- ಅವರು ಕಾಲವಾದ ನಂತರವೂ ಕೂಡ ಅವರ ಜನಪ್ರೀಯತೆ ಹೆಚ್ಚಾಗುತ್ತಿದೆ
- ಅವರ ಅಗಲಿಗೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟನಂಜನಗೂಡು/ಚಾಮರಾಜನಗರದಿವಂಗತ ಆರ್. ಧ್ರುವನಾರಾಯಣ್ ಅವರು ಎಲ್ಲ ಜಾತಿ, ಧರ್ಮದ ಜನರನ್ನು ಪ್ರೀತಿಸುವ, ಗೌರವಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಆದರ್ಶ, ಜನಾನುರಾಗಿ ರಾಜಕಾರಣಿಯಾಗಿದ್ದರು. ಅವರು ಅಗಲಿಕೆ ಕಾಂಗ್ರೆಸ್ ಮತ್ತು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ದಿ.ಆರ್. ಧ್ರುವನಾರಾಯಣ್ ಅವರ ಮೊದಲನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾನ್ಯವಾಗಿ ರಾಜಕಾರಣಿಗಳು ಬದುಕಿದ್ದಾಗ ಜನಪ್ರಿಯರಾಗಿರುವುದು ಸಹಜ, ಆರ್. ಧ್ರುವನಾರಾಯಣ್ ಅವರು ಕಾಲವಾದ ನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ, ಯಾವುದೇ ಜನಪ್ರತಿನಿಧಿಯಾದವರು ಜನಪರ ಅಭಿವೃದ್ದಿಪರವಾಗಿ ಇರಬೇಕು ಜೊತೆಗೆ ಜನರನ್ನು ಪ್ರೀತಿಸುವ ಗುಣವಿರಬೇಕು ಈ ಎಲ್ಲ ಗುಣಗಳು ಸಹ ಧ್ರುವನಾರಾಯಣ್ ಅವರಲ್ಲಿತ್ತು. ಆದ್ದರಿಂದಲೇ ಅವರನ್ನು ಜನರು ಎಂದಿಗೂ ಬಿಟ್ಟು ಇರುತ್ತಿರಲಿಲ್ಲ, ಅವರ ಸರಳ, ಸಜ್ಜನ, ಸಭ್ಯತೆಯಿಂದ ಕೂಡಿದ ನಾಯಕತ್ವ ಗುಣಗಳನ್ನು ಹೊಂದಿದ್ದಂತವರು, ಜನಪರ ರಾಜಕಾರಣಕ್ಕೆ ಧ್ರುವನಾರಾಯಣ್ ಮಾದರಿ ವ್ಯಕ್ತಿತ್ವ ಎಂದರು.
ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ಧ್ರುವನಾರಾಯಣ್ ಅವರು ವಿದ್ಯಾರ್ಥಿ ಕಾಂಗ್ರೆಸ್ ನಿಂದ ಬೆಳೆದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇಡೀ ರಾಜ್ಯ ಸ್ಮರಿಸುವಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದರು.ಚಾಮರಾಜನಗರ ಅಭಿವೃದ್ದಿಗೆ ನಿರಂತರ ಪ್ರಯತ್ನ
ಧ್ರುವನಾರಾಯಣ್ ಅವರು 2 ಬಾರಿ ಶಾಸಕರಾಗಿ 2 ಬಾರಿ ಸಂಸದರಾಗಿ ಚಾಮರಾಜನಗರ ಅಭಿವೃದ್ದಿಗಾಗಿ ಸದಾ ಚಿಂತಿಸುತ್ತಿದ್ದರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳಿಂದ ಅನುದಾನ ತಂದು ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ದಿಗೆ ನಿರಂತರ ಪ್ರಯತ್ನ ನಡೆಸಿದ್ದರು. ಮತ್ತು ಸಂಸತ್ತಿನಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಮೊದಲನೆ ಸಂಸದ ಅಭಿವೃದ್ದಿಯಲ್ಲಿ ಇಡೀ ದೇಶದಲ್ಲೇ ಮೊದಲ ಸಂಸದ ಎಂಬ ಬಿರುದು ಪಡೆದಿದ್ದ ಆದರ್ಶ ರಾಜಕಾರಣಿ ನನ್ನ ಕ್ಷೇತ್ರವೂ ಅವರ ಲೋಕಸಭಾ ವ್ಯಾಪ್ತಿಗೆ ಒಳಪಟ್ಟ ಕ್ಷೇತ್ರವಾದ್ದರಿಂದ ಅವರನ್ನು ನಾನು ಹತ್ತಿರದಿಂದ ನೋಡಿದವನು ಜೊತಗೆ ನನ್ನ ಜೊತೆ ಸದಾ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಲ್ಲ ವಿಚಾರಗಳನ್ನೂ ಸಹ ಚರ್ಚೆ ನಡೆಸುತ್ತಿದ್ದರು ಅವರು ಬದುಕಿದ್ದರೆ ವಿಧಾನಸಭೆಗೆ ಅಥವಾ ಲೋಕಸಭೆಗೆ ಆಯ್ಕೆಯಾಗಿರುತ್ತಿದ್ದರು ಎಂದು ಸ್ಮರಿಸಿದರು.ಸಂವಿಧಾನ ಉಳಿದರೆ ನಾವು-ನೀವು ಉಳಿಯುತ್ತೇವೆ
