ಕನ್ನಡಪ್ರಭ ವಾರ್ತೆ ತುಮಕೂರು
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಗೆ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ಅಧಿಕಾರ ನಡೆಸುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.ಆರ್ ಸಿಬಿ ಗೆದ್ದ ಮರುದಿನವೇ ವಿಜಯೋತ್ಸವ ಆಚರಿಸುವ ಯಾವ ಅಗತ್ಯವೂ ಇರಲಿಲ್ಲ. ಒಂದು ವೇಳೆ ಮರುದಿನವೇ ಮಾಡಬೇಕು ಎಂಬ ಅಭಿಪ್ರಾಯ ಯಾರಿಗಾದರೂ ಇದ್ದಿದ್ದರೆ ಸರ್ಕಾರ ಅವರಿಂದ ಎಲ್ಲ ಸುರಕ್ಷತಾ ಕ್ರಮಗಳ ಮುಚ್ಚಳಿಕೆ ಬರೆಸಿಕೊಳ್ಳಬೇಕಿತ್ತು ಎಂದಿದ್ದಾರೆ.
ಸರ್ಕಾರ ಒಂದಾದ ಮೇಲೆ ಒಂದು ಎಡವಟ್ಟು ಮಾಡಿಕೊಂಡಿದೆ. ಮೊದಲ ದಿನ ಮ್ಯಾಜಿಸ್ಟಿರಿಯಲ್ ತನಿಖೆಗೆ ಆದೇಶ ಮಾಡಿ ಈಗ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದಕ್ಕೆ ಏನು ಕಾರಣ? ಮೊದಲ ದಿನವೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕಿತ್ತು ಅಲ್ಲವೇ? ಎಂದಿದ್ದಾರೆ.ಇಡೀ ಘಟನೆಗೆ ಇದುವರೆಗೆ ಸರ್ಕಾರದಿಂದ ಕ್ಷಮೆಯಾಚನೆ ಬಂದಿಲ್ಲ. ಮುಖ್ಯಮಂತ್ರಿಗಳು ನಾಡಿನ ಜನರ ಕ್ಷಮೆ ಕೇಳಬೇಕು. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದಿದ್ದಾರೆ.
ಈ ಸರ್ಕಾರ ಒಂದಾದ ಮೇಲೆ ಒಂದರಂತೆ ತಪ್ಪು ಮಾಡುತ್ತಿದೆ. ನಾವೇನೂ ಪೊಲೀಸರ ತಲೆದಂಡ ಕೇಳಿರಲಿಲ್ಲ. ಇಷ್ಟು ಹಿರಿಯ ಅಧಿಕಾರಿಗಳನ್ನು ಒಂದೇ ಸಾರಿ ಅಮಾನತು ಮಾಡಿದರೆ ನೀವು ಕೊಡುವ ಸಂದೇಶ ಏನು ಎಂದಿದ್ದಾರೆ.ತನ್ನ ತಪ್ಪನ್ನು, ತನ್ನ ಹೊಣೆಗೇಡಿತನವನ್ನು ಮುಚ್ಚಿಕೊಳ್ಳಲು ಸರ್ಕಾರ ಬಲಿಪಶುಗಳನ್ನು ಹುಡುಕುತ್ತಿದೆ. ಈ ವಿಜಯೋತ್ಸವ ಆಚರಿಸಬೇಕು ಎಂದು ನಿರ್ಧಾರ ತೆಗೆದುಕೊಂಡವರು ಯಾರು? ಅವರು ಮೊದಲು ಪೊಲೀಸ್ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿದ್ದರೇ? ಕೆಎಸ್ಸಿಎ ಕ್ರೀಡಾಂಗಣಕ್ಕೆ ಜನರನ್ನು ಹೇಗೆ ಬಿಡುತ್ತೀರಿ ಎಂದು ಸರ್ಕಾರ ಮೊದಲು ವಿಚಾರಿಸಿತ್ತೇ? ವಿಚಾರಿಸದೇ ಇದ್ದರೆ ಅದು ಕರ್ತವ್ಯ ಲೋಪ ಅಲ್ಲವೇ ಎಂದಿದ್ದಾರೆ.
ಪ್ರತಿಯೊಂದು ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳುವ, ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಯಾಕೆ ಏನೂ ಮಾತನಾಡಿಲ್ಲ. ಇದು ಅವರ ಹೊಣೆಯಲ್ಲವೇ? ಅವರು ಸರ್ಕಾರದ ಕಿವಿ ಹಿಂಡಬೇಕು ತಾನೇ ಎಂದಿದ್ದಾರೆ.ಹಿರಿಯರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕೆ ಮೌನವಾಗಿದ್ದಾರೆ? 11 ಜನ ಅಮಾಯಕ ಯುವಕ, ಯುವತಿಯರ ಸಾವಿನಿಂದ ಅವರಿಗೆ ಏನೂ ಅನಿಸಿಲ್ಲ ಎಂದರೆ ನನಗೆ ದುಃಖವಾಗುತ್ತದೆ ಎಂದಿದ್ದಾರೆ.