ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ

KannadaprabhaNewsNetwork | Published : Jun 17, 2024 1:30 AM

ಸಾರಾಂಶ

ಅಫಜಲ್ಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪಿಡ್ಬ್ಲೂಡಿ ಇಲಾಖೆಯ ವಸತಿಗೃಹ ಪಕ್ಕದ ಚರಂಡಿಯಲ್ಲಿ ಮಣ್ಣು, ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗಲು ಸಾದ್ಯವಾಗುತ್ತಿಲ್ಲ. ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶರ ಮನೆಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ಪಟ್ಟಣದ 1ರಿಂದ 23 ವಾರ್ಡ್‌ಗಳಲ್ಲಿನ ನಿವಾಸಿಗಳು ಹಾಗೂ ವ್ಯಾಪಾರಸ್ಥರು ತಮ್ಮ ಮನೆ, ಅಂಗಡಿಗಳ ಮುಂದೆ ಮುಖ್ಯರಸ್ತೆಗಳ ಅಕ್ಕಪಕ್ಕದಲ್ಲಿರುವ ಚರಂಡಿಗಳ ಮೇಲೆ ಮೆಟ್ಟಿಲುಗಳು, ಕಟ್ಟೆಗಳನ್ನು ಕಟ್ಟಿಸಿಕೊಂಡಿದ್ದರೆ ಅವುಗಳನ್ನು ಒಂದು ವಾರದೊಳಗಾಗಿ ತೆರವು ಮಾಡಿಕೊಳ್ಳಬೇಕೆಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಶಿವಪೂಜೆ ಗಡುವು ನೀಡಿದ್ದಾರೆ.

ಅಫಜಲ್ಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಪಟ್ಟಣದ 23 ವಾರ್ಡಗಳಲ್ಲೂ ಅನೇಕ ಕಡೆಗಳಲ್ಲಿ ಪುರಸಭೆಯಿಂದ ನಿರ್ಮಾಣವಾದ ಚರಂಡಿಗಳ ಮೇಲೆ ಸಾರ್ವಜನಿಕರು ಮೆಟ್ಟಿಲುಗಳು, ಕಟ್ಟೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದರಿಂದಾಗಿ ಸುಗಮ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಅಲ್ಲದೆ ಚರಂಡಿ ನೀರು ಸುಗಮವಾಗಿ ಹರಿದು ಹೋಗಲಾಗುತ್ತಿಲ್ಲ, ನೈರ್ಮಲ್ಯ ಸಮಸ್ಯೆ ನಿವಾರಣೆ ಮಾಡಲು ಪುರಸಭೆ ಸಿಬ್ಬಂದಿಗಳಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಎಲ್ಲಾ ಸಾರ್ವಜನಿಕರು, ವ್ಯಾಪಾರಸ್ಥರು ಚರಂಡಿಗಳ ಮೇಲೆ ಕಟ್ಟಿಕೊಂಡಿರುವ ಕಟ್ಟೆ, ಮೆಟ್ಟಿಲುಗಳನ್ನು ಸ್ವಯಂಪ್ರೇರಿತರಾಗಿ ಒಂದು ವಾರದೊಳಗೆ ತೆರವುಗೊಳಿಸಿಕೊಳ್ಳಬೇಕು. ಇಲ್ಲವಾದರೆ ಪುರಸಭೆಯ ಜೆಸಿಬಿ ವಾಹನಗಳ ಸಹಾಯದಿಂದ ತೆರವುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಿಡಬ್ಲೂಡಿ ಇಲಾಖೆ ಎಇಇ ಲಕ್ಷ್ಮೀಕಾಂತ ಬಿರಾದಾರ ಮಾತನಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪಿಡ್ಬ್ಲೂಡಿ ಇಲಾಖೆಯ ವಸತಿಗೃಹ ಪಕ್ಕದ ಚರಂಡಿಯಲ್ಲಿ ಮಣ್ಣು, ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗಲು ಸಾದ್ಯವಾಗುತ್ತಿಲ್ಲ. ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶರ ಮನೆಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.

ಅಲ್ಲದೆ ವಸತಿಗೃಹಕ್ಕೆ ಕಂಪೌಂಡ ಗೋಡೆ ಇಲ್ಲದೆ ಸಮಸ್ಯೆ ಆಗುತ್ತಿದೆ. ಇದನ್ನು ಮನಗಂಡು ಪುರಸಭೆಯವರ ಸಹಕಾರದೊಂದಿಗೆ ಚರಂಡಿಗಳ ಸ್ವಚ್ಚತೆ ಮಾಡಿಸಲಾಗುತ್ತಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಲಿದೆ. ಅಲ್ಲದೆ ಆದಷ್ಟು ಬೇಗ ವಸತಿಗೃಹಕ್ಕೆ ಕಂಪೌಂಡ ಗೋಡೆ ಕಟ್ಟಿಸಿ ವಸತಿ ಗೃಹಕ್ಕೆ ಇನ್ನೂ ಬೇಕಾಗಿರುವ ಸೌಲಭ್ಯಗಳನ್ನುಕಲ್ಪಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಜೆಇ ಅಜಯ ನನ್ನಾ ಹಾಗೂ ಸಿಬ್ಬಂದಿಗಳು, ಪೌರ ಕಾರ್ಮಿಕರು ಇದ್ದರು.

Share this article