ಕೇಸೂರು ಜನತಾ ಕಾಲನಿಯಲ್ಲಿ ಸ್ವಚ್ಛತೆ ಮರೀಚಿಕೆ

KannadaprabhaNewsNetwork | Published : Jun 18, 2025 1:05 AM

ತ್ಯಾಜ್ಯ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಕಳೆದ ವಾರ ಗ್ರಾಮದಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿದ್ದರೂ ಸಹ ಸ್ವಚ್ಛತೆಗೆ ಮಾತ್ರ ಗ್ರಾಮ ಪಂಚಾಯಿತಿ ಮುಂದಾಗಿಲ್ಲ.

ಕುಷ್ಟಗಿ:

ತಾಲೂಕಿನ ಕೇಸೂರು ಗ್ರಾಮದ 2ನೇ ವಾರ್ಡಿನ ಜನತಾ ಕಾಲನಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ತ್ಯಾಜ್ಯ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಕಳೆದ ವಾರ ಗ್ರಾಮದಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿದ್ದರೂ ಸಹ ಸ್ವಚ್ಛತೆಗೆ ಮಾತ್ರ ಗ್ರಾಮ ಪಂಚಾಯಿತಿ ಮುಂದಾಗಿಲ್ಲ.

ಪಟ್ಟಣದಿಂದ 12 ಕಿಲೋ ಮೀಟರ್‌ ದೂರದ ಗ್ರಾಮ ಇದಾಗಿದ್ದು ಗ್ರಾಮ ಪಂಚಾಯಿತಿ ಹೊಂದಿದೆ. ಸ್ವಗ್ರಾಮದವರೇ ಅಧ್ಯಕ್ಷರಾಗಿದ್ದರೂ ಸಹ ಅಸ್ವಚ್ಛತೆ ತಾಂಡಾವಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಾರ್ಡ್‌ ಅಧ್ಯಕ್ಷರು, ಮೂವರು ಸದಸ್ಯರನ್ನು ಹೊಂದಿದ್ದರು ಅಭಿವೃದ್ಧಿಯಿಂದ ಕುಂಠಿತವಾಗಿದೆ.

30 ವರ್ಷಗಳ ಸಮಸ್ಯೆ:

ಇಲ್ಲಿನ ನಿವಾಸಿಗಳು ಕಳೆದ 30 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರ ಮಾತ್ರ ದೊರಕಿಲ್ಲ. ಇದು ಪ್ರಮುಖ ರಸ್ತೆಯ ಕೆಳಭಾಗದಲ್ಲಿ ಇರುವುದರಿಂದ ಮೇಲ್ಭಾಗದ ನೀರು ಹಾಗೂ ತ್ಯಾಜ್ಯ ಇಲ್ಲಿಯ ರಸ್ತೆಗೆ ಬಂದು ನಿಲ್ಲುತ್ತದೆ. ಈ ಕುರಿತು ಪಿಡಿಒ, ಗ್ರಾಪಂ ಅಧ್ಯಕ್ಷರಿಗೆ ಹಲವು ಬಾರಿ ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕಾಲನಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಸುತ್ತಲಿನ ಮನೆಗಳ ಬಳಸಿದ ನೀರು, ನಲ್ಲಿ ನೀರು ಹಾಗೂ ಮಳೆಯ ನೀರು ಹರಿದು ಬಂದು ನಿಲ್ಲಿ ನಿಲ್ಲುತ್ತಿದೆ. ಇದರಿಂದ ದುರ್ನಾತದ ಜತೆಗೆ ಸಾಂಕ್ರಾಮಿಕ ರೋಗವು ಉಲ್ಬಣಿಸಿದೆ.ಕೇಸೂರು ಜನತಾ ಕಾಲನಿಯಲ್ಲಿ ಅಸ್ಪಚ್ಛತೆ ಕುರಿತು ಸ್ಥಳ ಪರಿಶೀಲಿಸುವ ಮೂಲಕ ಅಧ್ಯಕ್ಷರ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.ನಮ್ಮ ಕಾಲನಿಯ ಮುಖ್ಯ ರಸ್ತೆಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಸಂಜೆ ಆಗುತ್ತಿದ್ದಂತೆ ಮನೆಯಿಂದ ಹೊರ ಬರದೆ ಬಾಗಿಲು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ತಕ್ಷಣ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಕ್ರಮಕೈಗೊಳ್ಳುವ ಜತೆಗೆ ಚರಂಡಿ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.