ಕನ್ನಡಪ್ರಭ ವಾರ್ತೆ ಕುಣಿಗಲ್
ಪಟ್ಟಣದಿಂದ ಬೆಂಗಳೂರಿಗೆ 10 ಬಸ್ ಗಳ ಸಂಚಾರ ಪ್ರಾರಂಭಕ್ಕೆ ಚಾಲನೆ ನೀಡಿ ಕುಣಿಗಲ್ ಪಟ್ಟಣದಲ್ಲಿ ಮಾತನಾಡಿದರು. ಬಿಡದಿ ಟೌನ್ಶಿಪ್ ಯೋಜನೆಯನ್ನು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಮಾಡಿದ್ದರು. ಅದನ್ನು ನಾವು ಮುಂದುವರಿಸಿ ನೆನೆಗುದಿಗೆ ಬಿದ್ದಂತಹ ಕಾಮಗಾರಿಗಳನ್ನು ಹಾಗೂ ರೈತರಿಗೆ ಪರಿಹಾರ ನೀಡುವ ಕೆಲಸವನ್ನು ಮುಂದುವರಿಸುತ್ತಿದ್ದೇವೆ. ಆದರೆ ಎಚ್ ಡಿ ಕುಮಾರಸ್ವಾಮಿ ಅದಕ್ಕೆ ತೊಂದರೆ ನೀಡುತ್ತಿರುವುದು ಅಸಂಬದ್ಧ ಎಂದರು. ಕುಣಿಗಲ್ ಕುದುರೆ ಫಾರಂ ಅಭಿವೃದ್ಧಿ ಮಾಡುವ ವಿಚಾರದಲ್ಲೂ ಕೂಡ ನಾವು ಆಸಕ್ತಿ ತೋರಿದ್ದೇವೆ ಆದರೆ ವಿರೋಧ ಪಕ್ಷದವರು ಇಲ್ಲ ಸಲ್ಲದ ಆರೋಪ ಮಾಡುತ್ತಾ ಕಾಮಗಾರಿಗಳನ್ನು ತಡೆ ನೀಡುವ ಕೆಲಸಗಳಲ್ಲಿ ಮುಂದಾಗಿದ್ದಾರೆ ಎಂದರು.
ಮಾಜಿ ಸಂಸದ ಡಿ ಕೆ ಸುರೇಶ್ ಅವರನ್ನು ಜನರು ಯಾಕೆ ಸೋಲಿಸಿದರು ಎಂಬುದು ನನಗೆ ಪ್ರಶ್ನೆಯಾಗಿ ಉಳಿದಿದೆ. ಬೆಂಗಳೂರಿನಿಂದ ಸುತ್ತಮುತ್ತಲಿನ ನಗರಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪ್ರಾರಂಭಗೊಂಡ ಯೋಜನೆ ಪ್ರಥಮ ಬಾರಿಗೆ ಕುಣಿಗಲ್ ನಿಂದ ಪ್ರಾರಂಭವಾಗುತ್ತಿದೆ ಈ ಯೋಜನೆ ಕುಣಿಗಲ್ ಗೆ ಬರಲು ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಶಾಸಕ ಡಾ. ರಂಗನಾಥ್ ಕಾರಣ ಎಂದರು. ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.ಮಾಜಿ ಸಂಸದ ಡಿಕೆ ಸುರೇಶ್ ಮಾತನಾಡಿ, ಕುಣಿಗಲ್ ತಾಲೂಕಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಕುಣಿಗಲ್ ಪಟ್ಟಣದಲ್ಲೇ ಒಳಚರಂಡಿ ಕಾಮಗಾರಿ ರಸ್ತೆಗಳ ಅಭಿವೃದ್ಧಿ ಕುಡಿಯುವ ನೀರು ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಸಾಕಷ್ಟು ಅನುದಾನಗಳನ್ನು ನೀಡುತ್ತಿದೆ. ಕುಣಿಗಲ್ ತಾಲೂಕಿಗೆ ಬಹುಮುಖ್ಯ ಅವಶ್ಯಕತೆಗಳಲ್ಲಿ ಒಂದಾದ ಇಂಜಿನಿಯರಿಂಗ್ ಕಾಲೇಜನ್ನು ಕೂಡ ಸರ್ಕಾರ ಮಂಜೂರಾತಿ ಮಾಡಿದೆ. ನನ್ನ ಅಧಿಕಾರ ಇರಲಿ ಬಿಡಲಿ ನಾನು ಕೂಡ ಕುಣಿಗಲ್ ಜನತೆಯ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಬಸ್ಸುಗಳನ್ನು ನೀಡುವುದರ ಜೊತೆಗೆ ಹುಲಿಯೂರ್ ದುರ್ಗದಲ್ಲಿ ಹೊಸ ಡಿಪೋ ಮಾಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು. ಶಾಸಕ ಡಾ. ರಂಗನಾಥ್ ಮಾತನಾಡಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಪೈಪ್ ಲೈನ್ ಲಿಂಕ್ ಕೆನಾಲ್ ಮೂಲಕ ನೀರು ತಂದಾಗ ಕುಣಿಗಲ್ ಗೆ ಅಭಿವೃದ್ಧಿ ಜೊತೆಗೆ ಇಲ್ಲಿನ ಕೊಳವೆಬಾವಿಗಳು ಪುನಶ್ಚೇತನ ಪಡೆಯುತ್ತವೆ. ರೈತರಿಗೆ ಒಳಿತಾಗುತ್ತದೆ. ರಾಮನಗರ ಮಾಗಡಿಗೆ ನೀರು ತೆಗೆದುಕೊಂಡು ಹೋಗುತ್ತಾರೆ ಎಂಬುದನ್ನು ವಿರೋಧ ಪಕ್ಷದವರು ಹೇಳುತ್ತಾರೆ ಎಂದರು. ಈ ಸಂದರ್ಭದಲ್ಲಿ ಬಿಎಂಟಿಸಿ ಎಂಡಿ ರಘುನಂದನ್, ಕುಣಿಗಲ್ ತಹಸೀಲ್ದಾರ್ ಕರಿಯ ನಾಯಕ, ಪುರಸಭಾ ಮುಖ್ಯ ಅಧಿಕಾರಿ ರವಿಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.