ಚನ್ನಪಟ್ಟಣ: ಅಮೃತ್ ಯೋಜನೆ ಕಾಮಗಾರಿಯಲ್ಲಿ ವಿಳಂಬ, ರಸ್ತೆ ಅವ್ಯವಸ್ಥೆ, ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ, ಕುಡಿವ ನೀರು ನಿರ್ವಹಣೆ ಲೋಪದೋಷ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ಎಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ನಾಗೇಶ್ ಮಾತನಾಡಿ, ಅಧಿಕಾರಿಗಳು ಸದಸ್ಯರ ಮಾತನ್ನು ಉಡಾಫೆ ಮಾಡಬಾರದು. ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಸದಸ್ಯರು ಮತ್ತು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದಿದ್ದರೆ ಕಚೇರಿಗೆ ಏಕೆ ಬರಬೇಕು ಎಂದು ಕಿಡಿಕಾರಿ, ಮೇಲಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸುವಂತೆ ಪೌರಾಯುಕ್ತ ಮಹೇಂದ್ರಗೆ ಸೂಚಿಸಿದರು.
ಬೀದಿ ದೀಪಗಳ ನಿರ್ವಹಣೆ ಟೆಂಡರ್ ಪಡೆದಿರು ವ್ಯಕ್ತಿಯನ್ನು ಸಭೆಗೆ ಕರೆಸುವಂತೆ ಹೇಳುತ್ತಿದ್ದರೂ ಇಂಜಿಯರ್ ನಿರ್ಲಕ್ಷಿಸುತ್ತಿದ್ದು, ಅವರ ಬಿಲ್ ಕೊಡದೆ ತಡೆ ಹಿಡಿಯಬೇಕು ಎಂದು ಸದಸ್ಯರು ಒತ್ತಾಯಿಸಿದರು.ನಗರ ಪ್ರದೇಶದಲ್ಲಿ ಅಮೃತ್ ಯೋಜನೆ ಅಸಮರ್ಪಕ ನಿರ್ವಹಣೆಯಿಂದ ರಸ್ತೆಗಳು ಗುಂಡಿಮಯವಾಗಿದ್ದು, ಕಾಮಗಾರಿ ವಿಳಂಬ ಮತ್ತು ಅವ್ಯವಸ್ಥೆಯಿಂದ ಕೂಡಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಗುತ್ತಿಗೆದಾರರನ್ನು ಸಭೆಗೆ ಕರೆಸಿ ಎಂದರೆ ಕರೆಸುತ್ತಿಲ್ಲ. ಅವರು ಸಭೆಗೆ ಬರುವುದಿಲ್ಲ ಎಂದ ಮೇಲೆ ಕೆಲಸ ನಿಲ್ಲಿಸಿಬಿಡಿ ಎಂದು ಆಗ್ರಹಿಸಿದರು. ಇದನ್ನು ಬೆಂಬಲಿಸಿದ ಅಧ್ಯಕ್ಷರು, ಸದರಿ ಗುತ್ತಿಗೆದಾರ ಬರುವವರೆಗೆ ಎಲ್ಲಾ ಕೆಲಸ ನಿಲ್ಲಿಸಿ, ಯಾವುದೇ ಬಿಲ್ ಮಾಡಬಾರದು ಎಂದು ಎಇಇಗೆ ಸೂಚನೆ ನೀಡಿದರು.
ಸ್ಲಂ ಬೋರ್ಡ್ನಿಂದ ಎಷ್ಟು ಕಡೆ ಸ್ಲಂ ಎಂದು ಗುರುತಿಸಿ, ಎಷ್ಟು ಮನೆಗಳನ್ನು ಕಟ್ಟಿ ಫಲಾನುಭವಿಗಳಿಗೆ ನೀಡಿದ್ದೀರಿ. ಪ್ರಗತಿಯಲ್ಲಿರುವ ಮನೆಗಳೆಷ್ಟು, ಮನೆಗಳನ್ನು ಕಟ್ಟಿಕೊಡಬೇಕಾದರೆ ಇರುವ ನಿಯಮಗಳೇನು ಎಂಬುದನ್ನು ಸಭೆಯ ಗಮನಕ್ಕೆ ತರಬೇಕು ಎಂದು ಪೌರಾಯುಕ್ತ ಮಹೇಂದ್ರ ಸ್ಲಂ ಬೋರ್ಡ್ ಅಧಿಕಾರಿಗೆ ತಿಳಿಸಿದರು.
ನಗರದಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸರಿ ಇಲ್ಲವಾಗಿದ್ದು ಅಂಗಡಿಯವರು, ಕಾಲುವೆ, ರಸ್ತೆ, ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದು, ಪರಿಸರ ಹಾಳಾಗುತ್ತಿದೆ. ಸಾರ್ವಜನಿಕರು, ವಾಹನ ಸವಾರರು ದುರ್ವಾಸನೆ ತಾಳಲಾರದೇ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಸಂಬಂಧ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪೊಟೋ೫ಸಿಪಿಟಿ೧: ಚನ್ನಪಟ್ಟಣ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮಾಲ ಇತರರಿದ್ದರು.