ಕನ್ನಡಪ್ರಭ ವಾರ್ತೆ ಟೇಕಲ್ಜೂ.೮ ರಂದು ಮಾಲೂರು ತಾಲೂಕಿನಲ್ಲಿ ಹಲವಾರು ಬೃಹತ್ ಕಾಮಗಾರಿ ಉದ್ಘಾಟನೆಗೆ ಸಿ.ಎಂ. ಸಿದ್ದರಾಮಯ್ಯ ಹಾಗೂ ಇತರೆ ಸಚಿವರು ಆಗಮಿಸಲಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.ಬುಧವಾರ ಕೊಮ್ಮನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಲೂರು ತಾಲೂಕಿನ ಅಭಿವೃದ್ಧಿಗೆ ೩,೨೦೦ ಕೋಟಿ ರು. ಅನುದಾನ ತಂದಿದ್ದು ಅದರಂತೆಯೇ ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಜೂ.೮ರ ಸೋಮವಾರ ಮಾಲೂರು ನಗರಕ್ಕೆ ಆಗಮಿಸುತ್ತಿದ್ದು ಅಂದು ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದರು.ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದಲ್ಲ ಒಂದು ರೀತಿ ವಿಶೇಷವಾದ ಅವಕಾಶಗಳಲ್ಲಿ ಯೋಜನೆಗಳು ಬರುತ್ತಿದ್ದು ರಸ್ತೆಗಳು ವಿವಿಧ ರೀತಿಯ ಕಾಮಗಾರಿಗಳು ನಡೆಯುತ್ತಲಿದೆ. ಅದರಂತೆ ನಿನ್ನೆಯಷ್ಟೇ ರಾಜ್ಯ ಸರ್ಕಾರವು ತಾಲೂಕಿನ ಬಹಳ ಮುಖ್ಯವಾದ ರಾಜ್ಯ ಹೆದ್ದಾರಿಗಳ ಸೇತುವೆ ನಿರ್ಮಿಸಲು ೧೦ ಕೋಟಿ ರು. ಬಿಡುಗಡೆ ಮಾಡಿದ್ದು ಟೇಕಲ್ನ ಕೊಂಡಶೆಟ್ಟಹಳ್ಳಿ ಬಳಿ ರಾಜ್ಯ ಹೆದ್ದಾರಿ ೯೫ರ ರಸ್ತೆಯಲ್ಲಿ ಗ್ರಾಮದ ಪಕ್ಕದಲ್ಲಿ ಬಹಳ ಪುರಾತನ ಸೇತುವೆ ಇದ್ದು ಅದರ ನಿರ್ಮಾಣಕ್ಕೆ ನಾಲ್ಕು ಕೋಟಿ ರು. ಮಂಜೂರು ಮಾಡಲಾಗಿದೆ.ಲಕ್ಕೂರು ಕೆರೆ ಬಳಿ ಸೇತುವೆ ನಿರ್ಮಾಣಕ್ಕೆ ನಾಲ್ಕೂವರೆ ಕೋಟಿ ಹಾಗೂ ಟೇಕಲ್ ಸಮೀಪದ ಯಲುವಗುಳಿ ಬಳಿ ಸೇತುವೆಯು ಬಹಳ ಶಿಥಿಲವಾಗಿದ್ದು ಬಸ್ಸುಗಳು, ತ್ರಿಚಕ್ರ ವಾಹನ, ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗಿರಲಿಲ್ಲ. ಅದರಂತೆ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಾನೇ ಖುದ್ದಾಗಿ ಮನವಿ ಮಾಡಿದ್ದೆ. ಆದರೆ ಅವರು ಅದಕ್ಕೆ ಸ್ಪಂದಿಸಿರಲಿಲ್ಲ ನಂತರ ಸ್ವಲ್ಪ ರಿಪೇರಿ ಮಾಡಿಸಲಾಯಿತಾದರೂ ಅದು ಸರಿ ಹೋಗಲಿಲ್ಲ. ಇದೀಗ ಇಲ್ಲಿ ಸೇತುವೆ ನಿರ್ಮಾಣಕ್ಕೆ ಒಂದೂವರೆ ಕೋಟಿ ರು. ಮಂಜೂರು ಮಾಡಿದ್ದು ಒಟ್ಟು ಮೂರು ಸೇತುವೆ ಸೇರಿ ೧೦ ಕೋಟಿ ರು. ನೀಡಲಾಗುತ್ತಿದೆ ಎಂದರು.ಟೇಕಲ್ನ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಟೆ ತಿಮ್ಮನಾಯಕನಹಳ್ಳಿಯ ಅಮಾನಿ ಅರಸೀಕೆರೆ ಅಭಿವೃದ್ಧಿಗೆ ೬ ಕೋಟಿ ರು. ಹಾಗೂ ಕೊಮ್ಮನಹಳ್ಳಿ ಕೆರೆಯ ಅಭಿವೃದ್ಧಿಗೆ ನಾಲ್ಕು ಕೋಟಿ ರು. ಮೀಸಲಿಟ್ಟಿದ್ದು ಕಾಮಗಾರಿಯು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ.