
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಬಿರದಲ್ಲಿ ಕಲಿತದ್ದನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಶಿಬಿರ ಆಯೋಜನೆ ಮಾಡಿದವರಿಗೆ ಹಾಗೂ ತರಬೇತು ನೀಡಿದವರ ಶ್ರಮಕ್ಕೆ ಬೆಲೆ ಸಿಗಲಿದೆ. ಶಿಸ್ತನ್ನು ರೂಢಿಸಿಕೊಳ್ಳುವುದರೊಂದಿಗೆ ಮಕ್ಕಳು ಈಗಿನಿಂದಲೇ ದೇಶ ಭಕ್ತರಾಗಿ ದೇಶಕ್ಕಾಗಿ ಬದುಕಬೇಕೆಂದು ಹೇಳಿದರು.ಅರಣ್ಯ ಇಲಾಖಾ ನಿವೃತ್ತ ಅಧಿಕಾರಿ ಕಿರುದಂಡ ಗಣೇಶ್ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಅತಿ ಮುಖ್ಯ, ಶಿಬಿರದಲ್ಲಿ ಎಲ್ಲರೂ ಅದನ್ನೇ ಕಲಿಸುವದು. ಯಾವದೇ ಕೆಲಸದಲ್ಲಾಗಲೀ ಶಿಸ್ತು ಮುಖ್ಯ. ಈ ಶಿಬಿರದಲ್ಲಿ ಪ್ರತಿ ವರ್ಷ 100ರಿಂದ 125ರಷ್ಟು ಮಕ್ಕಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಜಾನಪದ ಪರಿಷತ್ ಸದಸ್ಯ ಬಿ.ಜಿ.ಅನಂತಶಯನ ಮಾತನಾಡಿ, ಮಕ್ಕಳು ಸಂಪಾದಿಸಿದ ಜ್ಞಾನ, ಅರಿವನ್ನು ಸಂರಕ್ಷಣೆ ಮಾಡಿಕೊಂಡು ಭವಿಷ್ಯದ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕು. ಪ್ರತಿ ದಿನ, ರಾತ್ರಿ ನಾವು ಏನು ಮಾಡಬಹುದೆಂಬುದರ ಬಗ್ಗೆ ಚಿಂತಿಸಬೇಕು. ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ವಾಂಡರ್ಸ್ ಹಿರಿಯ ಆಟಗಾರ ಕೋಟೇರ ನಾಣಯ್ಯ, ಶಿಬಿರದ ಸಂಚಾಲಕ ಬಾಬು ಸೊಮಯ್ಯ ಇದ್ದರು. ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಹಾಕಿ, ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ತರಬೇತುದಾರರಾದ ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ನಾಟೋಳಂಡ ಸೊಮಯ್ಯ, ಕರವಂಡ ಕಿರಣ್, ಲೋಕೇಶ್ ನಾಯ್ಡು, ಬಿ.ಎಸ್. ತಿಲಕ್, ಕಾವ್ಯ ಸೋಮಯ್ಯ, ಜನ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಕಲಿತ ಮಕ್ಕಳು ಯೋಗ ಪ್ರದರ್ಶನ ಮಾಡಿದರು. ಮಕ್ಕಳು ಹಾಗೂ ಪೋಷಕರು ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಯೋಗ ಗುರು ಕೆ.ಕೆ. ಮಹೇಶ್ ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್ ನಿರ್ವಹಿಸಿದರು.