ವಿವಿ ಸದಸ್ಯತ್ವ ಆಮಿಷ: ವೈದ್ಯರಿಗೆ ವಂಚಿಸಿದ್ದ ಚಿತ್ರದುರ್ಗ ಆರೋಪಿ ಬಂಧನ

KannadaprabhaNewsNetwork |  
Published : Mar 01, 2025, 01:02 AM IST
28ಕೆಡಿವಿಜಿ4-ದಾವಣಗೆರೆ ಸಿಇಎನ್ ಅಪರಾಧ ಠಾಣೆ ಪೊಲೀಸರು ಬಂಧಿಸಿರುವ ಚಿತ್ರದುರ್ಗ ಜಿಲ್ಲೆ ಹುಲ್ಲೇಹಾಳ್ ಗ್ರಾಮದ ಆರೋಪಿ, ವ್ಯವಸಾಯ ವೃತ್ತಿಯ ಎಚ್.ಟಿ.ಸದ್ರುಲ್ಲಾ ಖಾನ್. | Kannada Prabha

ಸಾರಾಂಶ

ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಬೆಳಗಾವಿಯ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ವೈದ್ಯರ ಪತ್ನಿಯೊಬ್ಬರಿಗೆ ₹2.78 ಲಕ್ಷ ವಂಚಿಸಿದ್ದ ಚಿತ್ರದುರ್ಗ ಜಿಲ್ಲೆ ಮೂಲದ ಆರೋಪಿಯನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

- ಚಿತ್ರದುರ್ಗ ಜಿಲ್ಲೆ ಹುಲ್ಲೇಹಾಳ್ ಗ್ರಾಮದ ಕೃಷಿಕ ಎಚ್.ಟಿ. ಸದ್ರುಲ್ಲಾ ಖಾನ್ (40) ಬಂಧಿತ ಆರೋಪಿ

- ರಾಜ್ಯಪಾಲರ ಕಚೇರಿ ಅಧಿಕಾರಿಯೆಂದು ವೈದ್ಯದಂಪತಿಗೆ ನಂಬಿಸಿ ಲಕ್ಷಾಂತರ ರು. ವಂಚಿಸಿರುವ ಭೂಪ

- ಬೆಂಗಳೂರಿನ ವಿಧಾನಸೌಧ, ಗೋವಿಂದರಾಜ ನಗರ, ಹೆಬ್ಬಗೋಡಿ, ಚಿತ್ರದುರ್ಗ ಕೋಟೆ, ಕೋಲಾರದ ಗೌಣಿಪಲ್ಲಿ ಠಾಣೆಗಳಲ್ಲೂ ಪ್ರಕರಣ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಬೆಳಗಾವಿಯ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ವೈದ್ಯರ ಪತ್ನಿಯೊಬ್ಬರಿಗೆ ₹2.78 ಲಕ್ಷ ವಂಚಿಸಿದ್ದ ಚಿತ್ರದುರ್ಗ ಜಿಲ್ಲೆ ಮೂಲದ ಆರೋಪಿಯನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹುಲ್ಲೇಹಾಳ್ ಗ್ರಾಮದ ಕೃಷಿಕ ಎಚ್.ಟಿ. ಸದ್ರುಲ್ಲಾ ಖಾನ್ (40) ಬಂಧಿತ ಆರೋಪಿ. ಸದ್ರುಲ್ಲಾ ಖಾನ್ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ, ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರಿಗೆ ನಂಬಿಸಿ, ವಂಚಿಸುತ್ತಿದ್ದ ಎನ್ನಲಾಗಿದೆ.

