ವಿಜಯಪುರ: ದೇಶ ಕಾಯುವ ಸೈನಿಕರಂತೆ ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುತ್ತಾರೆ. ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುವವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದರು.
ಪುರಸಭಾಧ್ಯಕ್ಷೆ ಭವ್ಯಾಮಹೇಶ್ ಮಾತನಾಡಿ, ಪೌರಕಾರ್ಮಿಕರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ, ಯಾವುದೇ ಹುದ್ದೆ ಮೇಲು-ಕೀಳೆಂಬ ಭೇದ-ಭಾವವಿಲ್ಲ. ದೇಶ ಸೇವೆ-ಈಶ ಸೇವೆ ಎನ್ನುವ ರೀತಿಯಲ್ಲಿ ಪ್ರತಿಯೊಂದು ಹುದ್ದೆ ತನ್ನದೇ ಆದ ಮಹತ್ವ ಹೊಂದಿದೆ. ಪೌರ ಕಾರ್ಮಿಕರನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ನೀರು ಸರಬರಾಜು ನಿವೃತ್ತಿ ಸಿಬ್ಬಂದಿ ಮುತ್ಯಾಲಪ್ಪ ಅವರನ್ನು ಸನ್ಮಾನಿಸಲಾಯಿತು.ಪುರಸಭೆಯಿಂದ ಆಯೋಜಿಸಿದ್ದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದಾನಿಗಳಾದ ಬೆಂಗಳೂರು ರತ್ನ ಪ್ರಶಸ್ತಿ ಪುರಸ್ಕೃತ ಅಂಬರೀಶ್ ಜೀ ಹಾಗೂ ಸಂದ್ಯಾ ದಂಪತಿ ಪೌರ ಕಾರ್ಮಿಕರಿಗೆ ಕುಂಭಾ ಹಾಗೂ ಬ್ಯಾಗ್ಗಳನ್ನು ವಿತರಿಸಿ, ಸನ್ಮಾನ ಸ್ವೀಕರಿಸಿದರು.
ಪುರಸಭಾ ಉಪಾಧ್ಯಕ್ಷರಾದ ತಾಜ್ ವುನ್ನೀಸಾ ಮಹಬೂಬ್ ಪಾಷಾ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ನಂದಕುಮಾರ್, ಬೈರೇಗೌಡ, ಕವಿತಾ, ಶಿಲ್ಪ ಅಜಿತ್, ಆಯಿಷಾ ಸೈಫುಲ್ಲಾ, ಪೌರ ಕಾರ್ಮಿಕರ ನೌಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ಲಕ್ಷ್ಮಣ್, ಪುರಸಭಾ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಹಾಜರಿದ್ದರು.