ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರೈತ ಭವನದಲ್ಲಿ ಮಂಗಳವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಕಷ್ಟ ಸನ್ನಿವೇಶಗಳ ಎದುರಿಸುತ್ತಿರುವ ರೈತರು ಸಹಜವಾಗಿಯೇ ಬ್ಯಾಂಕ್ ನೆರವು ಪಡೆಯುತ್ತಿದ್ದಾರೆ. ಇಂತಹ ವೇಳೆ ಸಿಬಿಲ್ ಸ್ಕೋರ್ ನೆಪದಲ್ಲಿ ಸಾಲ ನಿರಾಕರಿಸಬಾರದು. ಅದೇ ರೀತಿ ಸಾಲ ವಸೂಲಾತಿಗಾಗಿ ರೈತರಿಗೆ ನೀಡಲಾಗುತ್ತಿರುವ ಕಿರುಕುಳ ನಿಲ್ಲಬೇಕೆಂದರು.
ಕೃಷಿಗೆ ಮಾರಕವಾಗಿರುವ ಅಂತಾರಾಷ್ಟ್ರೀಯ ವಾಣಿಜ್ಯ ಒಪ್ಪಂದದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯದಿದ್ದರೆ ಮುಂದಿನ ತಿಂಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಳುವಳಿ ನಡೆಸಲಾಗುವುದು. ರೈತರು ಬೆಳೆದ ಬೆಳೆಗಳಿಗೆ ಖರೀಧಿ ಕೇಂದ್ರವಿಲ್ಲದೆ ವೈಜ್ಞಾನಿಕ ಬೆಲೆ ಸಿಗದ ಕಾರಣ ಕೃಷಿಗಾಗಿ ಸಾಲ ಮಾಡಿದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಬೆಳೆವಿಮೆ ಕಂತು ಪಾವತಿಸಿರುವ ರೈತರಿಗೆ ವಿಮೆ ಕಂಪನಿಗಳು ಪರಿಹಾರ ನೀಡುತ್ತಿಲ್ಲವೆಂದರು.ಅಮೇರಿಕಾ, ಜಪಾನ್, ಕೊರಿಯಾ, ಯೂರೋಪ್ ದೇಶಗಳಲ್ಲಿ ರೈತರಿಗೆ ಒಳ್ಳೆಯ ಸಬ್ಸಿಡಿ ಸಿಗುತ್ತಿದೆ. ನಮ್ಮ ದೇಶದಲ್ಲಿ ರೈತನಿಗೆ ಸಬ್ಸಡಿ ಇಲ್ಲದಂತಾಗಿದೆ. ಜಿಎಂ ತಳಿಗಳ ಆಹಾರ ಉತ್ಪಾದನೆ ಸೇವಿಸುತ್ತಿರುವುದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೃಷಿಯಲ್ಲಿ ಕೈ ಸುಟ್ಟುಕೊಂಡಿರುವ ರೈತರು ಹೈನುಗಾರಿಕೆಯಲ್ಲಿ ಜೀವ ಹಿಡಿದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಎಫ್ಟಿಎ ಒಪ್ಪಂದವನ್ನು ಈಗಾಗಲೆ ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ವಿರೋಧಿಸಲಾಗಿದೆ. ಕರ್ನಾಟಕ ಸರ್ಕಾರವು ಕೂಡ ವಿಶೇಷ ವಿಧಾನಸಭೆ ಕರೆದು ಚರ್ಚಿಸಿ ಕೇಂದ್ರದ ಏಕಪಕ್ಷೀಯ ನೀತಿಯನ್ನು ವಿರೋಧಿಸಿ ಕೃಷಿ ಬಿಕ್ಕಟ್ಟಿನಿಂದ ರೈತರನ್ನು ರಕ್ಷಿಸಬೇಕು ಎಂದರು.
ಚಾಮರಾಜನಗರ, ಧಾರವಾಡ, ಗದಗ, ಶಿವಮೊಗ್ಗ, ತುಮಕೂರು, ದಾವಣಗೆರೆ, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ರಾಜ್ಯ ಸಮಿತಿ ಸಭೆಯಲ್ಲಿ ಹಾಜರಿದ್ದರು.