ಅಕ್ಷರದ ಅಂಗಳದತ್ತ ಸಂಭ್ರಮದಿ ಹೆಜ್ಜೆಯಿಟ್ಟ ಚಿಣ್ಣರು; ಸರ್ಕಾರಿ ಶಾಲೆಗಳಲ್ಲಿ ಹಬ್ಬದ ಸಡಗರ

KannadaprabhaNewsNetwork |  
Published : May 30, 2025, 12:02 AM IST
ಬಳ್ಳಾರಿ ಸತ್ಯನಾರಾಯಣಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ನಾಗಮ್ಮಬಡಿ) ವಿದ್ಯಾರ್ಥಿಗಳು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದರು.  | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಶುರುಗೊಂಡಿದ್ದು, ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಗುರುವಾರ ಪುನರಾರಂಭಗೊಂಡವು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಶುರುಗೊಂಡಿದ್ದು, ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಗುರುವಾರ ಪುನರಾರಂಭಗೊಂಡವು.

ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಳ್ಳಲು ಶಾಲೆಗಳಲ್ಲಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಕೆಲವೆಡೆ ಶಿಕ್ಷಕರು ಹೂಗುಚ್ಛ ನೀಡಿ ವಿದ್ಯಾರ್ಥಿಗಳನ್ನು ಶಾಲೆಯ ಅಂಗಳಕ್ಕೆ ಬರ ಮಾಡಿಕೊಂಡರೆ, ಮತ್ತೆ ಕೆಲವೆಡೆ ಸಿಹಿತಿನಿಸಿ ನೀಡಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿಕೊಂಡರು.

ಎರಡು ತಿಂಗಳು ಬೇಸಿಗೆ ರಜೆಯ ಸಡಗರದಲ್ಲಿದ್ದ ವಿದ್ಯಾರ್ಥಿಗಳು ಭಾರದ ಮನಸ್ಸಿನಿಂದ ಶಾಲೆಯತ್ತ ಹೆಜ್ಜೆ ಹಾಕಿದರು. ಕೆಲ ಮಕ್ಕಳು ಉತ್ಸಾಹದಿಂದಲೇ ಗೆಳೆಯರೊಂದಿಗೆ ಶಾಲೆಯ ಕಡೆ ಮುಖವೊಡ್ಡಿದ ದೃಶ್ಯಗಳು ಕಂಡು ಬಂದವು.

ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಹಿರಿಯ, ಕಿರಿಯ ಹಾಗೂ ಪ್ರೌಢಶಾಲೆಗಳು 720 ಇದ್ದು, ಅನುದಾನಿತ 76, ಖಾಸಗಿ 439 ಹಾಗೂ ಇತರೆ 29 ಶಾಲೆಗಳು ಸೇರಿದಂತೆ ಒಟ್ಟು 1264 ಶಾಲೆಗಳ 2,80,140 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಶಾಲೆ ಶುರುದಿನವೇ ಬಟ್ಟೆ ಹಾಗೂ ಪುಸ್ತಕಗಳನ್ನು ನೀಡುವುದಾಗಿ ಶಿಕ್ಷಣ ಇಲಾಖೆ ತಿಳಿಸಿದ್ದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಹೆಚ್ಚಿನ ಸಂಖ್ಯೆಯ ಮಕ್ಕಳು ಮೊದಲ ದಿನವೇ ಶಾಲೆಗೆ ತೆರಳಿದರು. ಕೆಲ ಶಾಲೆಗಳಲ್ಲಿ ಮಕ್ಕಳು ಕಿಕ್ಕಿರಿದು ತುಂಬಿದ್ದರೆ, ಮತ್ತೆ ಕೆಲವೆಡೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರಿದ್ದರು. ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ತಾಲೂಕು ಮಟ್ಟದ ಶಿಕ್ಷಣ ಅಧಿಕಾರಿಗಳು ಹಾಗೂ ಮುಖ್ಯಗುರುಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳ ಮನೆಗೆ ತೆರಳಿದ್ದ ಶಿಕ್ಷಕರು, ಶಾಲೆ ಶುರು ದಿನವೇ ಮಕ್ಕಳನ್ನು ಶಾಲೆಗೆ ಕಳಿಸಿಕೊಡುವಂತೆ ಪೋಷಕರಲ್ಲಿ ಮನವಿ ಮಾಡಿದ್ದರು. ಹೀಗಾಗಿ ಬಹುತೇಕ ಶಾಲೆಗಳಲ್ಲಿ ಹಾಜರಾತಿ ಗಮನಾರ್ಹವಾಗಿತ್ತು.

ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ನಿಯಮ ಉಲ್ಲಂಘಿಸಿ ಸುಮಾರು 15 ದಿನಗಳ ಹಿಂದೆಯೇ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದ್ದು, ಖಾಸಗಿ ಶಾಲೆಗಳ ಬಳಿ ಶಾಲೆ ಪುನರ್ ಆರಂಭದ ಯಾವುದೇ ಸಡಗರಗಳು ಕಂಡು ಬರಲಿಲ್ಲ. ಎಂದಿನಂತೆ ವಿದ್ಯಾರ್ಥಿಗಳು ಆಟೋ, ಬಸ್ ಗಳಲ್ಲಿ ಶಾಲೆಗಳಿಗೆ ತೆರಳಿದರು.

ಪ್ರತಿವರ್ಷವೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನೀತಿ-ನಿಯಮ ಉಲ್ಲಂಘಿಸಿ ಶಾಲೆಗಳನ್ನು ಮೊದಲೇ ಆರಂಭಿಸಿದರೂ ಈವರೆಗೆ ಶಿಕ್ಷಣ ಇಲಾಖೆಯಿಂದ ಯಾವ ಶಾಲೆಗಳ ವಿರುದ್ಧ ಕ್ರಮ ಕೈಗೊಂಡ ಉದಾಹರಣೆಗಳು ಕಂಡು ಬಂದಿಲ್ಲ.ಪಠ್ಯ ಪುಸ್ತಕಗಳ ವಿತರಣೆ; ವಿದ್ಯಾರ್ಥಿಗಳ ಸಂಭ್ರಮ

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೈಕ್ಷಣಿಕ ವರ್ಷ ಶುರುಗೊಂಡ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಕಾರ್ಯ ಅನೇಕ ಶಾಲೆಗಳಲ್ಲಿ ಜರುಗಿದೆ. ವಿದ್ಯಾರ್ಥಿಗಳು ಪೋಷಕರೊಂದಿಗೆ ಆಗಮಿಸಿ ಪಠ್ಯಪುಸ್ತಕ ವಿತರಣೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಶಿಕ್ಷಕರು ಶಾಲೆಗೆ ಬಂದ ಮಕ್ಕಳಿಗೆ ಸಿಹಿ ವಿತರಣೆ ಜೊತೆಗೆ ಪಠ್ಯಪುಸ್ತಕಗಳನ್ನು ನೀಡಿ, ನಿತ್ಯವೂ ತಪ್ಪದೆ ಶಾಲೆಗೆ ಬರುವಂತೆ ಮನವೊಲಿಸಿದರು.

ಜಿಲ್ಲೆಯ ಐದು ತಾಲೂಕುಗಳಿಗೆ ಈಗಾಗಲೇ ಶೇ.82ರಷ್ಟು ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಸಮವಸ್ತ್ರ ಸರಬರಾಜು ಕಾರ್ಯ ಮುಂದುವರಿದಿದ್ದು ಈ ವಾರದಲ್ಲಿ ಎಲ್ಲ ಶಾಲೆಗಳಿಗೆ ತಲುಪಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.

ಶಾಲೆ ದಾಖಲಾತಿ ಪ್ರಕ್ರಿಯೆಗೆ ಗುರುವಾರದಿಂದಲೇ ಎಲ್ಲ ಶಾಲೆಗಳಲ್ಲಿ ಚಾಲನೆ ದೊರೆತಿದ್ದು ಹತ್ತು ದಿನಗಳ ಕಾಲ ಜಿಲ್ಲೆಯಲ್ಲಿ ದಾಖಲಾತಿ ಆಂದೋಲನ ನಡೆಯಲಿದೆ. ಪೋಷಕರ ಮನೆಗಳಿಗೆ ತೆರಳುವ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಕರ್ಯಗಳ ಕುರಿತು ಮನವರಿಕೆ ಮಾಡಲಿದ್ದಾರೆ. ಗುಣಮಟ್ಟದ ಶಿಕ್ಷಣ, ಉಚಿತ ಊಟ, ಸಮವಸ್ತ್ರ, ಪಠ್ಯಪುಸ್ತಕಗಳು ನೀಡುವಿಕೆ ಕುರಿತು ತಿಳಿಸಿಕೊಡುವರು. ದಾಖಲಾತಿ ಆಂದೋಲನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಮಕ್ಕಳನ್ನು ಶಾಲೆಗೆ ಕಳಿಸಿಕೊಡುವಂತೆ ಗ್ರಾಮ ಪಂಚಾಯಿತಿಗಳು ಡಂಗುರ ಸಾರಲಿವೆ. ಶಾಲೆಗಳು ಪುನರಾರಂಭ ಹಿನ್ನಲೆಯಲ್ಲಿ ಡಿಡಿಪಿಐ ಉಮಾದೇವಿ ಅವರು ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.118 ಕೊಠಡಿ ಶಿಥಿಲಾವಸ್ಥೆಯಲ್ಲಿ:

