ಉಡುಪಿ: ಅತ್ಯಂತ ಕಾರಣಿಕ ಕ್ಷೇತ್ರವಾಗಿ ಬೆಳೆಯುತ್ತಿರುವ ಪರ್ಕಳ ಸಮೀಪದ ಶೆಟ್ಟಿಬೆಟ್ಟು ನಡುಮನೆ ವನದುರ್ಗಾ ಕ್ಷೇತ್ರದ ಯಕ್ಷಗಾನ ಪ್ರಸಂಗ ರಚಿಸಲು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತ ಪಿ. ವಿ. ಆನಂದ ಸಾಲಿಗ್ರಾಮ ಅವರಿಗೆ ಶ್ರೀ ಕ್ಷೇತ್ರದಲ್ಲಿ ಆ. 18ರಂದು ಧರ್ಮದರ್ಶಿ ನಡುಮನೆ ಅಮಿತಾ ಆರ್. ಹೆಗ್ಡೆ ವೀಳ್ಯ ಪ್ರದಾನ ಮಾಡಿದರು. ಆನಂದ ಸಾಲಿಗ್ರಾಮ ಇವರು ಶ್ರೀ ಕ್ಷೇತ್ರದ ಮಾಹಿತಿಗಳನ್ನು ಈಗಾಗಲೇ ಸಂಗ್ರಹ ಮಾಡಿದ್ದು, ತಮ್ಮ 71ನೆಯ ಪ್ರಸಂಗವಾಗಿ ಶಕ್ತಿ ಸ್ವರೂಪಿಣಿ ಶೆಟ್ಟಿಬೆಟ್ಟು ನಡುಮನೆ ವನದುರ್ಗಾ ಕ್ಷೇತ್ರ ಮಹಾತ್ಮೆಯನ್ನು ರಚನೆ ಮಾಡಲಿದ್ದು, ರಂಜಿತ್ ಕುಮಾರ್ ಶೆಟ್ಟಿ ಯಜಮಾನಿಕೆಯ ಬಡಗಿನ ಖ್ಯಾತ ಮೇಳವಾದ ಹಟ್ಟಿಯಂಗಡಿ ಮೇಳದಲ್ಲಿ ಈ ಸಾಲಿನಲ್ಲಿ ಅದ್ಧೂರಿ ಪ್ರದರ್ಶನ ಕಾಣಲಿದೆ. ವೀಳ್ಯ ಪ್ರದಾನ ಕಾರ್ಯಕ್ರಮದಲ್ಲಿ ಸಂತೋಷ್ ಆರ್ ಹೆಗ್ಡೆ, ಎಸ್ ಸಂತೋಷ್ ಹೆಗ್ಡೆ, ಸುಹಾಸಿನಿ ಹೆಗ್ಡೆ, ನಿಧಿ ಹೆಗ್ಡೆ, ನಳಿನಿ ಶೆಟ್ಟಿ, ಶಶಿ ಶೆಟ್ಟಿ, ಲೋಕಾಕ್ಷಿ ಶೆಟ್ಟಿ, ಉಮೇಶ್ ನಾಯಕ್, ಶಿವರಾಮ ನಾಯಕ್, ಮಹೇಶ್ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.