ದಾವಣಗೆರೆಯ ವೈದ್ಯರೊಬ್ಬರಿಗೆ ಫೆ.20ರಂದು ಫೋನ್ ಮಾಡಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ನಾಮನಿರ್ದೇಶನ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿದ್ದಾನೆ. ವೈದ್ಯರ ಪತ್ನಿಗೂ ಬೆಳಗಾವಿ ವಿಟಿಯುನಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ರಾಜ್ಯಪಾಲರ ಸೆಕ್ರೆಟರಿಯೇಟ್ ಆಗಿ ರಾಜ್ಯಪಾಲರ ಕಚೇರಿಯಲ್ಲಿ ತಾನು ಕಾರ್ಯನಿರ್ವಹಿಸುತ್ತಿದ್ದು, ನಾಮ ನಿರ್ದೇಶಿತ ಸದಸ್ಯರನ್ನು ನಾಮಿನೇಟ್ ಮಾಡುವುದಾಗಿಯೂ ಆರೋಪಿ ಎಚ್.ಟಿ.ಸದ್ರುಲ್ಲಾ ಖಾನ್‌ ನಂಬಿಸಿದ್ದನು.

ಆತನ ಮಾತು ನಂಬಿದ ವೈದ್ಯರು ₹2,78,720 ಗಳನ್ನು ಆನ್ ಲೈನ್ ಮೂಲಕ ಸದ್ರುಲ್ಲಾ ಖಾನ್‌ಗೆ ವರ್ಗಾವಣೆ ಮಾಡಿದ್ದಾರೆ. ಅನಂತರ ತಾವು ವಂಚನೆಗೆ ಒಳಗಾಗಿದ್ದು ತಿಳಿದ ವೈದ್ಯರು ಹಣ ಮರಳಿಸುವಂತೆ ಕೇಳಿದ್ದಾರೆ. ಆಗ ನಿಮ್ಮ ವಿರುದ್ಧ ದೂರು ದಾಖಲಿಸಿ, ಕೆಎಂಸಿ ರಿಜಿಸ್ಟರ್ ಬ್ಲಾಕ್ ಮಾಡಿಸುವುದಾಗಿ ಆರೋಪಿ ಸದ್ರುಲ್ಲಾ ಖಾನ್ ವೈದ್ಯರಿಗೇ ಬೆದರಿಸಿದ್ದಾನೆ.

ತಕ್ಷಣ ವೈದ್ಯರು ದಾವಣಗೆರೆ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಸಿಇಎನ್ ಅಪರಾಧ ಠಾಣೆ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಪ್ರಭಾರ ಇನ್‌ಸ್ಪೆಕ್ಟರ್‌ ವೈ.ಶಿಲ್ಪ, ಸುನೀಲ ತೇಲಿ, ಪಿಎಸ್ಐ ರೂಪಾ ತೆಂಬದ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದರು.

ವಂಚಕ ಸದ್ರುಲ್ಲಾ ಖಾನ್‌ನನ್ನು ಕಡೆಗೂ ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ₹40 ಸಾವಿರ ಮೌಲ್ಯದ 2 ಮೊಬೈಲ್‌ ಜಪ್ತಿ ಮಾಡಿದ್ದಾರೆ. ವೈದ್ಯರಿಂದ ಪಡೆದಿದ್ದ ಹಣದಲ್ಲಿ ₹2,19,058 ವನ್ನು ಆರೋಪಿ ಮತ್ತು ಆತನ ಪರಿಚಯಸ್ಥರ ಬ್ಯಾಂಕ್ ಖಾತೆಯಲ್ಲಿ ಪೊಲೀಸ್ ಇಲಾಖೆ ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿ ಸದ್ರುಲ್ಲಾ ಖಾನ್ ಈ ಹಿಂದೆಯೂ ಇದೇ ರೀತಿ ಹಲವರಿಗೆ ವಂಚಿಸಿರುವ ಬಗ್ಗೆ ಬೆಂಗಳೂರಿನ ವಿಧಾನಸೌಧ, ಗೋವಿಂದರಾಜ ನಗರ, ಹೆಬ್ಬಗೋಡಿ, ಚಿತ್ರದುರ್ಗ ಕೋಟೆ, ಕೋಲಾರದ ಗೌಣಿಪಲ್ಲಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

- - - -28ಕೆಡಿವಿಜಿ4.ಜೆಪಿಜಿ:

ಎಚ್.ಟಿ.ಸದ್ರುಲ್ಲಾ ಖಾನ್

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