ಜಿಲ್ಲೆಯಲ್ಲಿ ಗುರುವಾರ ಸರ್ಕಾರಿ ಶಾಲೆಗಳು ಪುನಾರರಂಭದ ಸಂಭ್ರಮದ ನಡುವೆ ಶಿಥಿಲಗೊಂಡ ಶಾಲಾ ಕೋಣೆಗಳಿಂದಾಗಿ ಆಂತಕವೂ ಮೂಡಿದೆ. ಮಳೆಗಾಲ ಇರುವುದರಿಂದ ಈಗಾಗಲೇ ಭಾಗಶಃ ಶಿಥಿಲಗೊಂಡಿರುವ ಕಟ್ಟಡಗಳು ಕುಸಿತಗೊಳ್ಳುವ ಭೀತಿ ಮೂಡಿದೆ.

ಜಿಲ್ಲೆಯಲ್ಲಿ 118 ಶಿಥಿಲ ತರಗತಿ ಕೋಣೆಗಳು ಇದ್ದು ಅಪಾಯ ಹಿನ್ನಲೆಯಲ್ಲಿ ಮಕ್ಕಳ ಬೋಧನೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಉಮಾದೇವಿ ಕನ್ನಡಪ್ರಭಕ್ಕೆ ತಿಳಿಸಿದರು.

ಬಳ್ಳಾರಿ ತಾಲೂಕಿನಲ್ಲಿ 102 ಹಾಗೂ ಸಂಡೂರು ತಾಲೂಕಿನ 142 ಶಾಲಾ ಕೋಣೆಗಳ ನಿರ್ಮಾಣಕ್ಕೆ ಈಗಾಗಲೇ ಕೆಎಂಇಆರ್‌ಸಿಯಿಂದ ಹಣ ಬಿಡುಗಡೆಯಾಗಿದೆ. ಜಿಪಂ ಎಂಜಿನಿಯರಿಂಗ್ ವಿಭಾಗ ಕೆಲಸ ಶುರುಗೊಳಿಸಬೇಕಾಗಿದೆ ಎಂದರು.

ಸರ್ಕಾರಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಭರ್ಜರಿ ಡಿಮ್ಯಾಂಡ್:

ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶುರುಗೊಳಿಸಿರುವ ದ್ವಿಭಾಷಾ ಶಾಲೆಗಳು ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಎಲ್‌ಕೆಜಿ, ಯುಕೆಜಿ ವಿಭಾಗಕ್ಕೆ ಒಂದು ಶಾಲೆಗೆ 30 ವಿದ್ಯಾರ್ಥಿಗಳನ್ನು ಮಾತ್ರ ಪ್ರವೇಶ ಮಾಡಿಕೊಳ್ಳಲು ಅವಕಾಶವಿದ್ದು 50ರಿಂದ 70 ವಿದ್ಯಾರ್ಥಿಗಳು ಶಾಲೆಗೆ ದಾಖಲು ಮಾಡಿಕೊಳ್ಳುವಂತೆ ಕೋರಿಕೆ ಇಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು 119 ದ್ವಿಭಾಷಾ ಶಾಲೆಗಳು ಹಾಗೂ 119 ಎಲ್‌ಕೆಜಿ-ಯುಕೆಜಿ ವಿಭಾಗದ ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿಯೇ ಈ ವಿಭಾಗಗಳನ್ನು ಪ್ರತ್ಯೇಕಿಸಿ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ದ್ವಿಭಾಷಾ ಶಾಲೆಗಳು ಹಾಗೂ ಎಲ್‌ಕೆಜಿ-ಯುಕೆಜಿ ವಿಭಾಗಕ್ಕೆ ಪ್ರವೇಶ ಕೋರಿ

ಪೋಷಕರಿಂದ ಹೆಚ್ಚಿನ ಬೇಡಿಕೆಯಿದ್ದು, ಹೆಚ್ಚುವರಿ ಪ್ರವೇಶಾತಿಗೆ ಅನುಮತಿ ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಡಿಡಿಪಿಐ ಉಮಾದೇವಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