ರಾಮನಗರ: ಸ್ವಚ್ಛತೆ ಮೂಲಕ ನಗರದ ಆರೋಗ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುವ ವೇಳೆ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಪೌರಕಾರ್ಮಿಕರಿಗೆ ಕ್ಯಾನ್ವಸ್ ಶೂಗಳನ್ನು ವಿತರಿಸಿ ಮಾತನಾಡಿದ ಅವರು, ಇಡೀ ನಗರ ನೈರ್ಮಲ್ಯ, ಆರೋಗ್ಯ ಕಾಯುವ ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರ ಸುರಕ್ಷತಾ ಪರಿಕರಗಳನ್ನು ಪ್ರತಿ ವರ್ಷ ವಿತರಿಸುತ್ತಿದೆ. ಆದರೆ ಪೌರಕಾರ್ಮಿಕರು ಇವುಗಳನ್ನು ಧರಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ಎಚ್ಚರಿಸಿದರು.ಸ್ವಚ್ಛತೆಯ ಮೂಲಕ ನಗರದ ಆರೋಗ್ಯ ಕಾಯುವ ನಿಮ್ಮ ಆರೋಗ್ಯ ಕಾಯುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಬೆಳಿಗ್ಗೆ ವೇಳೆ ನಗರ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಪರಿಶೀಲಿಸಿದ್ದೇವೆ. ಬಹುತೇಕ ಮಂದಿ ಮಾಸ್ಕ್ ಧರಿಸದೆಯೇ ದುರ್ವಾಸನೆಯಲ್ಲಿ ಕೆಲಸ ಮಾಡುತ್ತಾರೆ.
ಇದರಿಂದ ಭವಿಷ್ಯದಲ್ಲಿ ಶ್ವಾಸಕೋಶದ ಸಮಸ್ಯೆಗಳು ಎದುರಾಗುತ್ತವೆ. ವಯಸ್ಸು ಮತ್ತು ದೇಹ ತಡೆಯುತ್ತದೆ ಎಂಬ ಅಸಡ್ಡೆ ಬೇಡ. ಶ್ವಾಸಕೋಶ ದಿನಗಳೆದಂತೆ ವೀಕ್ ಆಗುತ್ತದೆ. ನಮ್ಮ ಆರೋಗ್ಯದ ಜವಾಬ್ದಾರಿ ಮೊದಲು ನಮಗಿರಬೇಕು. ನಾವೇ ನಿರ್ಲಕ್ಷ್ಯ ಮಾಡಿದರೆ ಹೇಗೆ? ಅನಾರೋಗ್ಯಕ್ಕೆ ತುತ್ತಾಗಿ ಅಪಾಯವಾದರೆ, ಮಕ್ಕಳ ಭವಿಷ್ಯದ ಏನಾಗಲಿದೆ? ಎಂಬುದನ್ನು ಅರಿತುಕೊಂಡು ಮುನ್ನೆಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರತಿ ಬಾರಿ ಹೇಳಿಸಿಕೊಳ್ಳವ ಅಗತ್ಯವಿಲ್ಲ. ತಪ್ಪದೆ ಸುರಕ್ಷತಾ ಪರಿಕರಗಳನ್ನು ಧರಿಸಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಶೇಷಾದ್ರಿ ತಿಳಿಸಿದರು.ಪೌರಾಯುಕ್ತ ಡಾ.ಜಯಣ್ಣ ಮಾತನಾಡಿ, ಪೌರಕಾರ್ಮಿಕರ ಆರೋಗ್ಯ ಕಾಯುವ ಹಿನ್ನೆಲೆಯಲ್ಲಿ ಸರ್ಕಾರ ಗಮ್ ಬೂಟ್, ಶೂ, ಮಾಸ್ಕ್, ಜರ್ಕಿನ್, ರಿಫ್ಲೆಕ್ಟರ್ಗಳನ್ನು ನೀಡುತ್ತಿದೆ. ಆದರೆ ನೀವುಗಳನ್ನು ಅವುಗಳನ್ನು ಬಳಸುವುದರ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದೀರಿ ಎಂದರು.
ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ ಪೌರಕಾರ್ಮಿಕರೊಬ್ಬರು ಬೆಳಿಗ್ಗೆ ಸ್ವಚ್ಛತೆ ಕೆಲಸ ಮಾಡುವ ವೇಳೆ ಹಾವು ಕಡಿತಕ್ಕೆ ಒಳಗಾಗಿದ್ದರು. ಅಂದು ಅವರು ಗಮ್ ಬೂಟ್ ಅಥವಾ ಶೂ ಹಾಕಿದ್ದರೆ ಹಾವು ಕಡಿದಿದ್ದರೂ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ನಿರ್ಲಕ್ಷ್ಯದ ಪರಿಣಾಮ ಸಾವು ಬದುಕಿನ ನಡುವೆ ಹೋರಾಡಿ ಈಗ ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.ಮತ್ತೊಂದು ಪ್ರಕರಣದಲ್ಲಿ ಪೌರಕಾರ್ಮಿಕರೊಬ್ಬರು ಮಾಸ್ಟರ್ ಹೆಲ್ತ್ ಚೆಕಪ್ನ ನಂತರ ವೈದ್ಯರು ಸೂಚಿಸಿದ ಸಲಹೆಗಳು, ಔಷದೋಪಚಾರಗಳನ್ನು ಪಾಲಿಸದ ಕಾರಣ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಅನಾರೋಗ್ಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಿರ್ಲಕ್ಷ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜವಾಬ್ದಾರಿಯಿಂದ ಕೆಲಸ ಮಾಡಿ. ಎಲ್ಲ ಪೌರಕಾರ್ಮಿಕರ ಹೆಲ್ತ್ ಕಾರ್ಡ್ಗಳು ಚಾಲ್ತಿಯಲ್ಲಿರುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ ಮಾತನಾಡಿ, ಬಿಸಿಲು ಮಳೆಯಿರಲಿ ನಗರದ ಸ್ವಚ್ಚತೆಯಲ್ಲಿ ಅವರ ಪಾತ್ರ ಪ್ರಮುಖ. ಆದರೆ ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆಯಿಲ್ಲ ಎಂಬುದು ಬಹಳ ನೋವಿನ ಸಂಗತಿ. ಈಗಿರುವ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಜೊತೆಗೆ ಸವಲತ್ತುಗಳನ್ನು ನಗರಸಭೆ ವತಿಯಿಂದ ವಿತರಣೆ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಲೋಡರ್ಸ್, ಯುಜಿಡಿ ಸಹಾಯಕರು, ಮೇಸ್ತ್ರಿಗಳು, ವಾಹನ ಚಾಲಕರು ಸೇರಿದಂತೆ ಒಟ್ಟು 152 ಜನರಿಗೆ ನಗರಸಭೆ ನಿಧಿ ವತಿಯಿಂದ ಕ್ಯಾನ್ವಸ್ ಶೂಗಳನ್ನು ವಿತರಣೆ ಮಾಡಲಾಯಿತು.
ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೊಲ್ಲಾಪುರಿ, ಪೌರ ಸೇವಾ ನೌಕರರ ಸಂಘದ ಶಾಖಾ ಅಧ್ಯಕ್ಷ ದೇವೇಂದ್ರ, ಗೌರವಾಧ್ಯಕ್ಷ ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.11ಕೆಆರ್ ಎಂಎನ್ 4.ಜೆಪಿಜಿರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಪೌರಕಾರ್ಮಿಕರಿಗೆ ಕ್ಯಾನ್ವಸ್ ಶೂಗಳನ್ನು ವಿತರಿಸಿದರು.