ರಾಮನಗರ: ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ಕೇಳಿ ಪಡೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಪ್ರಮೋದ್ಕುಮಾರ್ ಹೇಳಿದರು.
ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಮಕ್ಕಳ ಹಾಗೂ ವಿಶೇಷಚೇತನರ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಅಧ್ಯಕ್ಷತೆಯಲ್ಲಿಯೇ ಮಕ್ಕಳಿಗಾಗಿಯೇ ನಡೆಸುತ್ತಿರುವ ಗ್ರಾಮ ಸಭೆಯಲ್ಲಿ ಮಕ್ಕಳು ತಮಗಿರುವ ಸಮಸ್ಯೆಗಳ ಬಗ್ಗೆ ನಿರ್ಭೀತಿಯಿಂದ ಮುಕ್ತವಾಗಿ ತಿಳಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆ-ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಮಕ್ಕಳ ಮತ್ತು ವಿಕಲಚೇತನರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದ ಅವರು, ಸಮಗ್ರ ಅಭಿವೃದ್ದಿಗಾಗಿ ಗ್ರಾಪಂ ನಲ್ಲಿ ಸಿಗುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣ 2009ರ ಹಕ್ಕು ಕಾಯ್ದೆ ಮತ್ತು 2013ರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಗಳ ಮಹತ್ವದ ಬಗ್ಗೆ ತಿಳಿಸಿ, ಮಕ್ಕಳಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ರಾಜೇಗೌಡ ಮಾತನಾಡಿ, ಸರ್ಕಾರದ ಸುತ್ತೋಲೆಯಂತೆ ಪ್ರತಿವರ್ಷ ಗ್ರಾಪಂ ವತಿಯಿಂದ ವಿಶೇಷ ಗ್ರಾಮ ಸಭೆಗಳನ್ನು ನಡೆಸುತ್ತಿದ್ದು, ಮಕ್ಕಳು ಬಾಲ್ಯದಿಂದಲೇ ಸಾಮಾಜಿಕ ವಿಷಯಗಳು ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಮಕ್ಕಳಲ್ಲಿ ಆತ್ಮಸ್ಥೈರ್ಯ ವೃದ್ಧಿಯಾಗಲು ಗ್ರಾಮಸಭೆಗಳು ಪೂರಕವಾಗಿವೆ. ಇದರ ಜೊತೆಗೆ ವಿಶೇಷಚೇತನರಿಗೆ ಸರ್ಕಾರದಿಂದ ಬರುವ ಅನುದಾನದಲ್ಲಿ ಶೇ.5ರಷ್ಟು ಮೀಸಲಿರಿಸಿದ್ದು, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತಿದೆ. ಎಲ್ಲರೂ ಸಹ ಇಂತಹ ಸಭೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಪಡೆಯಿರಿ ಎಂದು ಮನವಿ ಮಾಡಿದರು.
ಕು.ಪುಣ್ಯಶ್ರೀ ಮತ್ತು ಚೇತನ್ಗೌಡ ಅವರುಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಕೆ.ಎನ್, ಉಪಾದ್ಯಕೆ ಜಯಮ್ಮ, ಸದಸ್ಯರಾದ ನರಸಿಂಹಮೂರ್ತಿ, ಕೃಷ್ಣೇಗೌಡ, ಮಂಜುನಾಥ್, ಸತ್ಯನಾರಾಯಣ್, ನಂದಕುಮಾರ್, ಶೋಭಾ, ಗೌರಮ್ಮ, ನಾಗರತ್ನಮ್ಮ, ಗೋವಿಂದರಾಜು, ಶಾಲಾ ಮಕ್ಕಳು, ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.18ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಮಕ್ಕಳ ಹಾಗೂ ವಿಶೇಷಚೇತನರ ವಿಶೇಷ ಗ್ರಾಮಸಭೆಯನ್ನು ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಪ್ರಮೋದ್ಕುಮಾರ್ ಉದ್ಘಾಟಿಸಿದರು.