ರಾಜ್ಯದಲ್ಲಿ ಶಾಸನಗಳ ಸಂಗ್ರಹ, ಅಧ್ಯಯನ ಕೊರತೆ

KannadaprabhaNewsNetwork |  
Published : Mar 05, 2026, 02:00 AM IST
‘ಡಾ. ಬಿ.ವಿ. ಶಿರೂರ ಸಂಶೋಧನ ಪ್ರಶಸ್ತಿ’ಯನ್ನು ಡಾ.ಚನ್ನಬಸವಯ್ಯ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಸಾಹಿತ್ಯ-ಇತಿಹಾಸದ ಸಂಬಂಧ ಅನೋನ್ಯ. ಇವೆರಡಕ್ಕೂ ಶಿಸ್ತು ಹಾಗೂ ಸಂಯಮ ಪರಿಶ್ರಮ ಮುಖ್ಯ. ಸಾಹಿತ್ಯ ಹಾಗೂ ಚರಿತ್ರೆ ಎರಡೂ ಸಾಂಸ್ಕೃತಿಕ ಅಧ್ಯಯನದ ಕೊಂಡಿಗಳಿದ್ದಂತೆ.

ಧಾರವಾಡ:

ಕರ್ನಾಟಕದಲ್ಲಿ ಶಾಸನಗಳ ಸಂಗ್ರಹ ಹಾಗೂ ಅವುಗಳ ಅಧ್ಯಯನದ ಕೊರತೆ ಉಂಟಾಗಿದ್ದು, ಇದು ಹೆಚ್ಚಾಗಬೇಕು ಎಂದು ಹಿರಿಯ ಸಂಶೋಧಕ ಡಾ. ಲಕ್ಷ್ಮಣ ತೆಲಗಾವಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸಿದ್ದ ಹಿರಿಯ ಸಂಶೋಧಕದ ಡಾ. ಬಿ.ವಿ. ಶಿರೂರ ದತ್ತಿಯಲ್ಲಿ ಮಾತನಾಡಿ, ಸಾಹಿತ್ಯ-ಇತಿಹಾಸದ ಸಂಬಂಧ ಅನೋನ್ಯ. ಇವೆರಡಕ್ಕೂ ಶಿಸ್ತು ಹಾಗೂ ಸಂಯಮ ಪರಿಶ್ರಮ ಮುಖ್ಯ. ಸಾಹಿತ್ಯ ಹಾಗೂ ಚರಿತ್ರೆ ಎರಡೂ ಸಾಂಸ್ಕೃತಿಕ ಅಧ್ಯಯನದ ಕೊಂಡಿಗಳಿದ್ದಂತೆ. ಡಾ. ಬಿ.ವಿ. ಶಿರೂರ ಅವರೊಬ್ಬ ಸಮರ್ಥ ಸಂಶೋಧಕರು ಮಾತ್ರವಲ್ಲದೆ ವಿದ್ವತ್‌ಪೂರ್ಣ ವ್ಯಕ್ತಿತ್ವದ ಪ್ರಾಮಾಣಿಕ ಗುಣ ಉಳ್ಳವರು ಎಂದರು.ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ವಿದ್ವತ್‌ಪೂರ್ಣ ಪರಂಪರೆಯ ಒಂದು ಇತಿಹಾಸವೇ ಇದೆ. ಈ ಪರಂಪರೆಯಲ್ಲಿ ಬಿ.ವಿ. ಶಿರೂರ ಇದ್ದಾರೆ. ಅವರ ಮಹಾಪ್ರಬಂಧ ಶ್ರವಣ ಬೆಳಗೊಳದ ರಾಜಕೀಯ, ಸಾಹಿತ್ಯಿಕ, ಸಾಂಸ್ಕೃತಿಕ ಮಹತ್ವ ಸಂಶೋಧನಾ ಕ್ಷೇತ್ರಕ್ಕೊಂದು ಮೌಲಿಕ ಕೊಡುಗೆ ಆಗಿದೆ. ಶಿರೂರ ಸಂಶೋಧನಾ ಪ್ರಶಸ್ತಿಗೆ ಭಾಜನರಾದ ಡಾ. ಚನ್ನಬಸವಯ್ಯ ಹಿರೇಮಠ ಶಾಸನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ ಎಂದು ಹೇಳಿದರು.

ಇದೇ ವೇಳೆ ‘ಡಾ. ಬಿ.ವಿ. ಶಿರೂರ ಸಂಶೋಧನ ಪ್ರಶಸ್ತಿ’ಯನ್ನು ಡಾ. ಚನ್ನಬಸವಯ್ಯ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು. ಜತೆಗೆ ಪ್ರೊ. ಧನವಂತ ಹಾಜವಗೋಳ ಅವರ ‘ಶ್ರೇಷ್ಠ ಸಂಶೋಧಕ ಪ್ರೊ. ಬಿ.ವಿ. ಶಿರೂರ ‘ಗ್ರಂಥ ಬಿಡುಗಡೆ’ಯೂ ನಡೆಯಿತು.

ಡಾ. ಬಿ.ಎಂ. ಶರಭೇಂಧ್ರಸ್ವಾಮಿ ಮಾತನಾಡಿ, ರಾಯಚೂರು ಕಥೆಗಾರರನ್ನು ಸೃಷ್ಟಿಸಿದ ಜಿಲ್ಲೆ. ಧಾರವಾಡವು ರಾಯಚೂರಿನವರ ಅಧ್ಯಯನಕ್ಕೆ ಆಕರ್ಷಣೀಯ ಕೇಂದ್ರವಾಗಿತ್ತು. ಸಾಮಾನ್ಯ ಕುಟುಂಬದಿಂದ ಬಂದ ಡಾ. ಚನ್ನಬಸವಯ್ಯ ಹಿರೇಮಠ ಅಸಾಮಾನ್ಯವಾಗಿ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ಮಸ್ಕಿಯಲ್ಲಿ ಸಿಕ್ಕ ಅಶೋಕನ ಶಿಲಾಶಾಸನ ಹಿರೇಮಠರ ಸಂಶೋಧನೆಗೆ ಪ್ರೇರಣೆ ನೀಡಿತು ಎಂದು ಹೇಳಿದರು.

ಹಿರಿಯ ಸಂಶೋಧಕ ಡಾ. ಬಿ.ವಿ. ಶಿರೂರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ವೀರಣ್ಣ ರಾಜೂರ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಸಣ್ಣವೀರಣ್ಣ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರ್ವಹಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣ್ಣದೋಕುಳಿಯಲ್ಲಿ ಮಿಂದೆದ್ದ ಧಾರವಾಡಿಗರು!
ಸಮಾನತೆ ತರಲು ಶ್ರಮಿಸಿದವರು ಕೈವಾರ ತಾತಯ್ಯ: ಅರವಿಂದ