-ಬರಗಾಲ ವೀಕ್ಷಣೆ ವೇಳೆ ಸರಳತೆ, ಸಮಾಧಾನ, ಕಳಕಳಿ ತೋರಿದ ಸಿಎಂ ಡಿ.ಕೆ.ಶಿವಕುಮಾರಶರಣು ಸೊಲಗಿ/ ರಿಯಾಜಅಹ್ಮದ ಎಂ. ದೊಡ್ಡಮನಿ
ಮಂಗಳವಾರ ಬರಗಾಲ ಪರಿಸ್ಥಿತಿ ಅರಿಯಲು ಗದಗ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಾಲೂಕಿನ ಕದಾಂಪೂರ ಗ್ರಾಮದ ರೈತ ಶಂಕ್ರಪ್ಪ ಗಾವರವಾಡ ಅವರ ಹೊಲದಲ್ಲಿ ಕುಳಿತು ಸಮಾಧಾನ, ಕಳಕಳಿಯಿಂದ ರೈತರ ಮೊರೆ ಆಲಿಸುವ ಮೂಲಕ ಸರಳತೆ ಮೆರೆದರು.
ಈ ಸಂದರ್ಭದಲ್ಲಿ ರೈತ ಮುಖಂಡ ಶಿವಾನಂದ ಇಟಗಿ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಮುಖಂಡ ವೀರನಗೌಡ ಪಾಟೀಲ, ರೈತ ಸಂಘದ ಅಶ್ವಿನಿ ಬೀಡನಾಳ, ಶಂಕರಗೌಡ ಜಾಯನಗೌಡ್ರ ಮಾತನಾಡಿ, ಗದಗ ಜಿಲ್ಲೆಯಲ್ಲಿ ತೀವ್ರ ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದರು.ಸದ್ಯ ಜಿಲ್ಲೆಯಲ್ಲಿ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿದ್ದು, ಸರ್ಕಾರದ ಅಂಕಿ-ಅಂಶಗಳು ವ್ಯತಿರಿಕ್ತವಾಗಿವೆ. ಮಳೆ ಇಲ್ಲದೆ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು, ಜಿಲ್ಲೆಯ ಉಳಿದ ಆರು ತಾಲೂಕುಗಳನ್ನೂ ತಕ್ಷಣವೇ ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದರು.
ರೈತರ ಮೊರೆ ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇವಲ ಹೇಳಿಕೆಗಳ ಆಧಾರದ ಮೇಲಲ್ಲದೆ ನಿಖರ ವೈಜ್ಞಾನಿಕ ಸಮೀಕ್ಷೆ ಹಾಗೂ ಕಾನೂನು ನಿಯಮಾವಳಿಗಳ ಪ್ರಕಾರವೇ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗುತ್ತಿದೆ. ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ಪರಿಸ್ಥಿತಿ ವೀಕ್ಷಿಸಿದರೆ ಸಾಲದು ಎಂದು ವಾಸ್ತವ ಅರಿಯಲು ನಾನೇ ಖುದ್ದಾಗಿ ನೆಲಮಟ್ಟದಲ್ಲಿ ಈ ಪರಿಶೀಲನೆ ನಡೆಸುತ್ತಿದ್ದೇನೆ. ರಾಜ್ಯ ಸರ್ಕಾರ ಸಲ್ಲಿಸುವ ಮನವಿ ಆಧರಿಸಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವೂ ಪರಿಶೀಲನೆಗೆ ಆಗಮಿಸಲಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಬರ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದು, ವರದಿ ಮರುಪರಿಶೀಲಿಸಿ, ಯಾವುದೇ ಅರ್ಹ ತಾಲೂಕು ಅಥವಾ ಗ್ರಾಮಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.
ಈ ಸಂದರ್ಭ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ್, ಸಿ.ಸಿ. ಪಾಟೀಲ, ಪ್ರಮುಖರಾದ ಡಿ.ಆರ್. ಪಾಟೀಲ, ಐ.ಎಸ್. ಪಾಟೀಲ, ಡಿ.ಡಿ. ಮೋರನಾಳ, ಮಿತುನಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್.ಪಿ. ಮಿತುನ್ ಎಚ್.ಎನ್., ಜಿಪಂ ಸಿಇಒ ಮುಕುಲ್ ಜೈನ್, ಮುಂಡರಗಿ ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್. ತಾಪಂ ಇಓ ವಿಜಯಕುಮಾರ ಬೆಣ್ಣಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.