ಯಾವುದೇ ರಾಜಕಾರಣಿಗೆ ಸೈದ್ದಾಂತಿಕ ಸ್ಪಷ್ಟತೆ ಮತ್ತು ಬದ್ದತೆ ಅಗತ್ಯ ಧ್ರುವನಾರಾಯಣ್ ಅವರಿಗೆ ಇವೆರಡೂ ಇತ್ತು. ಅಸಮಾನತೆ ತುಂಬಿರುವ ಸಮಾಜದಲ್ಲಿ ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನದ ಬಗ್ಗೆ ಅಪಾರ ನಂಬಿಕೆ ಗೌರವವನ್ನು ಹೊಂದಿದ್ದ ರಾಜಕಾರಣಿ. ಈಗ ಕೆಲವರು ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಸಂವಿಧಾನ ಉಳಿದರೆ ನಾವು-ನೀವು ಉಳಿಯಲು ಸಾಧ್ಯ. ಯಾರೇ ರಾಜಕಾರಣಿಗಳು ಸಂವಿಧಾನದ ಬಗ್ಗೆ ಬದ್ದತೆಯನ್ನು ಬೆಳೆಸಿಕೊಳ್ಳಬೇಕು ಎಂದರು.ತಂದೆಯ ಸ್ಥಾನವನ್ನು ಅವರ ಮಗ ತುಂಬುತ್ತಾರೆ
ಅಜಾತ ಶತ್ರುವಾಗಿದ್ದ ಧ್ರುವನಾರಾಯಣ್ ಅವರ ವ್ಯಕ್ತಿತ್ವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ್ ಅವರೂ ಕೂಡ ಹೊಂದಿದ್ದು, ಎಲ್ಲ ಜನರೊಂದಿಗೆ ಬೆರತು ಪ್ರೀತಿಸುವ ಮೂಲಕ ತಂದೆ ಸ್ಥಾನವನ್ನು ತುಂಬುವ ಕೆಲಸವನ್ನು ಅವರ ಪುತ್ರ ದರ್ಶನ್ ಧ್ರುವನಾರಾಯಣ್ ಮಾಡುತ್ತಿದ್ದಾರೆ. ಅವರಿಗೆ ನಾನು ಸಂಪೂರ್ಣ ಬೆಂಬಲ ಸಹಕಾರ ನೀಡುತ್ತೇನೆ ಎಂದರು.ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಧ್ರುವನಾರಾಯಣ್ ಅವರು ಜನರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಹಗಲು-ರಾತ್ರಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಧಣಿವರಿಯದೆ ದುಡಿದವರು ಅಲ್ಲದೆ ರಾಜಶೇಖರ ಮೂರ್ತಿರವರ ಅನುಯಾಯಿಯಾಗಿ ಎಲ್ಲರ ಜೊತೆ ಸ್ನೇಹಮಯ ಸಂಬಂಧವಿಟ್ಟುಕೊಂಡು ಅಜಾತಶತ್ರು ಎನಿಸಿಕೊಂಡ ನಿಷ್ಕಕಳಂಕ ರಾಜಕಾರಣಿ. ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಗೆ ಎಲ್ಲಾ ಸಚಿವರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಜಿಲ್ಲೆಯ ಅಭಿವೃದ್ದಿಗೆ ಶ್ರೇಷ್ಠ ಕೊಡುಗೆ ನೀಡಿದ ನಿಷ್ಠಾವಂತ ರಾಜಕಾರಣಿ. ಅವರ ಸರಳ ಜೀವನ ಎಲ್ಲರಿಗೂ ಮಾದರಿ. ಅವರು ನಡೆ ಸದಾ ನೆನಪಿನಲ್ಲಿಟ್ಟುಕೊಳ್ಳಂತೆ ಬದುಕಿ ಹೋಗಿದ್ದಾರೆ. ಅವರ ನಡೆ ಅವರ ಮಕ್ಕಳಿಗೆ ದಾರಿ ದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕರ್ತರು ಭಯಪಡಬೇಕಿಲ್ಲ ನಿಮ್ಮ ಜೊತೆ ನಾನು ನಿಲ್ಲುತ್ತೇನೆಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ನನ್ನ ತಂದೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಯಾರೂ ಕೂಡ ಭಯಪಡುವ ಅಗತ್ಯವಿಲ್ಲ, ನನ್ನ ಕೊನೆಯ ಉಸಿರಿರುವವರೆವಿಗೂ ನಿಮ್ಮೆಲ್ಲರ ಸೇವೆ ಮಾಡುತ್ತೇನೆ, ನನ್ನ ತಂದೆಯಂತೆಯೇ ನಿಮ್ಮರ ಸಂಕಷ್ಟಕ್ಕೆ ನಿಮ್ಮೆಲ್ಲರ ಜೊತೆ ನಾನು ನಿಲ್ಲುತ್ತೇನೆ ಎಂದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಡಿದರು. ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ಎ.ಆರ್. ಕೃಷ್ಣಮೂರ್ತಿ, ಡಾ. ತಿಮ್ಮಯ್ಯ, ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಕಳಲೆ ಕೇಶವಮೂರ್ತಿ, ಎಂ.ಕೆ. ಸೋಮಶೇಖರ್, ಜಯಣ್ಣ, ನಂಜುಂಡಸ್ವಾಮಿ, ಮಾಜಿ ಸಚಿವ ಬಿ. ಸೋಮಶೇಖರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮರಿಗೌಡ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜು, ವಿಧಾನಸಭಾ ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಶ್ರೀಕಂಠು, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೆಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್ ಇದ್ದರು.