ಚೀನಾ ಎದುರಾದರೂ ಎದುರಿಸುವ ಶಕ್ತಿ ಮೋದಿ ನೇತೃತ್ವದ ಭಾರತಕ್ಕಿದೆ

KannadaprabhaNewsNetwork | Published : May 21, 2025 2:02 AM
ತೀರ್ಥಹಳ್ಳಿ: ಈ ಬಾರಿಯ ಭಾರತ-ಪಾಕ್ ನಡುವಿನ ಯುದ್ಧ ವಿಶೇಷವಾಗಿದ್ದು, ಅಣುಬಾಂಬ್ ಹೊಂದಿರುವ ಎರಡು ದೇಶಗಳ ನಡುವೆ ಜಗತ್ತಿಗೇ ಎಚ್ಚರಿಕೆ ನೀಡುವಂತೆ ನಡೆದ ಮೊದಲ ಯುದ್ಧವಾಗಿದೆ. ಒಂದೊಮ್ಮೆ ಚೀನಾ ಎದುರಾದರೂ ಸಮರ್ಥವಾಗಿ ಎದುರಿಸುವ ತಾಕತ್ತು ನರೇಂದ್ರ ಮೋದಿ ನೇತೃತ್ವದ ಭಾರತಕ್ಕಿದೆ ಎಂದು ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Follow Us

ತೀರ್ಥಹಳ್ಳಿ: ಈ ಬಾರಿಯ ಭಾರತ-ಪಾಕ್ ನಡುವಿನ ಯುದ್ಧ ವಿಶೇಷವಾಗಿದ್ದು, ಅಣುಬಾಂಬ್ ಹೊಂದಿರುವ ಎರಡು ದೇಶಗಳ ನಡುವೆ ಜಗತ್ತಿಗೇ ಎಚ್ಚರಿಕೆ ನೀಡುವಂತೆ ನಡೆದ ಮೊದಲ ಯುದ್ಧವಾಗಿದೆ. ಒಂದೊಮ್ಮೆ ಚೀನಾ ಎದುರಾದರೂ ಸಮರ್ಥವಾಗಿ ಎದುರಿಸುವ ತಾಕತ್ತು ನರೇಂದ್ರ ಮೋದಿ ನೇತೃತ್ವದ ಭಾರತಕ್ಕಿದೆ ಎಂದು ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಆಪರೇಷನ್ ಸಿಂದೂರ ಯಶಸ್ಸಿಗಾಗಿ ದೇಶದ ಯೋಧರಿಗೆ ನೈತಿಕ ಬಲ ತುಂಬುವ ಸಲುವಾಗಿ ನಾಗರಿಕ ವೇದಿಕೆಯಿಂದ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ವಿಜಯ ಸಿಂದೂರ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆದ ಶೋಭಾಯಾತ್ರೆಯ ನಂತರ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಹಲ್ಗಾಂ ಘಟನೆಗೆ ಸಂಬಂಧಿಸಿ ಭಯಾನಕವಾದ ಮಾಹಿತಿ ಶೀಘ್ರದಲ್ಲಿ ಹೊರ ಬರುವ ಸಾಧ್ಯತೆಯಿದೆ ಎಂದರು.ಭಯೋತ್ಪಾದನೆಯನ್ನು ಹೊಸಕಿ ಹಾಕುವ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಸಾರಿರುವ ಯುದ್ಧ ಮುಂದುವರೆಯಲಿದ್ದು, ಪ್ರತಿಯೊಬ್ಬ ಪ್ರಜೆಯೂ ದೇಶದ ಪರ ನಿಲ್ಲುವ ಮೂಲಕ ಹೊಸ ಭಾಷ್ಯವನ್ನು ಬರೆಯಬೇಕಿದೆ. ಭಾರತ ಬದಲಾಗಿದ್ದು ಪಾಕಿಸ್ತಾನದ ಅಣುಬಾಂಬ್ ಸೇರಿದಂತೆ ಯಾವುದೇ ಗೊಡ್ಡು ಬೆದರಿಕೆಗೂ ಬಗ್ಗುವುದಿಲ್ಲ ಎಂಬುದನ್ನು ಈ ಯುದ್ಧ ನಿರೂಪಿಸಿದೆ. ಆಪರೇಷನ್ ಸಿಂದೂರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಮಾರ್ಗದರ್ಶನದಲ್ಲಿ ನಮ್ಮ ಯೋಧರು ಪಾಕಿಸ್ತಾನ ಬಹುದಿನಗಳವರೆಗೆ ನೆನಪಿಡುವಂತಹ ಹೆಮ್ಮೆಯ ಕಾರ್ಯ ಮಾಡಿದ್ದಾರೆ ಎಂದರು.ಈ ಯುದ್ಧದಲ್ಲಿ ನಾವು ಏನನ್ನು ಕಳೆದುಕೊಂಡಿಲ್ಲಾ ಎಂದು ಸೇನಾ ಮುಖ್ಯಸ್ಥರು ಹೇಳಿದ್ದರೂ ರಾಹುಲ್ ಗಾಂಧಿ ಈ ಯುದ್ಧದಲ್ಲಿ ಭಾರತ ಕಳೆದುಕೊಂಡಿರುವ ಬಗ್ಗೆ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಂ ಘಟನೆಗೆ ಸರ್ಕಾರವೇ ಕಾರಣ ಎಂದಿದ್ದಾರೆ. ಓವೈಸಿ ಕೂಡಾ ದೇಶಭಕ್ತಿ ತೋರಿರುವ ಸಂಧರ್ಭದಲ್ಲಿ ಈ ಇಬ್ಬರು ನಾಯಕರ ಹೇಳಿಕೆ ಖಂಡನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಪಹಲ್ಗಾಂನಲ್ಲಿ ಕುಟುಂಬ ಸದಸ್ಯರ ಎದುರಿನಲ್ಲಿ ಧರ್ಮ ಕೇಳಿ ಮುಗ್ದ ನಾಗರಿಕರ ಹತ್ಯೆ ನಡೆದಿರುವ ಬಗ್ಗೆ ಇಡೀ ದೇಶವೇ ಕಣ್ಣೀರು ಸುರಿಸಿದೆ. ಇದಕ್ಕೆ ಪ್ರತಿಕಾರವಾಗಿ ನಮ್ಮ ಯೋಧರು ಸವಾಲನ್ನು ಸ್ವೀಕರಿಸಿ ನಮ್ಮವರ ಒಂದು ಹನಿ ರಕ್ತ ಬೀಳದಂತೆ ಭಾರತ ನಾರಿಯರ ಸಿಂದೂರದ ತಾಕತ್ತನ್ನು ತೋರಿದ್ದಾರೆ ಎಂದರು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಿನೇಶ್ ಭಾರತಿಪುರ, ಮಾಜಿ ಯೋಧ ಪ್ರದೀಪ್ ಶಿರೂರು, ಹೆದ್ದೂರು ನವೀನ್ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆಗುಂಬೆ ವೃತ್ತದಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.