ಗುಣಮಟ್ಟದ ಮೆಣಸಿನಕಾಯಿ ಸಸಿ ಬೆಳೆಸಿ ಮಾರಾಟ ಮಾಡಿ

KannadaprabhaNewsNetwork |  
Published : May 18, 2026, 03:30 AM IST
ಕುರುಗೋಡು 03 ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದ ಮೆಣಸಿನಕಾಯಿ ಬೆಳೆಗಾರರು ಮತ್ತು ಸಸಿ ನರ್ಸರಿ ಮಾಲೀಕರ ಸಭೆಯಲ್ಲಿ ತಹಶೀಲ್ದಾರ್ ನರಸಪ್ಪ ಮಾತನಾಡಿದರು | Kannada Prabha

ಸಾರಾಂಶ

ನರ್ಸರಿ ಮಾಲೀಕರು ನಡೆಸುವ ಚಟುವಟಿಕೆಗಳು ನಿಯಮ ಬದ್ಧವಾಗಿರಬೇಕು. ನರ್ಸರಿ ಜಾಗ ಗುತ್ತಿಗೆ ಪಡೆದಿದ್ದಲ್ಲಿ ನಿಯಮಾನುಸಾರ ಒಡಂಬಡಿಕೆ ಮಾಡಿಸಿಕೊಳ್ಳಬೇಕು.

ಕುರುಗೋಡು: ತಾಲೂಕಿನ ಮೆಣಸಿನಕಾಯಿ ಬೆಳೆಗಾರರ ಹಿತದೃಷ್ಟಿಯಿಂದ ದೃಢೀಕರಿಸಿದ ಬೀಜ ಬಳಸಿ ಮೆಣಸಿನಕಾಯಿ ಸಸಿ ಬೆಳೆಯಬೇಕು ಎಂದು ತಹಶೀಲ್ದಾರ್ ನರಸಪ್ಪ ನರ್ಸರಿ ಮಾಲೀಕರಿಗೆ ಸೂಚಿಸಿದರು.

ಇಲ್ಲಿನ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮೆಣಸಿನಕಾಯಿ ಬೆಳೆಗಾರರ ಮತ್ತು ನರ್ಸರಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ನರ್ಸರಿ ಮಾಲೀಕರು ನಡೆಸುವ ಚಟುವಟಿಕೆಗಳು ನಿಯಮ ಬದ್ಧವಾಗಿರಬೇಕು. ನರ್ಸರಿ ಜಾಗ ಗುತ್ತಿಗೆ ಪಡೆದಿದ್ದಲ್ಲಿ ನಿಯಮಾನುಸಾರ ಒಡಂಬಡಿಕೆ ಮಾಡಿಸಿಕೊಳ್ಳಬೇಕು. ನರ್ಸರಿ ಮುಂಭಾಗ ಹೆಸರಿನ ನಾಮಫಲಕದಲ್ಲಿ ಜಿಎಸ್‌ಟಿ ಸಂಖ್ಯೆ ಬರೆಸಿ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ನರ್ಸರಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಸಸಿ ಬೆಳೆಸಬೇಕು. ಬಳಸುವ ಬೀಜ ಮತ್ತು ಕ್ರಿಮಿನಾಶಕ ಕಂಪನಿಯ ಹೆಸರು, ರೈತರ ಹೇಳಿಕೆ ದಾಖಲಿಸುವ ಪುಸ್ತಕಗಳನ್ನು ನಿರ್ವಹಿಸಬೇಕು.

