ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ದೇವಾಂಗ ಬೀದಿಯಲ್ಲಿನ ಅವೈಜ್ಞಾನಿಕ ಬಾಕ್ಸ್ ಚರಂಡಿ ಕಾಮಗಾರಿಯಿಂದ ಕುಡಿಯುವ ನೀರಿನ ಕೈ ಪಂಪ್ ಅನ್ನು ಸಿಮೆಂಟ್ ಕೆಳಗೆ ಮುಚ್ಚಿ ಹಾಕಿರುವ ಘಟನೆ ನಡೆದಿದೆ. ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಎಷ್ಟರಮಟ್ಟಿಗೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಬಾಕ್ಸ್ ಚರಂಡಿ ನಿರ್ಮಿಸುವ ಭರದಲ್ಲಿ ಕೈಪಂಪ್ (ಬೋರ್ವೆಲ್) ಅನ್ನೇ ಕಾಂಕ್ರೀಟ್ ಹಾಕಿ ಮುಚ್ಚಿ ಹಾಕಲಾಗಿದೆ. ಪಟ್ಟಣದ ದೇವಾಂಗ ಬೀದಿಯ ಶ್ರೀ ಶಂಭವನಾಥ ಜೈನ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿರುವ ಬಾಕ್ಸ್ ಚರಂಡಿ ಕಾಮಗಾರಿಯಲ್ಲಿ ಎಡವಟ್ಟು ಸಂಭವಿಸಿದೆ. ಸಾಮಾನ್ಯವಾಗಿ ಚರಂಡಿ ನಿರ್ಮಿಸುವಾಗ ರಸ್ತೆ ಬದಿಯಲ್ಲಿರುವ ಕುಡಿಯುವ ನೀರಿನ ಮೂಲಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಪೈಪ್ಲೈನ್ ಅಡ್ಡಬಂದರೆ ಅದನ್ನು ಸ್ಥಳಾಂತರಿಸಬೇಕು. ಆದರೆ ಇಲ್ಲಿನ ಗುತ್ತಿಗೆದಾರರು ಮತ್ತು ಉಸ್ತುವಾರಿ ನೋಡಿಕೊಳ್ಳಬೇಕಾದ ಎಂಜಿನಿಯರ್ಗಳು, "ಕುಡಿಯುವ ನೀರು ಹೋದರೇನು, ನಮಗೆ ಚರಂಡಿ ಕಾಂಕ್ರೀಟ್ ಆದರೆ ಸಾಕು " ಎಂಬ ಧೋರಣೆ ತಾಳಿದಂತಿದೆ. ಹ್ಯಾಂಡ್ ಪಂಪ್ನ ಅರ್ಧಭಾಗ ಚರಂಡಿಯ ತಡೆಗೋಡೆಯ ಒಳಗೇ ಸೇರಿಹೋಗಿದ್ದು ಕೈ ಪಂಪನ್ನು ಒತ್ತುವುದು ಹೇಗೆ ಎಂಬ ಸಮಸ್ಯೆ ಎದುರಾಗಿದೆ.ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನಕ್ಷೆ ಹಾಕುವುದನ್ನು ಬಿಟ್ಟು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರೆ ಇಂತಹ ಪ್ರಮಾದಗಳು ಆಗುತ್ತಿರಲಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಈ ಅವ್ಯವಸ್ಥೆಯನ್ನು ಸರಿಪಡಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಉಳಿಸಿಕೊಡಬೇಕಿದೆ. ಇಲ್ಲದಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಇಂತಹ ಎಡವಟ್ಟುಗಳ ವಿರುದ್ಧ ಜನ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.ಇದರ ಬಗ್ಗೆ ಜೈನ ಸಮಾಜದ ಭರತ್ ಮಾತನಾಡಿ ಜೈನ ಬಸದಿಗೆ ಬರುವ ಭಕ್ತರಿಗೆ ಬಾಕ್ಸ್ ಚರಂಡಿ ನಿರ್ಮಾಣದಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ವಯಸ್ಸಾದವರಿಗೆ ಹತ್ತಲೂ ಆಗದಂತೆ ದೇವಾಲಯ ಒಳಗಡೆ ಹೋಗಲೂ ಕಷ್ಟವಾಗುತ್ತಿದೆ. ಇದರಿಂದ ಅವರು ದೇವಾಲಯಕ್ಕೆ ಹೋಗುವುದನ್ನು ತಪ್ಪಿಸಿದ್ದಾರೆ. ಸರಿಯಾಗಿ ಯಾವಾಗ ರೆಡಿ ಮಾಡಿ ಕೊಡುತ್ತೀರ ಎಂದು ಕೇಳಿದರೆ ಏನೇನೋ ಸಬೂಬು ಹೇಳುತ್ತಾರೆ ಈಗ ನೋಡಿದರೆ ಚರಂಡಿ ಬಾಕ್ಸ್ ಮಧ್ಯೆಯೇ ಬೋರ್ವೆಲ್ ಅನ್ನು ಹಾಗೆ ಬಿಟ್ಟಿದ್ದು ಅವೈಜ್ಞಾನಿಕ ಕೆಲಸ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.