ವಾಣಿಜ್ಯ ಮಳಿಗೆ ಅಕ್ರಮ, ಕ್ರಿಮಿನಲ್ ಮೊಕದ್ದಮೆಗೆ ನಿರ್ಧಾರ

KannadaprabhaNewsNetwork | Published : Jul 20, 2024 12:47 AM

ಸಾರಾಂಶ

ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್, ಗ್ರೋಸರಿ ಮಾರುಕಟ್ಟೆಯಲ್ಲಿನ ಮಳಿಗೆಗಳಿಗೆ ನಗರಸಭೆಯ ಗಮನಕ್ಕೆ ತರದೇ 5 ವರ್ಷದ ಬಾಡಿಗೆ ಮುಂಗಡವಾಗಿ ಭರಿಸಿರುವುದು ಗಂಭೀರ ಲೋಪವಾಗಿದೆ, ತಕ್ಷಣವೇ ಹಣ ಭರಿಸಿದ ಎಲ್ಲರಿಗೂ ಮರಳಿಸಿ ಹಾಗೂ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು

ಗದಗ: ತನ್ನ ವಾಣಿಜ್ಯ ಮಳಿಗೆ ಹಂಚಿಕೆಯಲ್ಲಿ ಆಗಿರುವ ಭಾರೀ ಹಗರಣದ ತನಿಖೆ ನಡೆಸುವ ಉದ್ದೇಶದಿಂದ, ಮೊದಲ ಹಂತವಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಿನಲ್‌ ಮೊಕದ್ದಮೆ ದಾಖಲಿಸಲು ಗದಗ-ಬೆಟಗೇರಿ ನಗರಸಭೆ ನಿರ್ಧರಿಸಿದೆ.

ಈ ಹಗರಣದ ಮೇಲೆ ಬೆಳಕು ಚೆಲ್ಲಿದ "ಕನ್ನಡಪ್ರಭ " ವರದಿ ಆದರಿಸಿ ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸುಧೀರ್ಘ ಚರ್ಚೆಯ ಬಳಿಕ ಕ್ರಮಿನಲ್‌ ಕೇಸು ದಾಖಲಿಸಲು ಸರ್ವಾನುಮತದ ನಿರ್ಧಾರ ಕೈಕೊಳ್ಳಲಾಯಿತು.

ಕ್ಲಾಥ್ ಮಾರ್ಕೆಟ್ ಹಾಗೂ ಗ್ರೇನ್, ಗ್ರೋಸರಿ ಮಾರುಕಟ್ಟೆಯಲ್ಲಿನ ಮಳಿಗೆಗಳಿಗೆ ನಗರಸಭೆಯ ಗಮನಕ್ಕೆ ತರದೇ 5 ವರ್ಷದ ಬಾಡಿಗೆ ಮುಂಗಡವಾಗಿ ಭರಿಸಿರುವುದು ಗಂಭೀರ ಲೋಪವಾಗಿದೆ, ತಕ್ಷಣವೇ ಹಣ ಭರಿಸಿದ ಎಲ್ಲರಿಗೂ ಮರಳಿಸಿ ಹಾಗೂ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.

ದೊಡ್ಡ ಹಗರಣ: ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ, ಅಧ್ಯಕ್ಷೆ ಉಷಾ ದಾಸರ ಅವರ ಅವಧಿಯಲ್ಲಿ ಯಾವುದೇ ಮಹತ್ತರ ಅಭಿವೃದ್ಧಿ ಕಂಡಿಲ್ಲ. ಬದಲಾಗಿ ಅವಳಿ ನಗರದ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಭಾರೀ ಹಗರಣವಾಗಿದೆ ಎಮದು ಆರೋಪಿಸಿ, ಮಳಿಗೆಗಳ ಇತಿಹಾಸ, ಯಾವ ಕಾರಣಕ್ಕಾಗಿ ಅವುಗಳನ್ನು ಅಂದಿನ ಹಿರಿಯರು ಲೀಜ್ ನೀಡಿದ್ದರು. ಸಧ್ಯದ ಅದರ ಸ್ಥಿತಿ ಏನಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣ ಯಾವ ಹಂತದಲ್ಲಿದೆ, ನಗರಸಭೆಯ ಆಸ್ತಿ ಉಳುವಿಗಾಗಿ ನಗರಸಭೆಯ ಆಡಳಿತ ಮಂಡಳಿ ಯಾವ ಕ್ರಮ ತೆಗೆದುಕೊಂಡಿದೆ ಎನ್ನುವುದರ ಕುರಿತು ಸುಧೀರ್ಘವಾಗಿ ಮಾತನಾಡಿದರು.

ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ಹಣ ₹25 ಲಕ್ಷ ಚಲನ್ ಮೂಲಕ ಸರ್ಕಾರಕ್ಕೆ ಜಮೆಯಾಗಿದೆ, ಅದನ್ನು ಅವರಿಗೆ ಮರಳಿಸುತ್ತೀರಿ, ಆದರೆ ಈ ಪ್ರಕರಣದಲ್ಲಿ ಪ್ರಭಾವಿಗಳಿದ್ದು ಅವರು ಕ್ಲಾಥ್ ಮಾರುಕಟ್ಟೆಗೆ ₹ 50 ಲಕ್ಷ, ಗ್ರೇನ್ ಗ್ರೋಸರಿ ಮಾರುಕಟ್ಟೆಗೆ ₹50 ಲಕ್ಷ ಸೇರಿದಂತೆ ಒಂದು ಕೋಟಿಗೂ ಅಧಿಕ ಲಂಚ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸದ್ಯ ಬಾಡಿಗೆ ತುಂಬಿದ ಜನರಲ್ಲಿ ಶೇ. 40 ರಷ್ಟು ಜನ ಸಾವನ್ನಪ್ಪಿದ್ದು, ಸತ್ತವರ ಹೆಸರಿನಲ್ಲಿ ಬಾಡಿಗೆ ತುಂಬಿದ್ದಾರೆ. ಈ ಕುರಿತು ಕೂಡಲೇ ತನಿಖೆಯಾಗಬೇಕು ಎಂದು ಎಲ್.ಡಿ. ಚಂದಾವರಿ ಗಂಭೀರ ಆರೋಪ ಮಾಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಕೃಷ್ಣಾ ಪರಾಪೂರ, ಜಿ.ಎಂ. ನಮಾಜಿ ಧ್ವನಿಗೂಡಿಸಿದರು.

ಆಡಳಿತ ಪಕ್ಷದ ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ವಾಣಿಜ್ಯ ಮಳಿಗೆಗಳ ಮುಂಗಡ ಬಾಡಿಗೆ ವಿಷಯವಾಗಿ ಬಿಜೆಪಿ ಕೂಡಾ ಈಗಾಗಲೇ ಉಪಲೋಕಾಯುಕ್ತ, ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ದಾಖಲೆ ಸಮೇತ ದೂರು ಸಲ್ಲಿಸಿದೆ. ವಾಣಿಜ್ಯ ಮಳಿಗೆಗಳ ಬಗ್ಗೆ ಮಾತ್ರ ಕಾಂಗ್ರೆಸ್ ಸದಸ್ಯರು ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಅವಳಿ ನಗರದ 54 ವಕಾರ ಸಾಲುಗಳ ನೂರಾರು ಕೋಟಿ ಬೆಲೆಬಾಳುವ ಆಸ್ತಿ ಕಬಳಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಧಿಕಾರ ರಚನೆ ಮಾಡಿದ್ದಾರೆ ಇದು ದ್ವಂದ್ವ ನಿಲುವು ಎಂದಾಗ ಸಭೆಯಲ್ಲಿ ಗದ್ದಲ, ಪರಸ್ಪರ ಆರೋಪ ಪ್ರತ್ಯಾರೋಪಗಳು ಜರುಗಿದವು.

ಬಾಡಿಗೆ ತುಂಬಿದ್ದು ಅಪರಾಧ:

ಮುಂಗಡ ಬಾಡಿಗೆ ತುಂಬಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ವಿಷಯವಾಗಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿಲ್ಲ, ಠರಾವು ಮಾಡಿಲ್ಲ, ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೂ ಅವರು ಬಾಡಿಗೆ ತುಂಬಿದ್ದು ಅಪರಾಧ. ಈ ರೀತಿಯ ಗಂಭೀರ ಅಪರಾಧ ಎಸೆಗಿದವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಪೌರಾಯುಕ್ತರು ದಾಖಲಿಸಬೇಕು. ಇದು ಇಂದಿನ ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರ ಅಭಿಪ್ರಾಯವಾಗಿದೆ. ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರ ಒಕ್ಕೊರಲಿನಂತೆ ನಗರಸಭಾಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಇಡೀ ಪ್ರಕರಣದ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸುವುದಾಗಿ ಘೋಷಿಸಿದರು. ಅಧ್ಯಕ್ಷೆ ಉಷಾ ದಾಸರ ಅವರ ಅವಧಿ ಇದೇ 24ಕ್ಕೆ ಕೊನೆಯಾಗಲಿದ್ದು, ಇಂದು ನಡೆದ ಸಾಮಾನ್ಯ ಸಭೆ ಕೊನೆಯದು. ಹೊಸ ಅಧ್ಯಕ್ಷರ ಆಯ್ಕೆ ಬಳಿಕ ಹೊಸ ಅಧ್ಯಾಯ ಶುರು.

Share this article