ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ತಾಲೂಕು ಶಿಶು ಅಭಿವೃದ್ಧಿ ಯೋಜನಾಕಾರಿಗಳ ಕಚೇರಿ ಎದುರು ಸೇರಿದ ಸಿಐಟಿಯು ಪದಾಧಿಕಾರಿಗಳು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಆಯವ್ಯಯ ಅಸಾರ್ಥಕವಾಗಿದೆ. ಭಾರತೀಯ ಆರ್ಥಿಕತೆಯು ಒಂದು ನಿರ್ಣಾಯಕ ತಿರುವು ತಲುಪಿದೆ. ಮುಂದಿನ ವರ್ಷಗಳಲ್ಲಿ ಹೂಡಿಕೆ ಹರಿವು, ಪೂರೈಕೆ ಸರಪಳಿ ಮತ್ತು ಬೆಳವಣಿಗೆ ಸಾಧ್ಯತೆಗಳ ಮೇಲೆ ಪ್ರಭಾವ ಬೀರಲಿದೆ ಎಂದು ಎಚ್ಚರಿಸಿದರು.
ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳನ್ನು ಅಸೂಚಿಸುವುದು ಮತ್ತು ಗುಣಮಟ್ಟ ನಿಯಂತ್ರಣ ಮಾನ ದಂಡಗಳನ್ನು ದುರ್ಬಲಗೊಳಿಸುವುದು ಮುಂತಾದ ಕರೆ ದಾಳಿತನದ ಕಾರ್ಯಸೂಚಿಯೇ ಮುಂದುವರೆದಿದೆ. ಇದು ಕಾರ್ಮಿಕ ಹಕ್ಕುಗಳು ಮತ್ತು ದೇಶೀಯ ಕೈಗಾರಿಕೆಯನ್ನು ನಾಶ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.ದೇಶದ ಯುವ ಜನತೆಗೆ ಈಗಲೇ ಗೌರವಯುತ ಮತ್ತು ಸುರಕ್ಷಿತ ಉದ್ಯೋಗ ಬೇಕು, ದೂರದ ಭರವಸೆಗಳು ಬೇಕಾಗಿಲ್ಲ. ರೈಲ್ವೇ ಹಂಚಿಕೆಯು ಐಷಾರಾಮೀಕರಣವನ್ನು ಪ್ರೋತ್ಸಾಹಿಸುತ್ತಿದೆ. ಮುಂಬೈ-ಪುಣೆ ಮತ್ತು ಹೈದರಾಬಾದ್-ಚೆನ್ನೈನಂತಹ ಏಳು ಹೈಸ್ಪೀಡ್ ರೈಲು ಹಾದಿಗಳಿಗೆ ಸಂಪನ್ಮೂಲಗಳನ್ನು ಸುರಿಯುತ್ತಿದೆ. ಆದರೆ, ಸಾಮಾನ್ಯ ಪ್ರಯಾಣಿಕರು ತುಂಬಿ ಹೋದ ಬೋಗಿಗಳಲ್ಲಿ ಕಷ್ಟಪಡುತ್ತಿದ್ದಾರೆ ಮತ್ತು ವೃದ್ಧರ ರಿಯಾಯ್ತಿಗಳನ್ನು ಮರಳಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟಿತ ವಲಯಗಳಲ್ಲಿ ಉದ್ಯೋಗದ ಸ್ತಬ್ಧತೆಯು ಲಕ್ಷಾಂತರ ಜನರನ್ನು ಅಸುರಕ್ಷಿತ ಗಿಗ್ ಕೆಲಸಕ್ಕೆ ತಳ್ಳಿದೆ. ಆರ್ಥಿಕ ಸಮೀಕ್ಷೆಯಲ್ಲಿ ಪುನರಾವರ್ತಿತ ಉಲ್ಲೇಖಗಳ ಹೊರತಾಗಿಯೂ ಈ ಆಯವ್ಯಯವು ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯಾವುದೇ ಹಂಚಿಕೆಯನ್ನು ನೀಡಿಲ್ಲ ಮತ್ತು ಕಾನೂನು ಮಾನ್ಯತೆ ನೀಡುವ ಬಗ್ಗೆ ಹೇಳುವುದು ದೂರವಿರಲಿ, ಅಸ್ತಿತ್ವದಲ್ಲಿರುವ ಬದ್ಧತೆಗಳನ್ನು ಸಹ ಪೂರೈಸುವಲ್ಲಿ ವಿಫಲವಾಗಿದೆ. ಅಂತೆಯೇ ಅಸಂಘಟಿತ ಕಾರ್ಮಿಕರ ಇತರೆ ವಿಭಾಗಗಳಿಗೆ ಯಾವುದೇ ಆಯವ್ಯಯ ಹಂಚಿಕೆ ಮಾಡಿಲ್ಲ ಎಂದು ದೂರಿದರು.