ಮಕ್ಕಳು ಜಂಕ್ ಫುಡ್ ಸೇವನೆಯಿಂದ ಆರೋಗ್ಯದಲ್ಲಿ ವ್ಯತ್ಯಯ: ಡಾ.ಪ್ರಸನ್ನಕುಮಾರ್

KannadaprabhaNewsNetwork | Published : Apr 16, 2025 12:41 AM

ಸಾರಾಂಶ

ಜಂಕ್ ಫುಡ್‌ಗಳು ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಪೋಷಕರು ಮಕ್ಕಳಿಗೆ ಪೌಷ್ಟಿಕ ಆಹಾರದತ್ತ ಗಮನ ಹರಿಸಿ ಸೊಪ್ಪು ತರಕಾರಿಗಳನ್ನು ಹೆಚ್ಚು ನೀಡಬೇಕು. ಮಕ್ಕಳಿಗೆ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸುವುದರ ಜತೆಗೆ ಉತ್ತಮ ವಾತವಾರಣದಲ್ಲಿ ಮಕ್ಕಳನ್ನು ಬೆಳಸಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಕ್ಕಳು ಜಂಕ್ ಫುಡ್ ಸೇವನೆಯಿಂದ ಆರೋಗ್ಯದಲ್ಲಿ ಅಸಮತೋಲನ ಉಂಟಾಗಲಿದೆ. ಪೋಷಕರು ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ನೀಡುವಂತೆ ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪ್ರಸನ್ನಕುಮಾರ್ ಸಲಹೆ ನೀಡಿದರು.

ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿ, ಜಂಕ್ ಫುಡ್‌ಗಳು ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಪೋಷಕರು ಮಕ್ಕಳಿಗೆ ಪೌಷ್ಟಿಕ ಆಹಾರದತ್ತ ಗಮನ ಹರಿಸಿ ಸೊಪ್ಪು ತರಕಾರಿಗಳನ್ನು ಹೆಚ್ಚು ನೀಡಬೇಕು ಎಂದರು.

ಮಕ್ಕಳಿಗೆ ಶಿಕ್ಷಕರು ಶಾಲೆಯಲ್ಲಿ ವಿದ್ಯೆ ಕಲಿಸಿದರೆ ಪೋಷಕರು ಮನೆಯಲ್ಲಿ ಅವರ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸುವುದರ ಜತೆಗೆ ಉತ್ತಮ ವಾತವಾರಣದಲ್ಲಿ ಮಕ್ಕಳನ್ನು ಬೆಳಸಬೇಕು ಎಂದರು.

ಇತ್ತೀಚಿಗೆ ಬರುತ್ತಿರುವ ರಾಸಾಯನಿಕ ಮಿಶ್ರಿತ ಆಹಾರ ಸೇವನೆಯಿಂದ ಚಿಕ್ಕ ಮಕ್ಕಳಿಗೆ ಕಾಯಿಲೆಗಳು ವ್ಯಾಪಿಸುತ್ತಿವೆ. ಇವುಗಳನ್ನು ತಡೆಗಟ್ಟಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಉಮಾ ದೇವರಾಜು ಮಾತನಾಡಿ, ಮಕ್ಕಳು ಶೇ.90 ಬುದ್ಧಿ ಬೆಳವಣಿಗೆ ಆಗುವುದು ಎರಡು ವರ್ಷದಿಂದ ಆರು ವರ್ಷದಲ್ಲಿ ಆ ಅವಧಿಯಲ್ಲಿ ಉನ್ನತ ಚಟುವಟಿಕೆ ನೀಡುವುದರಿಂದ ಅವರ ಬುದ್ಧಿಮಟ್ಟವು ಉತ್ತಮವಾಗಿ ಮೂಡಿಬರುತ್ತದೆ ಎಂದರು.

ಮಕ್ಕಳು ಘಟಿಕೋತ್ಸವದಲ್ಲಿ ವಿವಿಧ ರೀತಿಯ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು. ಈ ವೇಳೆ ಹಿರಿಯ ವಿದ್ಯಾರ್ಥಿಗಳು ವಿವಿಧ ರೀತಿಯ ಮನರಂಜನೆ ನೀಡಿ ರಂಜಿಸಿದರು.

ಕಾರ್ಯಕ್ರಮದಲ್ಲಿ ಶಾಲೆ ಪ್ರಾಂಶುಪಾಲೆ ಸಿ.ರಮ್ಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶಾಲೆ ಆಡಳಿತಾಧಿಕಾರಿ ಎಚ್.ಪಿ.ಪ್ರತಿಮಾ, ಶಿಕ್ಷಕರಾದ ಜಿ.ಬಿ.ನಂದಾ, ಕೆ.ರಶ್ಮಿ, ಉಮೇಜೋಯಾ, ಹನ್ನ, ಜೆನ್ನಿ, ಸಿಂಧೂ, ಸುರಭಿ, ಭವ್ಯ, ಅಭಿಲಾಷ ಸೇರಿದಂತೆ ಮತ್ತಿತರಿದ್ದರು.

Share this article