ಎಸ್‌ಐಆರ್ ಕುರಿತು ಬಹಿರಂಗ ಚರ್ಚೆಗೆ ಬನ್ನಿ: ಅನಿತ್‌ಕುಮಾರ್

KannadaprabhaNewsNetwork |  
Published : Jun 28, 2026, 02:30 AM IST
ಎಸ್‌ಐಆರ್ ಕುರಿತು ಬಹಿರಂಗ ಚರ್ಚೆಗೆ ಬನ್ನಿ: ಅನಿತ್‌ಕುಮಾರ್ | Kannada Prabha

ಸಾರಾಂಶ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಮರ್ಥಿಸುತ್ತಿರುವ ಬಿಜೆಪಿಯವರನ್ನು ಜಾಗೃತ ಕರ್ನಾಟಕ ಸಂಘಟನೆ ಬೆಂಗಳೂರಿನಲ್ಲಿ ಜೂ.೩೦ರಂದು ಆಯೋಜಿಸಿರುವ ಸಭೆಯಲ್ಲಿ ಬಹಿರಂಗ ಚರ್ಚೆಗೆ ಬನ್ನಿ. ಬೆಂಗಳೂರಿ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಈ ಮುಖಾಮುಖಿ ಚರ್ಚೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಮರ್ಥಿಸುತ್ತಿರುವ ಬಿಜೆಪಿಯವರನ್ನು ಜಾಗೃತ ಕರ್ನಾಟಕ ಸಂಘಟನೆ ಬೆಂಗಳೂರಿನಲ್ಲಿ ಜೂ.೩೦ರಂದು ಆಯೋಜಿಸಿರುವ ಸಭೆಯಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಸಂಘದ ಬಿ.ಕೆ.ಅನಿತ್‌ಕುಮಾರ್ ಆಹ್ವಾನಿಸಿದರು.

ಬೆಂಗಳೂರಿ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಈ ಮುಖಾಮುಖಿ ಚರ್ಚೆ ನಡೆಯಲಿದೆ. ಪಕ್ಷಪಾತವಿಲ್ಲದೆ ನಡೆಸುವ ಚರ್ಚೆಯನ್ನು ಆನ್‌ಲೈನ್ ಮುಖಾಂತರ ಲೈವ್ ಮಾಡಲೂ ಉದ್ದೇಶಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿಯ ರಾಜ್ಯಾಧ್ಯಕ್ಷರು ಅಥವಾ ವಿರೋಧ ಪಕ್ಷದ ನಾಯಕರು ಈ ಬಹಿರಂಗ ಚರ್ಚೆಗೆ ಮುಕ್ತವಾಗಿ ಬಂದು ಭಾಗವಹಿಸಬೇಕು. ಕರ್ನಾಟಕದ ಜನತೆಗೆ ಮತದಾನದ ಹಕ್ಕಿನ ರಕ್ಷಣೆಯ ಅಭಯ ನೀಡುವಂತೆ ಆಗ್ರಹಪಡಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಪಟ್ಟಿ ಪರಿಷ್ಕರಣೆಯ ಸ್ವರೂಪ ಅವೈಜ್ಞಾನಿಕವಾಗಿರುವುದಕ್ಕಷ್ಟೇ ನಮ್ಮ ವಿರೋಧವಿದೆ. ಒಂದೊಂದು ರಾಜ್ಯಗಳಲ್ಲಿ ಒಂದೊಂದು ದಾಖಲೆಗಳನ್ನು ಕೇಳಲಾಗುತ್ತಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್ ಇವುಗಳನ್ನು ದಾಖಲೆಯಾಗಿ ಪರಿಗಣಿಸುತ್ತಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಎಲ್ಲರೂ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಒಮ್ಮೆ ದಾಖಲೆಗಳು ಬೇಕೆಂದರೆ ಸಮಯಾವಕಾಶ ಕೊಡಿ ಎಂದು ಒತ್ತಾಯಿಸಿದರು.

ಹೆಸರಿನಲ್ಲಿ ಒಂದಕ್ಷರ ವ್ಯತ್ಯಾಸವಾದರೂ ಅವರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಚುನಾವಣಾ ಆಯೋಗ ಕೇಳಿರುವ ೧೧ ದಾಖಲೆಗಳಲ್ಲಿ ಹಲವು ದಾಖಲೆಗಳು ಮತದಾರರ ಬಳಿ ಇಲ್ಲ. ಹಾಗೆಂದ ಮಾತ್ರಕ್ಕೆ ಅವರು ಮತದಾನ ಮಾಡುವುದಕ್ಕೆ ಅರ್ಹರಲ್ಲವೇ ಎಂದು ಪ್ರಶ್ನಿಸಿದರು.

ಮತದಾರರ ಪಟ್ಟಿಯಿಂದ ಕೈಬಿಡುವುದಕ್ಕೆ ದಾಖಲೆಗಳನ್ನು ಕೇಳುತ್ತಿರುವರೇ ವಿನಃ ನೋಟೀಸ್ ನೀಡುತ್ತಿಲ್ಲ. ಇದರಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಕ್ಕೂ ಸಾಧ್ಯವಿಲ್ಲದಂತಾಗಿದೆ. ಈಗಾಗಲೇ ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋಟ್ಯಂತರ ಜನರನ್ನು ಮತಪಟ್ಟಿಯಿಂದ ಕೈಬಿಟ್ಟು ಮತಹಕ್ಕಿನಿಂದ ವಂಚಿಸಲಾಗಿದೆ ಎಂದು ಆರೋಪಿಸಿದರು.

ಮೃತಪಟ್ಟವರು, ಒಂದು ರಾಜ್ಯದವರು ಅಥವಾ ಜಿಲ್ಲೆಯವರು ಮತ್ತೊಂದು ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದರೆ, ವಿದೇಶಿಯರು ಅಕ್ರಮವಾಗಿ ನೆಲೆಸಿದ್ದರೆ ಅಂತಹವರನ್ನು ಗುರುತಿಸಿ ಪಟ್ಟಿಯಿಂದ ಹೊರತೆಗೆಯಲಿ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತ್ಯಾದಿ ದಾಖಲೆಗಳಿಗೂ ಮಾನ್ಯತೆ ನೀಡದಿದ್ದರೆ ಇದರ ಹಿಂದಿನ ಮರ್ಮವೇನು. ಇಲ್ಲವೇ ಕೇಂದ್ರ ಸರ್ಕಾರ ಅಥವಾ ಚುನಾವಣಾ ಆಯೋಗ ಭಾರತೀಯ ಪೌರತ್ವದ ಶಾಶ್ವತ ಗುರುತಿನ ಚೀಟಿ ನೀಡುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎನ್.ನಾಗೇಶ್, ಬಿ.ಕೃಷ್ಣಪ್ರಕಾಶ್, ಎನ್.ಸುಬ್ರಹ್ಮಣ್ಯ, ಜಿ.ಸಂತೋಷ್, ಬಿ.ಎಲ್.ಪೃಥ್ವಿರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಶಾಸಕ ಕೆ.ಎಸ್. ಆನಂದ್
ನಾಡಪ್ರಭುವಿಗೆ ನಮಿಸಿದ ಮುಖ್ಯಮಂತ್ರಿ ಡಿಕೆಶಿ