ಭಾಷೆ, ಸಾಂಸ್ಕೃತಿಕ ವೈವಿಧ್ಯತೆಯ ಕುಂದಾಪುರಕ್ಕೆ ಈ ಹೆಸರು ಬರಲು ಕಾರಣವಾಗಿರುವುದೇ ಈ ಕುಂದೇಶ್ವರ ಸ್ವಾಮಿ ದೇವಾಲಯ. ಪ್ರಕೃತಿಯ ಮಡಿಲಲ್ಲಿರುವ ಈ ದೇವಾಲಯವನ್ನು ಈಶ್ವರನ ಪರಮ ಭಕ್ತನಾಗಿದ್ದ ರಾಜ ಕುಂದವರ್ಮ ಸ್ಥಾಪಿಸಿದ ಎಂಬ ಐತಿಹ್ಯವಿದೆ. ಕುಂದವರ್ಮನಿಂದ ಪ್ರತಿಸ್ಥಾಪಿಸಲ್ಪಟ್ಟ ಈಶ್ವರನೇ ಕುಂದೇಶ್ವರನಾಗಿ ಶತಮಾನಗಳಿಂದ ಇಲ್ಲಿ ಪೂಜೆಗೊಳ್ಳುತ್ತಿದ್ದಾನೆ.
ಸಂಜೆ 5.30ರಿಂದ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿಯ ನಂತರ ಲಕ್ಷ ದೀಪೋತ್ಸವ, ಪುಷ್ಪಕ ರಥದಲ್ಲಿ ಶ್ರೀ ದೇವರ ಪುರ ಮೆರವಣಿಗೆ, ಕಟ್ಟೆ ಪೂಜೆ, ಕೆರೆದೀಪ ಸಂಪನ್ನಗೊಳ್ಳಲಿದೆ. ಪುಷ್ಪಕ ರಥೋತ್ಸವದುದ್ದಕ್ಕೂ ಜಾನಪದ - ಸಾಂಸ್ಕೃತಿವ ವೈಭವ ಪ್ರದರ್ಶನ ನಡೆಯಲಿದೆ.ಸಂಜೆ 7ರಿಂದ ವಿದುಷಿ ಪ್ರವಿತಾ ಅಶೋಕ್ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ನಡೆಯಲಿದೆ. ಜೊತೆಗೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಕುಂದಾಪುರದ ಭಜನಾ ಮಂಡಳಿಗಳ ಒಕ್ಕೂಟದಿಂದ ದೇವರ ನಾಮ ಸಂಕೀರ್ಚನೆ ಮತ್ತು ಕುಣಿತದ ಭಜನೆಗಳು ನಡೆಯಲಿವೆ.
ಧಾರ್ಮಿಕ-ಸಾಂಸ್ಕೃತಿಕ ಸಂಗಮಕುಂದಾಪುರ ಎಂದರೆ ನೆನಪಾಗುವುದು ಧಾರ್ಮಿಕ ಮತ್ತು ಅಲ್ಲಿನ ಸಾಂಸ್ಕೃತಿಕ ವೈಭವ. ಅದಕ್ಕೆ ಸಾಕ್ಷಿ ಎಂಬಂತೆ ಕುಂದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದುದ್ದಕ್ಕೂ ಸೋಣಾರತಿ, 4 ದಿನಗಳ ಕಾಲ ಗಣೇಶ ಚತುರ್ಥಿ, ಯುಗಾದಿ, ಮಹಾ ಶಿವರಾತ್ರಿ, ಲಕ್ಷ ದೀಪೋತ್ಸವಗಳು ಒಂದೆಡೆಯಾದರೆ, ದೇವಾಲಯದಲ್ಲಿ ನಿತ್ಯವೂ ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ.ಶಿವನಿಗೆ ಹಾಲು- ಉಪವಾಸ
ಸೋಮವಾರದಂದು ಕುಂದೇಶ್ವರನಿಗೆ ಹಾಲು ಅರ್ಪಿಸುವುದು ಮತ್ತು ಉಪವಾಸ ನಡೆಸುವುದು ಇಲ್ಲಿಗೆ ಭಕ್ತರು ಸಲ್ಲಿಸುವ ದೊಡ್ಡ ಹರಕೆಯಾಗಿದೆ. ಅವಿವಾಹಿತ ಯುವತಿಯರು ಉತ್ತಮ ಬಾಳಸಂಗಾತಿಯನ್ನು ಪಡೆಯುವುದಕ್ಕಾಗಿ ಶ್ರಾವಣ ಮಾಸದಲ್ಲಿ 16 ಸೋಮವಾರಗಳಂದು ಉಪವಾಸ ನಡೆಸುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯವಾಗಿದೆ.