ಪಿಐಆರ್‌ ಡಿಟೆಕ್ಟಿವ್ ಸಾಧನ ಕಂಡುಹಿಡಿದ 9ನೇ ತರಗತಿಯ ವಿದ್ಯಾರ್ಥಿಗಳು

KannadaprabhaNewsNetwork | Published : Mar 9, 2024 1:33 AM

ವಿಜ್ಞಾನ ಶಿಕ್ಷಕ ಎಸ್.ಬಿ. ಭಾವಿಕಟ್ಟಿ ಹಾಗೂ ಶಿವಪ್ರಸಾದ ಮೇಲಿನಮನಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿ ಯಶಸ್ವಿಗೊಳಿಸಿದ್ದು, ಸತತ 6 ತಿಂಗಳ ಪರಿಶ್ರಮದಿಂದ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಈ ಸಾಧನ ತಯಾರಿಸಿದ್ದಾರೆ

ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ

ಇಂದು ಹೆದ್ದಾರಿಗಳಲ್ಲಿ ವಾಹನಗಳಿಂದಾಗಿ ದಿನದಿಂದ ದಿನಕ್ಕೆ ಪ್ರಾಣಿಗಳ ಮಾರಣ ಹೋಮ ಹೆಚ್ಚಾಗುತ್ತಿವೆ. ಇದನ್ನು ಮನಗಂಡು ವಿದ್ಯಾರ್ಥಿಗಳಿಬ್ಬರು ಪಿಐಆರ್‌ (Passive infrared sancer) ಎಂಬ ಹೊಸ ಯಂತ್ರ (ಸಾಧನ) ಕಂಡುಹಿಡಿದಿದ್ದು, ಇದು 500 ಮೀಟರ್‌ ದೂರದಲ್ಲಿಯೇ ಪ್ರಾಣಿಗಳ ಇರುವಿಕೆ ಕುರಿತು ಸಂದೇಶ ನೀಡುತ್ತದೆ.

ಇಲ್ಲಿನ ಗೋಕುಲ ಗ್ರಾಮದ ಎಸ್‌.ಆರ್‌. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೀರೇಶಗೌಡ ಪಾಟೀಲ ಹಾಗೂ ಹನುಮಂತ ಹೊಸಮನಿ ಎಂಬ ವಿದ್ಯಾರ್ಥಿಗಳು ಈ ಸಾಧನ ಕಂಡುಹಿಡಿಯುವ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯ ಮಾಡಿದ್ದಾರೆ.

ವಿಜ್ಞಾನ ಶಿಕ್ಷಕ ಎಸ್.ಬಿ. ಭಾವಿಕಟ್ಟಿ ಹಾಗೂ ಶಿವಪ್ರಸಾದ ಮೇಲಿನಮನಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿ ಯಶಸ್ವಿಗೊಳಿಸಿದ್ದು, ಸತತ 6 ತಿಂಗಳ ಪರಿಶ್ರಮದಿಂದ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಈ ಸಾಧನ ತಯಾರಿಸಿದ್ದಾರೆ.

ಹೆದ್ದಾರಿಗಳಲ್ಲಿ ದಿನನಿತ್ಯ ರಸ್ತೆ ಅಪಘಾತಕ್ಕೆ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕೆಲವು ಜಾನುವಾರು ರಸ್ತೆಯ ಮಧ್ಯದಲ್ಲಿಯೇ ಸಂಚರಿಸುತ್ತಿರುತ್ತವೆ. ಸವಾರರು ವೇಗವಾಗಿ ಬಂದು ಜಾನುವಾರು ಇರುವುದನ್ನು ಅರಿಯದೇ ಬಂದು ಅಪಘಾತಕ್ಕೆ ಗುರಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಗೋಕುಲದ ವಿದ್ಯಾರ್ಥಿಗಳು ಆವಿಷ್ಕರಿಸಿರುವ ಪಿಐಆರ್‌ ಸಾಧನ ಇಂತಹ ಅಪಘಾತಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಪ್ರಮುಖ ಹೆದ್ದಾರಿಗಳಲ್ಲಿ ಜಾನುವಾರುಗಳು ಹೆಚ್ಚಾಗಿ ಸಂಚರಿಸುವ ಕಡೆಗಳಲ್ಲಿ ಸುಮಾರು 500 ಮೀಟರ್‌ ಮೊದಲೆ ಈ ಸಾಧನವನ್ನು ರಸ್ತೆಯ ಬದಿ ಅಳವಡಿಸಿದರೆ ಪ್ರಾಣಿಗಳ ಚಲನವಲನ ಅರಿತು ಸವಾರರಿಗೆ ಸೂಚನೆ ನೀಡುತ್ತದೆ.

ರಾಷ್ಟ್ರಮಟ್ಟಕ್ಕೆ ಆಯ್ಕೆ: ಈಚೆಗೆ ಕಲಬುರಗಿಯ ಸೇಡಂನಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಲ್ಲಿ ಈ ವಿದ್ಯಾರ್ಥಿಗಳು "ಹೆದ್ದಾರಿಯಲ್ಲಿ ಬಲಿಯಾಗುತ್ತಿರುವ ಪ್ರಾಣಿಗಳ ಸಾವು ತಡೆಯುವಲ್ಲಿ ತಂತ್ರಜ್ಞಾನದ ಬಳಕೆ " ಎಂಬ ಸಂಶೋಧನಾ ಪ್ರಬಂಧ ಮಂಡಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಯುವ ವಿಜ್ಞಾನಿಗಳು ಎಂಬ ಪ್ರಶಸ್ತಿ ಪಡೆದಿದ್ದಾರೆ. ಕಳೆದ 15 ವರ್ಷಗಳ ನಂತರ ಮೊದಲ ಬಾರಿಗೆ ಧಾರವಾಡ ಜಿಲ್ಲೆಯ ಮಕ್ಕಳು ರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಯಾಗಿರುವುದು ವಿಶೇಷ.

ಒಟ್ಟಾರೆಯಾಗಿ ಗ್ರಾಮೀಣ ಭಾಗದ ಮಕ್ಕಳು ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಪಿಐಆರ್‌ ಡಿಟೆಕ್ಟಿವ್ ಯಂತ್ರ (ಸಾಧನ) ಅಭಿವೃದ್ಧಿಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ಆದರೆ, ಈ ಸಂಶೋಧನೆಗೆ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಲು ಸರ್ಕಾರದಿಂದ ಸಹಕಾರ ದೊರೆಯಬೇಕೆಂಬುದು ವಿದ್ಯಾರ್ಥಿಗಳ ಹಾಗೂ ಶಾಲಾ ಸಿಬ್ಬಂದಿಯ ಕನಸಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?: ಈಗಾಗಲೇ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಗೋಕುಲಕ್ಕೆ ಹೊಂದಿಕೊಂಡಿರುವ ಎನ್‌ಎಚ್‌-48 ಹೆದ್ದಾರಿಯಲ್ಲಿ ಈ ಸಾಧನವನ್ನು ಅಳವಡಿಸಿ ಹಲವು ಸವಾರರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಿ, ರಸ್ತೆಯ ಪಕ್ಕದಲ್ಲಿ ಕೆಂಪುದೀಪ ಅಳವಡಿಸಿದ ಕಂಬವನ್ನು ನಿಲ್ಲಿಸಿ ಅಲ್ಲಿ ಈ ಪಿಐಆರ್‌ ಸಾಧನ ಅಳವಡಿಸಲಾಗಿತ್ತು. 500 ಮೀಟರ್‌ ದೂರದಲ್ಲಿ ರಸ್ತೆಯ ಮೇಲೆ ಜಾನುವಾರುಗಳು ಸಂಚರಿಸುತ್ತಿದ್ದರೆ ಈ ಸಾಧನ ಪ್ರಾಣಿಗಳ ದೇಹದ ಉಷ್ಣತೆ ಗ್ರಹಿಸುತ್ತದೆ. ವಾಹನಗಳು ಬರುತ್ತಿದ್ದಂತೆ ಕೆಂಪುದೀಪದ ಮೂಲಕ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಸೂಚನೆ ನೀಡುತ್ತದೆ.

ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪಿಐಆರ್‌ ಎಂದ ವಿಶೇಷ ಸಾಧನ ಆವಿಷ್ಕರಿಸುವ ಮೂಲಕ ಯುವವಿಜ್ಞಾನಿಗಳಾಗಿ ಹೊರಹೊಮ್ಮಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ಸೂಕ್ತ ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ವಿಜ್ಞಾನ ಶಿಕ್ಷಕ ಎಸ್.ಬಿ. ಭಾವಿಕಟ್ಟಿ ಹೇಳಿದರು.