ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

23 ಸಾವಿರ ದಾಟಲಿದೆ ಕೊಬ್ಬರಿ ಬೆಲೆ : ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ

KannadaprabhaNewsNetwork | Updated : Jun 12 2025, 12:00 PM IST

ವಿಶ್ವಪ್ರಸಿದ್ದ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಟೆಂಡರ್ ಬೆಲೆಯು ಕ್ವಿಂಟಲ್‌ಗೆ 22ಸಾವಿರ ರು. ಗಡಿ ದಾಟುವ ಮೂಲಕ ರು. 23ಸಾವಿರಕ್ಕೆ ವ್ಯಾಪಾರ ನಡೆಯುತ್ತಿದ್ದು, ಇದು ಕೊಬ್ಬರಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ 

ರಂಗಸ್ವಾಮಿ 

ತಿಪಟೂರು :  ವಿಶ್ವಪ್ರಸಿದ್ದ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಟೆಂಡರ್ ಬೆಲೆಯು ಕ್ವಿಂಟಲ್‌ಗೆ 22ಸಾವಿರ ರು. ಗಡಿ ದಾಟುವ ಮೂಲಕ ರು. 23ಸಾವಿರಕ್ಕೆ ವ್ಯಾಪಾರ ನಡೆಯುತ್ತಿದ್ದು, ಇದು ಕೊಬ್ಬರಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದ್ದು ಇಂದಿನ ಗುರುವಾರವೂ ಸಹ ರು.23ಸಾವಿರ ದಾಟಿ ನಾಗಾಲೋಟದಲ್ಲಿ ಮುಂದುವರೆಯುವ ನಿರೀಕ್ಷೆ ಇದೆ.

 ಕಳೆದ ಸೋಮವಾರ ಕ್ವಿಂಟಾಲ್ ಕೊಬ್ಬರಿ ರೂ 22,356ಕ್ಕೆ ಟೆಂಡರ್ ನಡೆದಿದ್ದು ಕೊಬ್ಬರಿ ಮಾರಾಟವಾಗಿದೆ. ಕಳೆದ ವರ್ಷ 2024ರ ಕೊನೆಯ ತಿಂಗಳುಗಳಲ್ಲಿ ಕೊಬ್ಬರಿ ಬೆಲೆಯಲ್ಲಿ ಚೇತರಿಕೆ ಕಂಡಿದ್ದು ಪ್ರಸ್ತುತ ವರ್ಷ ಮಾರ್ಚ್‌ನಲ್ಲಿ ಕ್ವಿಂಟಾಲ್ ಕೊಬ್ಬರಿ 19ಸಾವಿರ ದಾಟಿ ಏರುಗತಿಯಲ್ಲಿ ನಡೆಯುತ್ತಿದೆ. ನಂತರವೂ ಅದೇ ಬೆಲೆಯನ್ನು ಕಾಯ್ದುಕೊಂಡಿರುವ ಮಾರುಕಟ್ಟೆ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಮುನ್ನುಗುತ್ತಿದೆ.

 ಮೇ ತಿಂಗಳನಲ್ಲಿ ಕೊನೆಯಲ್ಲಿ ಕೊಬ್ಬರಿ ಬೆಲೆ 21ಸಾವಿರದ ಆಜುಬಾಜಿನಲ್ಲಿತ್ತು. ನಂತರ ಜೂನ್‌ನಲ್ಲಿ 22ಸಾವಿರ ದಾಟಿ ಈವರೆಗಿನ ಕೊಬ್ಬರಿ ಬೆಲೆ ಇತಿಹಾಸ ದಾಖಲಿಸಿದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿಯೇ ಕೊಬ್ಬರಿ ಆವಕ ರೈತರಲ್ಲಿ ತುಂಬಾ ಕಡಿಮೆ ಇದ್ದು ರೈತರಲ್ಲಿ ತುಸು ಬೇಸರ ತರಿಸಿದೆ. 

ಈಗಾಗಲೆ ತಮಿಳುನಾಡು, ಆಂಧ್ರ, ಕೇರಳ ಮತ್ತಿತರೆ ತೆಂಗು ಬೆಳೆಯುವ ಪ್ರದೇಶಗಳಲ್ಲೂ ತೆಂಗಿನಕಾಯಿಗಳ ಇಳುವರಿ ಕುಸಿತ ಕಂಡಿದೆ. ನಮ್ಮ ರಾಜ್ಯದ ಕಲ್ಪತರು ನಾಡಿನಲ್ಲಿ ಇತ್ತೀಚೆಗೆ ಹೆಚ್ಚು ರೈತರು ಉತ್ತಮ ಬೆಲೆ ಬಂದ ಕಾರಣ ಎಳನೀರು ಮತ್ತು ತೆಂಗಿನಕಾಯಿಗಳನ್ನೇ ಮಾರಾಟ ಮಾಡಿರುವುದರಿಂದ ಕೊಬ್ಬರಿ ದಾಸ್ತಾನು ತುಂಬಾ ಕಡಿಮೆಯಾಗಿದೆ. 

ಇದರ ಜೊತೆಗೆ ಕಳೆದ ಆರೇಳು ವರ್ಷಗಳಿಂದ ಮಳೆ ಕೊರತೆ, ಅಂತರ್ಜಲದ ಇಳಿಕೆ ಮತ್ತು ತೆಂಗಿನ ಮರಗಳನ್ನು ಕಾಡುತ್ತಿರುವ ಹಲವಾರು ರೋಗಗಳು ತೆಂಗಿನಕಾಯಿಗಳ ಇಳುವರಿಯಲ್ಲಿ ಗಣನೀಯ ಕೊರತೆ ಉಂಟುಮಾಡಿದ್ದಲ್ಲದೆ, ಲೆಕ್ಕವಿಲ್ಲದಷ್ಟು ತೆಂಗಿನ ಮರಗಳು ಬಿದ್ದು ಹೋಗಿರುವ ಕಾರಣಗಳಿಂದಲೂ ಮುಂದಿನ ದಿನಮಾನಗಳಲ್ಲಿ ಎಳನೀರು, ತೆಂಗಿನಕಾಯಿ ಹಾಗೂ ಕೊಬ್ಬರಿಗೆ ನಿರೀಕ್ಷೆ ಮೀರಿ ಬೆಲೆ ಬರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.

Read more Articles on