- ಕೋರ್ಟ್ ಆದೇಶವೆಂದು ತಕ್ಷಣ ಒಕ್ಕಲೆಬ್ಬಿಸಬೇಡಿ: ಎಸ್.ಎ.ರವೀಂದ್ರನಾಥ ನಗರದ ಬಡ ಕುಟುಂಬಗಳ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಳೆದ 2 ದಶಕಗಳಿಂದಲೂ ದಾವಣಗೆರೆ ಇಂಡಸ್ಟ್ರಿಯಲ್ ಏರಿಯಾದ ಲೋಕಿಕೆರೆ ರಸ್ತೆಯ ಎಸ್.ಎ. ರವೀಂದ್ರನಾಥ ನಗರದಲ್ಲಿ ವಾಸಿಸುತ್ತಿರುವ ಅತ್ಯಂತ ಬಡ ಕುಟುಂಬಗಳಿಗೆ ಪರ್ಯಾಯವಾಗಿ ಶಾಶ್ವತ ಸೂರು ಕಲ್ಪಿಸಿ, ಮೂಲಸೌಕರ್ಯ ಕಲ್ಪಿಸುವಂತೆ ಕಾರ್ಮಿಕರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ನಗರದ ಹೊರವಲಯದ ಶಿರಮಗೊಂಡನಹಳ್ಳಿ ಗ್ರಾಮದ ರಿ.ಸ. ನಂ.62ರ ಎಸ್.ಎ. ರವೀಂದ್ರನಾಥ ನಗರದಲ್ಲಿ 36 ಬಡ ಕುಟುಂಬಗಳು 2 ದಶಕಗಳಿಂದಲೂ ವಾಸಿಸುತ್ತಿವೆ. ಇದೀಗ ನ್ಯಾಯಾಲಯ ಆದೇಶ ಮುಂದಿಟ್ಟುಕೊಂಡು ತಹಸೀಲ್ದಾರರು 36 ಮನೆಗಳನ್ನು ತೆರವುಗೊಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕಾರ್ಮಿಕ ಮುಖಂಡರ ಬಳಿ ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭ ಕಾರ್ಮಿಕ ಸಂಘಟನೆಗಳ ಮುಖಂಡರಾದ ಆವರಗೆರೆ ಚಂದ್ರು, ಜಬೀನಾ ಖಾನಂ, ಎಂ.ಕರಿಬಸಪ್ಪ, ಸರೋಜ, ನಿವಾಸಿಗಳಾದ ಎಚ್.ಟಿ.ಜಯಣ್ಣ, ರುದ್ರಪ್ಪ, ಮುರಿಗೆಮ್ಮ, ಗಂಗಮ್ಮ, ಎ.ಚೈತನ್ಯ, ಜ್ಯೋತಿ, ಬಸಮ್ಮ, ಲಲಿತಮ್ಮ ಹುಲುಗೆಮ್ಮ, ಹೊನ್ನಮ್ಮ, ಪಾಪಮ್ಮ, ಸಾಕಮ್ಮ, ಬಸವರಾಜ, ಮಂಜಮ್ಮ, ಹೊನ್ಮಮ, ಶಕುಂತಲ, ಗಿರಿಜಮ್ಮ, ವೀಣಾ, ಗಿರೀಶ, ಜಯಮ್ಮ, ಅನಿತಾ, ಲಕ್ಷ್ಮಿ, ನೀಲಮ್ಮ, ಖಾಸಿಂ ಸಾಬ್, ಪ್ರೇಮ, ರಾಜುದಾ, ನೇತ್ರಾವತಿ, ಎನ್.ರಂಜಿತಾ ಇತರರು ಇದ್ದರು.
(ಬಾಕ್ಸ್) * ನಮ್ಮನ್ನು ಸ್ಲಂ ಜನ ಎನ್ನುತ್ತ ತೆರವಿಗೆ ಒತ್ತಡ: ಸಂತ್ರಸ್ಥರ ಅಳಲು ಎಸ್.ಎ. ರವೀಂದ್ರನಾಥ ಬಡಾವಣೆಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದೇವೆ. ಆದರೆ, ಈ ಭಾಗದಲ್ಲಿ ಹೊಸದಾಗಿ ಬಂದ ಜನರು ನಾವು ಇಷ್ಟು ವರ್ಷಗಳ ಕಾಲ ಬಾಳಿದ್ದ ಪ್ರದೇಶ, ನಮ್ಮನ್ನು ಸ್ಲಂ ಪ್ರದೇಶ, ಸ್ಲಂ ಜನ ಎಂಬುದಾಗಿ ಹೇಳುತ್ತ, ಇಲ್ಲಿಂದ ತೆರವುಗೊಳಿಸುವಂತೆ ಮಾಡಲು ಒತ್ತಡ ಹೇರುತ್ತಿದ್ದಾರೆ. ನಾವು ಕಡುಬಡವರಾಗಿದ್ದು, ಕೂಲಿ ಮಾಡಿ, ಸಣ್ಣಪುಟ್ಟದಾಗಿ ಬದುಕು ಕಟ್ಟಿಕೊಂಡಿದ್ದೇವೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡರು. ಬೇರೆಯವರು ಸಹ ಈಗ ನಾವು ವಾಸಿಸುವ ಸ್ಥಳಕ್ಕೆ ಬಂದು ಇದು ತಮಗೆ ಇರುವ ಜಾಗವಾಗಿದೆ. ಇದನ್ನು ಖಾಲಿ ಮಾಡಿ ಎಂಬುದಾಗಿ ಹೆದರಿಸುವ, ಬೆದರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಜಾಗ ಬಿಟ್ಟರೆ ನಮಗೆ ಬೇರೆಲ್ಲೂ ಸರ್ಕಾರದ ಆಸ್ತಿಯಾದ ಜಾಗ ಇಲ್ಲ. ಈ ಹಿಂದೆ ಡಿ.ಎಸ್.ರಮೇಶ್ ಜಿಲ್ಲಾಧಿಕಾರಿ ಆಗಿದ್ದಾಗಲೂ ಸಾಕಷ್ಟು ಸಲ ಮನವಿ ಮಾಡಿದ್ದೇವೆ. ನಮಗೆ ಪರ್ಯಾಯ ಜಾಗ, ಶಾಶ್ವತ ನಿವೇಶನ ಅಥವಾ ಸೂರು ಕಲ್ಪಿಸಿ ಅಥವಾ ಇದೇ ಸ್ಥಳದಲ್ಲೇ ನಮಗೆ ಬದುಕಲು ಬಿಡಲಿ ಎಂದು ಅವರು ಮನವಿ ಮಾಡಿದರು.
-12ಕೆಡಿವಿಜಿ1, 2, 3.ಜೆಪಿಜಿ: