork | Published : Nov 15, 2024 12:32 AM

ಸಾರಾಂಶ

ಮಕ್ಕಳು ಮಾರಾಟ ಮಾಡುವ ಪರಿಯನ್ನು ಕಂಡು ಪೋಷಕರು, ಸಾರ್ವಜನಿಕರೆ ನಿಬ್ಬೆರಗಾಗುವಂತೆ ಮಾಡಿದರು. ಮಕ್ಕಳ ಜತೆಯಲ್ಲೂ ಪೋಷಕರು ಸಹ ಮಕ್ಕಳಿಗೆ ಸಹಕಾರ ನೀಡಿದರು. ಬೆಳಿಗ್ಗೆಯಿಂದ ಆರಂಭಗೊಂಡ ಮಕ್ಕಳ ಸಂತೆಯೂ ಸಂಜೆವರೆಗೂ ಸಹ ನಡೆಯಿತು. ಮಕ್ಕಳ ಸಂತೆಯಲ್ಲಿ ಪೋಷಕರು ಸೇರಿದಂತೆ ಹಲವು ಸಾರ್ವಜನಿಕರು ಭಾಗವಹಿಸಿ ಮಕ್ಕಳಿಂದ ತರಕಾರಿ, ಹಣ್ಣು ಖರೀಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ಮಕ್ಕಳ ಮಾರುಕಟ್ಟೆ (ಮಕ್ಕಳ ಸಂತೆ) ನಡೆಯಿತು.

ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಗೆ ಸಂಸ್ಥೆ ಕಾರ್‍ಯದರ್ಶಿ ಡಾ.ಜೆ.ಎಂ.ರಾಮಕೃಷ್ಣೇಗೌಡ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಸಿ.ಶಿವಪ್ಪ ಚಾಲನೆ ನೀಡಿದರು.

ಶಾಲೆಯ ಫ್ರೀ, ಎಲ್‌ಕೆಜಿಯಿಂದ 10ನೇ ತರಗತಿಯ ಹಲವು ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು. ಸಂತೆಯಲ್ಲಿ ಬಗೆಬಗೆಯ ಹಣ್ಣು-ತರಕಾರಿಗಳು, ಸೊಪ್ಪು, ಹೂ, ಪಾನಿಪುರಿ, ಗೋಲ್‌ಗೊಪ್ಪ, ಬಜ್ಜಿ, ಎಳನೀರು, ಸಾವಯವ ಬೆಲ್ಲ, ಅಪ್ಪಳ, ಮಜ್ಜಿಗೆ ಸೇರಿದಂತೆ ಸಿಹಿ ತಿನಿಸ್ಸುಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರಿಕ ಜ್ಞಾನ ಬೆಳೆಸಿಕೊಂಡರು.

ಹಳ್ಳಿ ಸಂತೆಗಳಲ್ಲಿ ರೈತರು, ಗ್ರಾಹಕರು ತರಕಾರಿಗಳನ್ನು ಮಾರಾಟ ಮಾಡುವ ಮಾದರಿಯಲ್ಲಿಯೇ ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ಹಣ್ಣು-ತರಕಾರಿ ಮಾರಾಟ ಮಾಡುವ ಮೂಲಕ ಎಲ್ಲರ ಗಮನಸೆಳೆದರು.

ಮಕ್ಕಳು ಮಾರಾಟ ಮಾಡುವ ಪರಿಯನ್ನು ಕಂಡು ಪೋಷಕರು, ಸಾರ್ವಜನಿಕರೆ ನಿಬ್ಬೆರಗಾಗುವಂತೆ ಮಾಡಿದರು. ಮಕ್ಕಳ ಜತೆಯಲ್ಲೂ ಪೋಷಕರು ಸಹ ಮಕ್ಕಳಿಗೆ ಸಹಕಾರ ನೀಡಿದರು. ಬೆಳಿಗ್ಗೆಯಿಂದ ಆರಂಭಗೊಂಡ ಮಕ್ಕಳ ಸಂತೆಯೂ ಸಂಜೆವರೆಗೂ ಸಹ ನಡೆಯಿತು. ಮಕ್ಕಳ ಸಂತೆಯಲ್ಲಿ ಪೋಷಕರು ಸೇರಿದಂತೆ ಹಲವು ಸಾರ್ವಜನಿಕರು ಭಾಗವಹಿಸಿ ಮಕ್ಕಳಿಂದ ತರಕಾರಿ, ಹಣ್ಣು ಖರೀಸಿದರು. ಹಳ್ಳಿ, ಗ್ರಾಮೀಣ ಸಂತೆಯನ್ನೇ ಮೀರಿಸುವಂತೆ ನಡೆಯಿತು.

