ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಮಕ್ಕಳು ಶಿಕ್ಷಣದ ಜೊತೆಗೆ ಸಾವಯವ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಸಾವಯವ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರವನ್ನು ಉಳಿಸಬೇಕು ಎಂದು ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಕ್ಕಳಿಗೆ ಕಿವಿಮಾತು ಹೇಳಿದರು.ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಸಾವಯವ ಕೃಷಿಯ ಮಹತ್ವ ಮತ್ತು ಕೃಷಿ ವಿಧಾನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲಿ ನಿರ್ಮಾಣ ಮಾಡಿರುವ (ನಮ್ಮ ಸಾವಯವ ತೋಟ) ಭುವನೇಶ್ವರಿ ವನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾವಯವ ಕೃಷಿ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕವಾಗಿ ಅರಿವು ಮೂಡಿಸುತ್ತಿರುವ ಬಾಲು ಶಾಲಾ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದರು.
ಹವಾಮಾನ ಬದಲಾವಣೆ ಬಗ್ಗೆ ಸರ್ಕಾರ, ಬುದ್ದಿಜೀವಿಗಳು, ನಾವೆಲ್ಲರೂ ಮಾತನಾಡುತ್ತೇವೆ. ಆದರೆ ಅದರಿಂದ ಬಹಳ ತೊಂದರೆ, ಅನಾಹುತ, ನಷ್ಟವಾಗುವುದು ರೈತರಿಗೆ ಮತ್ತು ಕೂಲಿ ಕಾರ್ಮಿಕರು, ತಳ ಭಾಗದ ಜನರಿಗೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ನಾವು ಮಾತನಾಡಿದರಷ್ಟೇ ಸಾಲದು, ಪರಿಹಾರವನ್ನು ಕಂಡುಕೊಂಡು ಬದಲಾವಣೆ ತರಬೇಕು ಎಂದರು.ಹವಾಮಾನ ಬದಲಾವಣೆಯಿಂದ ಆಗುವ ನಕಾರಾತ್ಮಕ ಬೆಳವಣಿಗೆಯನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಮತ್ತು ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜನೆಯನ್ನು ತಯಾರಿಸಿ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಾರಿಯ ಬಜೆಟ್ನಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕನ್ನು ಸಂಪೂರ್ಣ ಸಾವಯವ ಕೃಷಿ ಫಾರಂ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಬಾಲು ಶಾಲೆಯ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಹ್ಮಣ್ಯಂ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾವಯವ ಕೃಷಿ ಉತ್ಪನ್ನಗಳ ಬೆಳೆ ಮತ್ತು ಬಳಕೆ ಬಗ್ಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಇಂಡಿಯನ್ ಸ್ಕೂಲ್ನ ಕಿರಣ್ ಭಾಸ್ಕರ್ ಅವರ ಸಹಕರದೊಂದಿಗೆ ನಮ್ಮ ಶಾಲೆಯಲ್ಲಿ ಕಳೆದ ೭ ವರ್ಷಗಳಿಂದ ಸಾವಯವ ಕೃಷಿ ತೋಟ ನಿರ್ಮಾಣ ಮಾಡಿ, ಸಾವಯವ ತೋಟದ ತರಗತಿಗೆ ಅಗತ್ಯವಾದ ಪಠ್ಯಕ್ರಮವನ್ನು ಒದಗಿಸಿ ಶಾಲಾ ಮಕ್ಕಳಿಗೆ ಸಾವಯವ ಕೃಷಿ ತೋಟಗಾರಿಕೆ ತರಗತಿಗಳನ್ನು ನಿರ್ವಹಣೆ ಮಾಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಾಲು ಸಮೂಹ ಸಂಸ್ಥೆಯ ಟ್ರಸ್ಟಿ ಕವಿತಾ ಬಾಲಸುಬ್ರಹ್ಮಣ್ಯಂ, ಇಂಡಿಯನ್ ಫಾರ್ಮ್ಸ್ ಸಂಸ್ಥಾಪಕ ಅಧ್ಯಕ್ಷ ಕಿರಣ್ ಭಾಸ್ಕರ್, ಮುಖ್ಯ ಶಿಕ್ಷಕಿ ಎಸ್.ಕವಿತಾ, ಆಡಳಿತಾಧಿಕಾರಿ ಮೇಹಾರ್ ಸುಲ್ತಾನ್,ರೈತ ಸಂಘದ ಉಪಾಧ್ಯಕ್ಷ ಕೆ.ಮಲ್ಲಯ್ಯ, ಮುಖಂಡರಾದ ಕೃಷ್ಣಪ್ಪ, ಮರೀಗೌಡ ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ನಗರದ ಗಾಂಧಿ ಭವನದಿಂದ ಶಾಲಾ ಮಕ್ಕಳು ಮತ್ತು ಶಿಕ್ಷಕರು ಹಾಗೂ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.