ಬುದ್ಧಿಶಕ್ತಿ ಹೆಚ್ಚಿಸುವ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಬೇಕು: ಡಾ. ಮೀರಾ ಶಿವಲಿಂಗಯ್ಯ

KannadaprabhaNewsNetwork |  
Published : Jan 03, 2025, 12:33 AM IST
2ಕೆಎಂಎನ್ ಡಿ24 | Kannada Prabha

ಸಾರಾಂಶ

ಪೋಷಕರು ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವ ಚೆಸ್, ಅಬಾಕಸ್, ಕೈ ಬರಹದಂತಹ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಿಪಿಸಬೇಕಿದೆ. ವೈಜ್ಞಾನಿಕ ಮನೋಭಾವದ ಜೊತೆಗೆ ಮಾನವೀಯ ಮೌಲ್ಯ ತಿಳಿಸುವ ಅಗತ್ಯತೆ ಇದೆ. ಚದುರಂಗದಾಟ (ಚೆಸ್)ದಲ್ಲಿ ಭಾರತ ಎರಡು ವಿಶ್ವ ಚೆಸ್ ಚಾಂಪಿಯನ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಹ ಸಾಧಕರನ್ನು ಪ್ರತಿಯೊಬ್ಬರೂ ರೋಲ್ ಮಾಡೆಲ್ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೊಬೈಲ್‌ನಿಂದ ಮಕ್ಕಳು ದೂರವಿದ್ದು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಪ್ರಾಯಪಟ್ಟರು.

ನಗರದ ನೂರಡಿ ರಸ್ತೆಯ ಅರುವಿ ಟ್ರಸ್ಟ್, ವಿನೂಸ್ ಅಕಾಡೆಮಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಇತ್ತೀಚೆಗೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳು ಬೀರುತ್ತಿವೆ ಎಂದು ಎಚ್ಚರಿಸಿದರು.

ಪೋಷಕರು ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವ ಚೆಸ್, ಅಬಾಕಸ್, ಕೈ ಬರಹದಂತಹ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಿಪಿಸಬೇಕಿದೆ. ವೈಜ್ಞಾನಿಕ ಮನೋಭಾವದ ಜೊತೆಗೆ ಮಾನವೀಯ ಮೌಲ್ಯ ತಿಳಿಸುವ ಅಗತ್ಯತೆ ಇದೆ ಎಂದರು.

ಚದುರಂಗದಾಟ (ಚೆಸ್)ದಲ್ಲಿ ಭಾರತ ಎರಡು ವಿಶ್ವ ಚೆಸ್ ಚಾಂಪಿಯನ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಹ ಸಾಧಕರನ್ನು ಪ್ರತಿಯೊಬ್ಬರೂ ರೋಲ್ ಮಾಡೆಲ್ ಮಾಡಿಕೊಳ್ಳಬೇಕು. ಅವರ ಹಾದಿಯಲ್ಲಿ ನಡೆದಾಗ ದೇಶಕ್ಕೆ ಕೀರ್ತಿ ತಂದಂತಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಮಾತನಾಡಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಕಲಾವಿದ ವೈರಮುಡಿ, ಅರುವಿ ಟ್ರಸ್ಟ್ ಅಧ್ಯಕ್ಷೆ ಅರುಣ ಈಶ್ವರ್, ಸಾಹಿತಿ ಕೊತ್ತತ್ತಿ ರಾಜು, ಗಾಯಕರಾದ ಸಂತೆಕಸಲಗೆರೆ ಬಸವರಾಜ್, ಹನಿಯಂಬಾಡಿ ಶೇಖರ್, ಅರುಣ ಕೆಂಪರಾಜು, ಹಾಜರಿದ್ದರು.

5ರಂದು ಪ್ರಾಂತೀಯ ಸಮ್ಮೇಳನ: ಅಧ್ಯಕ್ಷೆ ನೀನಾ ಪಟೇಲ್

ಮಂಡ್ಯ:

ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲೆ 268, ಎಸ್‌ನ ಪ್ರಾಂತ್ಯ-01ರ ಪ್ರಾಂತೀಯ ಸಮ್ಮೇಳನವನ್ನು ಜ.5ರಂದು ಬೆಳಗ್ಗೆ 10.30ಕ್ಕೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂತ್ಯ-01ರ ಅಧ್ಯಕ್ಷ ನೀನಾ ಪಟೇಲ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕಿಗೆ ಹಾಸ್ಯ ದಿವ್ಯೌಷದ ಎಂಬ ವಿಷಯದೊಂದಿಗೆ ನಡೆಯುತ್ತಿರುವ ಸಮ್ಮೇಳನವನ್ನು ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಉದ್ಘಾಟಿಸುವರು. ವಿಷಯದ ಕುರಿತು ಮಿಮಿಕ್ರಿ ಕಲಾವಿದ ಮಿಮಿಕ್ರಿ ಗೋಪಿ ಪ್ರಧಾನ ಭಾಷಣ ಮಾಡುವರು ಎಂದರು.