ಮಾರುಕಟ್ಟೆಯಲ್ಲಿ ಕೃತಕ ಮುಗ್ಗಟ್ಟು ಸೃಷ್ಟಿಸದೆ ಪ್ರತಿ ಸಸಿಗೆ ೫೦ ಪೈಸೆಯಂತೆ ದರ ನಿಗದಿಗೊಳಿಸಬೇಕು. ನಿಗಧಿತ ಬೆಲೆಗಿಂತ ಅಧಿಕ ಹಣ ಪಡೆದರೆ ಹಾಗೂ ನಿಯಮಗಳ ಪಾಲನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಂಕ್ರಪ್ಪ ಜೆ. ಮಾತನಾಡಿ, ಸಸಿಗಳನ್ನು ನರ್ಸರಿ ಮಾಲೀಕರು ಕೋಕೋಪಿಟ್ ಬಳಕೆ, ಟ್ರೇಗಳ ಕೆಳಗೆ ಪ್ಲಾಷ್ಟಿಕ್ ಶೀಟ್ ಹಾಸಿ ಬೇರುಗಳು ನೆಲದೊಳಗೆ ಹೋಗದಂತೆ ನೋಡಿಕೊಳ್ಳಬೇಕು. ನರ್ಸರಿಗಳಲ್ಲಿ ಕೀಟ ನಿರೋಧಕ ಬಲೆಗಳ ಬಳಕೆಯ ಮತ್ತು ಬೀಜೋಪಚಾರ ಕುರಿತು ವೈಜ್ಞಾನಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೆಣಸಿನಕಾಯಿ ಬೆಳೆಗಾರರು ಕಡ್ಡಾಯವಾಗಿ ಜಿ.ಎಸ್.ಟಿ ನೋಂದಾಯಿತ ನರ್ಸರಿಗಳಲ್ಲಿ ಮಾತ್ರ ಸಸಿಗಳನ್ನು ಖರೀದಿಸಬೇಕು. ಪಹಣಿಯಲ್ಲಿರುವ ರೈತ ಹೆಸರಿಗೆ ಹಣಪಾವತಿ ರಸೀದಿ ಪಡೆದು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದರು. ನರ್ಸರಿ ಮಾಲೀಕರು ತಾವು ಬಳಸಿದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ವಿವರಗಳನ್ನು ಕಡ್ಡಾಯವಾಗಿ ವಹಿಯಲ್ಲಿ ನಮೂದಿಸಬೇಕು. ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕ ಕುರಿತು ಮಾಹಿತಿ ವಹಿ ನಿರ್ವಹಿಸಬೇಕು. ನರ್ಸರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಇಲ್ಲವಾದರೆ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಕೆಲಸಕ್ಕೆ ಬಾಲಕಾರ್ಮಿಕರನ್ನು ನೇಮಿಸಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನರ್ಸರಿ ಮಾಲೀಕ ರಮೇಶ್ ಮಾತನಾಡಿ, ನರ್ಸರಿಗಳಲ್ಲಿ ಪರಿಕರಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಾರ್ಮಿಕರ ಕೂಲಿ ದುಪ್ಪಟ್ಟಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತತ್ತರಿಸಿದ್ದೇವೆ. ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಸಸಿಗಳ ರಕ್ಷಣೆಗೆ ಜನರೇಟರ್ ಬಳಸಿ ನೀರು ಪೂರೈಸಲಾಗುತ್ತಿದೆ. ರೈತರಿಗೂ ಭಾರವಾಗದಂತೆ, ಮನಗೂ ನಷ್ಟವಾಗದಂತೆ ನ್ಯಾಯಯುತ ದರ ನಿಗದಿಗೊಳಿಸಬೇಕು ಎಂದು ಮನವಿ ಮಾಡಿದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರ ತಜ್ಞ ಆನಂದ, ಕೀಟಶಾಸ್ತ್ರ ತಜ್ಞ ಗೋವಿಂದ ಅವರಿಂದ ನರ್ಸರಿ ಮಾಲೀಕರಿಗೆ ನರ್ಸರಿ ನಿರ್ವಹಣೆ ಕುರಿತು ಮಾಹಿತಿ ಮಾರ್ಗದರ್ಶನ ನೀಡಲಾಯಿತು.

ಜಂಟಿ ತೋಟಗಾರಿಕೆ ನಿರ್ದೇಶಕ ಶಶಿಕಾಂತ್ ಕೋಟಿ ಮನೆ ಮಾತನಾಡಿದರು.

ಸಹಾಯಕ ತೋಟಗಾರಿಕೆ ನಿರ್ದೇಶಕ ಪಿ.ಟಿ.ವಸಂತ್, ಸಹಾಯಕ ತೋಟಗಾರಿಕೆ ಅಧಿಕಾರಿ ರಾಘವೇಂದ್ರ ಮತ್ತು ಕಿರಣ್ ಎಚ್.ಚೌರದ್, ಪ್ರಾಂತ ರೈತ ಸಂಘದ ಅಧ್ಯಕ್ಷ ಗಾಳಿ ಬಸವರಾಜ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನಕೆರೆ ಗ್ರಾಮದಲ್ಲಿ 3 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ
ಡೆಂಘೀ, ಮಲೇರಿಯಾ ಮುಕ್ತ ಜಿಲ್ಲೆಯಾಗಲು ಶ್ರಮಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