ಸಂಸ್ಥೆ ಕಾರ್‍ಯದರ್ಶಿ ಡಾ.ಜೆ.ಎಂ. ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಮಾತ್ರ ನೀಡೋದಲ್ಲ. ಅದರ ಹೊರತಾಗಿ ಮಕ್ಕಳಲ್ಲಿ ವಿಶೇಷ ಚಟುವಟಿಕೆ, ಅಭ್ಯಾಸಗಳನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಬಿಜಿಎಸ್ ಶಾಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ಮಕ್ಕಳ ಸಂತೆ ಆಯೋಜಿಸುವ ಮೂಲಕ ಮಕ್ಕಳ ಶಿಕ್ಷಣದ ಜತೆಗೆ ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಂತೆಗಳಲ್ಲಿ ರೈತರು, ಕೃಷಿಕರು ಯಾವ ಮಾದರಿಯಲ್ಲಿ ಸಮವಸ್ತ್ರಗಳನ್ನು ಧರಿಸಿ ವ್ಯಾಪಾರ ಮಾಡುತ್ತಾರೋ ಅದೇ ವೇಷಭೂಷಣ ತೊಟ್ಟು ಮಕ್ಕಳು ಸಂತೆಯಲ್ಲಿ ಭಾಗವಹಿಸಿ ಮಾರಾಟ ಮಾಡಿದ್ದಾರೆ. ಮಕ್ಕಳ ಕೌಶಲ್ಯತೆ ನೋಡಿ ತುಂಬಾ ಖುಷಿಯಾಯಿತು ಎಂದರು.

ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಹಳ್ಳಿ ಸೊಗಡು, ಪರಿಸರ, ಜೀವನ, ವಹಿವಾಟುಗಳನ್ನು ಪರಿಚಹಿಸುವ ವಿಭಿನ್ನವಾದ ಕಾರ್‍ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಕ್ಕಳಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.

ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು ಮಾತನಾಡಿ, ಮಕ್ಕಳು ಓದುವ ಜತೆಗೆ ವ್ಯಾವಹಾರಿಕ, ವ್ಯಾಪಾರ ಜ್ಞಾನವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಡಾ.ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಮಕ್ಕಳ ಸಂತೆ ಕಾರ್‍ಯಕ್ರಮ ಆಯೋಜಿಸಿದ್ದಾರೆ ಎಂದರು.

ಮಕ್ಕಳು ತಮ್ಮ ಮನೆಯಂಗಳದಲ್ಲಿ ಬೆಳೆದಿರುವ ಹಣ್ಣು-ತರಕಾರಿ ಸೇರಿದಂತೆ ಸಿಹಿ ತಿಂಡಿ ತಿನ್ನಿಸುಗಳನ್ನು ಮಾರಾಟ ಮಾಡುವ ಮೂಲಕ ಯಾವ ಮಾದರಿಯಲ್ಲಿ ಲಾಭಗಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಕಾರ್‍ಯಕ್ರಮದ ಮೂಲಕ ತೋರ್ಪಡಿಸುವ ಕೆಲಸ ಮಾಡಿದ್ದಾರೆ ಎಂದರು.

ಈ ವೇಳೆ ಪುರಸಭೆ ಉಪಾಧ್ಯಕ್ಷ ಅಶೋಕ್, ಮುಖಂಡರಾದ ಅಶ್ವಥ್‌ಕುಮಾರೇಗೌಡ, ಎಚ್.ಎನ್.ಮಂಜುನಾಥ್, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಭಾಸ್ಕರ, ಕಿರಣ್, ಪ್ರಾಂಶುಪಾಲ ಮಹದೇವು, ಮುಖ್ಯಶಿಕ್ಷಕ ರಘು ಸೇರಿದಂತೆ ಶಿಕ್ಷಕ ವೃಂದವರು ಇದ್ದರು.

Share this article