ಕಾರ್ಯಕ್ರಮದ ಅಂತಾರಾಷ್ಟ್ರೀಯ ಅಲೈಯನ್ಸ್ ನಿರ್ದೇಶಕ ನಾಗರಾಜು ವಿ.ಭೈರಿ ವಿಶೇಷ ಆಹ್ವಾನಿತರಾಗಿ, ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಅಂತಾರಾಷ್ಟ್ರೀಯ ನಿರ್ದೇಶಕರಾದ ಜಿ.ಪಿ.ದಿವಾಕರ್, ಕೆ.ಎಂ.ಮುನಿಯಪ್ಪ, ಅಜಂತ ರಂಗಸ್ವಾಮಿ, ಉಪ ರಾಜ್ಯಪಾಲರಾದ ಎಚ್.ಮಾದೇಗೌಡ, ಕೆ.ಆರ್.ಶಶಿಧರ್ ಈಚಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಸಂಪುಟ ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್, ಪಿಆರ್‌ಒ ಅಪ್ಪಾಜಿ, ಎಸ್.ಜೆ.ಮಂಜುನಾಥ್, ರತ್ನಮ್ಮ, ಪ್ರಾಂತ್ಯ -02ರ ಅಧ್ಯಕ್ಷೆ ವಸಂತಮ್ಮ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಸಮ್ಮೇಳನ ಉದ್ಘಾಟನೆಗೂ ಮುನ್ನ ಬೆಳಗ್ಗೆ 9 ಗಂಟೆಗೆ ಪ್ರಾಂತ್ಯ-01ರ ಪದಾಧಿಕಾರಿಗಳಿಂದ ಬ್ಯಾನರ್ ಪ್ರದರ್ಶನ, 10 ಗಂಟೆಗೆ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಸಂಪುಟ ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್, ರತ್ನಮ್ಮ, ಎಸ್.ಜೆ.ಮಂಜುನಾಥ್, ಎಚ್.ಪಿ.ದಯಾನಂದ್, ಎಂ.ಲೋಕೇಶ್, ಪ್ರಮಿಳಾ ಕುಮಾರಿ ಇದ್ದರು.

7 ರಂದು ಸಾಧಕರು, ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆ: ಪ್ರತಾಪ್

ಮಂಡ್ಯ:

ಜಿಲ್ಲಾ ಸವಿತ ಸಮಾಜ ಸಂಘದಿಂದ ಜ.7ರಂದು ಶಾಸಕ ಪಿ.ರವಿಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಪ್ರತಿಭಾವಂತ ಮಕ್ಕಳಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಅಭಿಮಾನಿ ಜಿ.ಬಿ.ಲೋಕೇಶ್ ಗಣಿಗ ಅವರು ಸಂಘದ ಪದಾಧಿಕಾರಿಗಳೊಂದಿಗೆ ಅಂದು ಮಧ್ಯಾಹ್ನ 2.30ಕ್ಕೆ ನಗರದ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚಿನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಮತ್ತು ಸವಿತಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಬಿ.ರಾಮಕೃಷ್ಣ ಅತಿಥಿಗಳಾಗಿ ಭಾಗವಹಿಸುವರು ಎಂದು ವಿವರಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ ಅಭಿನಂದನೆ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು. ಸಂಘದ ನೂತನ ಅಧ್ಯಕ್ಷರಾಗಿ ಆರ್.ಜಯರಾಮ್ ಆಯ್ಕೆಗೊಂಡಿರುವುದಾಗಿ ತಿಳಿಸಿದರು.

ಇದೇ ವೇಳೆ ಸವಿತಾ ಸಮಾಜದ ನಗರ ಸಮಿತಿಯ ವತಿಯಿಂದ 2025ರ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಟಿ.ಎನ್.ನಾಗರಾಜು, ನಗರ ಅಧ್ಯಕ್ಷ ಸೋಮಣ್ಣ, ವೈರಮುಡಿ, ಕೊತ್ತತ್ತಿ ನಾಗಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