ಸಿಎಂ ಮಾತು ನೋವು ತಂದಿದೆ: ಕೆ.ಎಸ್‌.ಈಶ್ವರಪ್ಪ

ಇಲ್ಲಿ ಒಂದು ಧರ್ಮ ಓಲೈಕೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಲ್ಲ ಸವಲತ್ತು ಕೊಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು

KannadaprabhaNewsNetwork | Published : Apr 26, 2024 7:51 PM IST / Updated: Apr 27 2024, 10:24 AM IST

 ಶಿವಮೊಗ್ಗ :  ನಮ್ಮ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಎಲ್ಲ ಸವಲತ್ತು ಕೊಡುತ್ತೇವೆ. ಸಲವತ್ತು ಕೊಡುವುದಕ್ಕೆ ಹಿಂಜರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ನನಗೆ ನೋವು ತಂದಿದೆ ಎಂದಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ವಜನಾಂಗ ಶಾಂತಿ ತೋಟ ನಮ್ಮ ಗುರಿ ಎಂದು ಕಾಂಗ್ರೆಸ್‌ನವರು ಭಾಷಣ ಬಿಗಿಯುತ್ತಾರೆ. ಇಲ್ಲಿ ಒಂದು ಧರ್ಮ ಓಲೈಕೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಲ್ಲ ಸವಲತ್ತು ಕೊಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಹಿಂದು ಯುವತಿ ನೇಹಾ ಹತ್ಯೆಯಾದಾಗ ಸಿಎಂ ಹಾಗೂ ಗೃಹ ಸಚಿವರು ಇದು ಲವ್‌ ಜಿಹಾದ್‌ ಅಲ್ಲ, ವೈಯಕ್ತಿಕ ಕೊಲೆ ಎಂದು ಹಗುರವಾಗಿ ಹೇಳಿಕೆ ಕೊಟ್ಟರು. ಪ್ರತಿಭಟನೆ ಬಳಿಕ ಸಿಐಡಿ ತನಿಖೆ ಕೊಟ್ಟಿದ್ದಾರೆ. ವರದಿ ಕೊಡುವುದಕ್ಕಿಂತ ಮುನ್ನವೇ ಸಿಎಂ, ಸಚಿವರು ಈ ರೀತಿ ಹೇಳಿಕೆ ಕೊಟ್ಟರೆ, ಸಿಐಡಿ ಸಂಸ್ಥೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ಹೇಗೆ ಕೊಡುತ್ತದೆ. ಹೀಗಾಗಿ ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಸಂತೋಷ್‌ ಲಾಡ್‌ ನೇಹಾ ಮನೆ ಪ್ರವಾಸಿ ತಾಣವಾಗಿದೆ ಎಂದು ಹೇಳಿಕೆ ಕೊಟ್ಟರು. ಈಗ ಸಿಎಂ ಸಿದ್ದಾರಮಯ್ಯ ಹೋಗಿದ್ದಾರೆ. ಅವರೇನೂ ಪಿಕ್‌ನಿಕ್‌ ಹೋಗಿದ್ದಾರಾ? ಹಿಂದು ಸಮಾಜದ ಜಾಗೃತಿ ಹೆಚ್ಚಾದ ಬಳಿಕ ಚುನಾವಣೆಯಲ್ಲಿ ನಮಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈಗ ಭೇಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಸರ್ವಜನಾಂಗ ಶಾಂತಿ ತೋಟ ನಮ್ಮ ಗುರಿ ಎನ್ನುವ ನೀವು ಯಾಕೆ ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದೀರಿ, ಇದನ್ನು ಮೊದಲು ಬಿಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಕುಟುಕಿದರು.

ಆದಷ್ಟು ಬೇಗಾ ರಾಹುಲ್‌ ಗಾಂಧಿ ಶಿವಮೊಗ್ಗಕ್ಕೆ ಬರಲಿ:

ರಾಹುಲ್‌ ಗಾಂಧಿ ಎಲ್ಲಿಲ್ಲಿ ಕಾಲಿಟ್ಟದ್ದಾರೋ ಅಲ್ಲೆಲ್ಲ ಸೋತಿದ್ದಾರೆ. ಅವರು ಶಿವಮೊಗ್ಗಕ್ಕೆ ಬರಬೇಕು ಎಂಬುದು ನನ್ನ ಆಸೆ. ಆದಷ್ಟು ಬೇಗಾ ಅವರು ಬರಬೇಕು ಎಂದು ವ್ಯಂಗ್ಯವಾಡಿದರು.

ಇನ್ನು ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಅಭ್ಯರ್ಥಿ ಪರ ನಟರನ್ನು ಕರೆಸುತ್ತಿದ್ದಾರೆ. ನಟರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ, ನಟರನ್ನು ನೋಡಲು ಜನರನ್ನು ಬರುತ್ತಾರೆ ವಿನಾ: ಅವರು ಬಂದ ಮಾತ್ರಕ್ಕೆ ಮತ ಕೊಡುವುದಿಲ್ಲ ಎಂದರು.

ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲೂ ಬಿಜೆಪಿ ಹೆಚ್ಚು ಮತಗಳು ಬರುತ್ತಿದ್ದೇವೆ ಎಂದರೆ ಅದಕ್ಕೆ ನರೇಂದ್ರ ಮೋದಿ ಕಾರಣ. ರಾಜ್ಯದಲ್ಲೂ ಮೋದಿ ಮುಖ ನೋಡಿಕೊಂಡು ಹೆಚ್ಚಿನ ಜನ ಮತ ಕೊಡುತ್ತಿದ್ದಾರೆ. ಒಂದು ರಾಜಕೀಯ ಪಕ್ಷ ಅಣ್ಣಮಲೈ ಅವರನ್ನು ಕರೆಸಿ ಪ್ರಚಾರ ಮಾಡಿದ್ದು ತಪ್ಪಲ್ಲ. ಆದರೆ, ಅವರನ್ನು ನೋಡಲು ಜನ ಹೋಗಲಿಲ್ಲ. ತಮಿಳು ಬೆಂಬಲ ಅವರಿಗೆ ಇಲ್ಲ ಎಂಬುದು ಬಿಜೆಪಿಗೆ ಗೊತ್ತಾಗಿದೆ. ನನ್ನ ಜೀವನದಲ್ಲಿ ಪಕ್ಷದ ನಾಯಕರು ಹೇಳಿದ ಯಾವ ಮಾತನ್ನು ನಾನು ಮೀರಿಲ್ಲ. ಅವತ್ತು ಸಂಗೊಳ್ಳಿ ರಾಯಣ್ಣ ಬ್ರೀಗೇಡ್‌ ಬಿಟ್ಟಿದ್ದರ ಪರಿಣಾಮ ಹಿಂದುಳಿದವರು, ದಲಿತರು ಎಲ್ಲ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಟೀಕಿಸಿದರು.

8 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಸೋಲುತ್ತದೆ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಿದ್ದಾರೆ. ಹಾಗಾಗಿ ನಮ್ಮ ಓಟನ್ನು ಕಾಂಗ್ರೆಸ್‌ಗೆ ಕೊಡಲ್ಲ, ಬಿಜೆಪಿಗೂ ಓಟ್‌ ಹಾಕಲ್ಲ. ನಿಮಗೆ ಕೊಡುತ್ತೇವೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಹೇಳುತ್ತಿದ್ದಾರೆ. ತಮಿಳು ನಾಯಕರು ಬಿಜೆಪಿ ಸೇರಿದ್ದಾರೆ ಎಂಬುದು ಶುದ್ಧ ಸುಳ್ಳು. ಅಣ್ಣಮಲೈ ಅವರನ್ನು ಭೇಟಿ ಯಾಗಿದ್ದಾರೆ ಹೊರೆತು ಅವರು ಎಂದೂ ಬಿಜೆಪಿ ಅಭ್ಯರ್ಥಿ ಜೊತೆ ಹೋಗಿಲ್ಲ. ತಮಿಳು ಸಮಾಜದವರು ಎಂದಿಗೂ ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ, ಮುಂದೆಯೂ ನೀಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಮಿಳು ಸಮಾಜ ಮುಖಂಡರಾದ ಗೋಪಾಲ್‌, ಮಂಜುನಾಥ್‌, ರಾಜೇಂದ್ರ, ಮಾಜಿ ಮೇಯರ್‌ ಸುವರ್ಣ ಶಂಕರ್‌, ಲತಾ ಗಣೇಶ್‌, ಆರತಿ ಆ.ಮ.ಪ್ರಕಾಶ್‌, ವಿಶ್ವಾಸ್‌ , ರಾಜಣ್ಣ, ವಿದ್ಯಾ ಪ್ರೇಮ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿ ಬೃಹತ್‌ ಸಮಾವೇಶ ನಡೆಯಿತು. ಸಮಾವೇಶದಲ್ಲಿ ವೀರಶೈವ, ಕುರುಬ, ಲಂಬಾಣಿ, ದಲಿತ, ಹಿಂದುಳಿದ ಸಮಾಜ ಸೇರಿ ಎಲ್ಲ ಸಮಾಜದಿಂದ ದೊಡ್ಡ ಸಂಖ್ಯೆ ಸೇರಿದ್ದರು. ಇದು ಶಿಕಾರಿಪುರ ತಾಲೂಕಿನಲ್ಲಿ ನಡೆದ 3ನೇ ಸಾರ್ವಜನಿಕ ಸಭೆ. ಮುಂದೆ ಏ.27ರಂದು ಆನಂದಪುರ, ಸಾಗರ, ಬೃಹತ್‌ ಸಮಾವೇಶ, ಏ.28ರಂದು ಸಂಜೆ 5ಕ್ಕ್ಕೆ ಶಂಕರಘಟ್ಟ ಭಾಗದಲ್ಲಿ ಸಮಾವೇಶ, ಏ.29ರಂದು ಸೋಮವಾರ ತೋಗರ್ಸಿ, ಶಿರಾಳಕೊಪ್ಪ ಭಾಗದಲ್ಲೂ ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಏ.30ರಂದು ಬೆಳಗಿನಿಂದ ಸಂಜೆವರೆಗೆ ತೀರ್ಥಹಳ್ಳಿ ತಾಲೂಕಿನ ಎಲ್ಲ ಜಿಪಂ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ. ಮೇ 1ರಂದು ಬೆಳಗ್ಗೆಯಿಂದ ಸಂಜೆವರಗೆ ಬೈಂದೂರಿನಲ್ಲಿ ಸಮಾವೇಶ ನಡೆಯಲಿದೆ ಎಂದು ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Share this article