ಮದ್ದೂರು ಪುರಸಭೆ ಆಡಳಿತ ಮಂಡಳಿಯಿಂದ ಸಿ.ಎಂ.ಮನೀಶ್ ಕೆಲಸದಿಂದ ವಜಾಗೆ ಖಂಡನೆ

KannadaprabhaNewsNetwork | Published : Feb 4, 2025 12:31 AM

ಸಾರಾಂಶ

ಮದ್ದೂರು ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಸಿ.ಎಂ.ಮನೀಶ್ ನನ್ನು ಶಾಸಕರ ಸುಳ್ಳು ದೂರಿನ ಮೇಲೆ ಕರ್ತವ್ಯದಿಂದ ವಜಾಗೊಳಿಸಿರುವ ಪುರಸಭೆ ಆಡಳಿತ ಮಂಡಳಿ ಕ್ರಮ ವಿರೋಧಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಸಿ.ಎಂ.ಮನೀಶ್ ನನ್ನು ಶಾಸಕರ ಸುಳ್ಳು ದೂರಿನ ಮೇಲೆ ಕರ್ತವ್ಯದಿಂದ ವಜಾಗೊಳಿಸಿರುವ ಪುರಸಭೆ ಆಡಳಿತ ಮಂಡಳಿ ಕ್ರಮ ವಿರೋಧಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಶಂಕರ್ ನೇತೃತ್ವದಲ್ಲಿ ಪುರಸಭೆ ಅಂಬೇಡ್ಕರ್ ಪುತ್ತಳಿ ಬಳಿ ಧರಣಿ ಆರಂಭಿಸಿರುವ ನೂರಾರು ಕಾರ್ಯಕರ್ತರು ಕ್ಷೇತ್ರದ ಶಾಸಕರ ಬೆಂಬಲಿಗರು ನೀಡಿರುವ ಸುಳ್ಳು ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವ ಆಧಾರದ ಮೇಲೆ ಗುತ್ತಿಗೆ ನೌಕರ ಮನೀಶ್ ನನ್ನು ಕೆಲಸದಿಂದ ವಜಾ ಗೊಳಿಸುವ ಮೂಲಕ ಪುರಸಭೆ ಆಡಳಿತ ಮಂಡಳಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಗುತ್ತಿಗೆ ನೌಕರ ಮನೀಶ್ ಮೇಲೆ ದಾಖಲಾಗಿರುವ ಸುಳ್ಳು ದೂರು ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯ ಸತ್ಯತೆ ಪರಿಶೀಲಿಸಿದ ನಂತರ ಪ್ರಕರಣವನ್ನು ವಜಾಗೊಳಿಸಬೇಕು. ಆತನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧಿಕಾರಿಗಳು ಶಾಸಕರ ಒತ್ತಡಕ್ಕೆ ಮಣಿಯಬಾರದು. ಮನೀಶ್ ಗೆ ಯಾವುದೇ ನೋಟಿಸ್ ನೀಡದೆ ಕೆಲಸದಿಂದ ವಜಾಗೊಳಿಸಿರುವ ಮೈಸೂರು ಆರ್. ಸಿ.ಸಲ್ಯೂಷನ್ ಹೊರಗುತ್ತಿಗೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳ ಕುರಿತಂತೆ ಪುರಸಭೆ ಆಡಳಿತ ಮಂಡಳಿ ಶೀಘ್ರ ತೀರ್ಮಾನ ಕೈಗೊಂಡು ಕೆಲಸದಿಂದ ವಜಾ ಗೊಳಿಸಿರುವ ಮನೀಶ್ ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪುರಸಭೆ ಎದುರು ನಿರಂತರವಾಗಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಸಮಿತಿ ಗೌರವಾಧ್ಯಕ್ಷ, ಜಿಪಂ ಮಾಜಿ ಸದಸ್ಯ ಬೋರಯ್ಯ, ಕಾರ್ಯದರ್ಶಿ ಸುಂದರೇಶ್, ಮುಖಂಡರಾದ ಚಿಕ್ಕರಸಿನಕೆರೆ ಮೂರ್ತಿ, ಪುಟ್ಟರಾಮು, ಅಂಬರೀಶ್, ಎಂ. ಶಿವು, ಶ್ರೀನಿವಾಸ,ಕುಮಾರ್,ರವಿ, ದಾಕ್ಷಾಯಿಣಿ, ಗೋವಿಂದರಾಜು, ಶೇಖರ್, ಸ್ವಾಮಿ, ಜಯರಾಮು ಮತ್ತಿತರು ಭಾಗವಹಿಸಿದ್ದರು.

Share this article