2006ರಲ್ಲಿ ಡಾ. ಶಿವಾನಂದ ಗಾಳಿ ಸಂಯೋಜಕರಾಗಿದ್ದಾಗ ವಿವಿ 2 ಎಕರೆ ಜಾಗವನ್ನು ಪೀಠಕ್ಕೆ ಕಟ್ಟಡ ನಿರ್ಮಿಸಲು ಅವಕಾಶ ನೀಡಿದ್ದು, ಈ ವರೆಗೂ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕ್ರಮ ಜರುಗಿಸಿಲ್ಲ.
ಹುಬ್ಬಳ್ಳಿ:
ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ನಾಲ್ಕು ದಶಕಗಳಿಂದ ಅಸ್ತಿತ್ವದಲ್ಲಿದ್ದ "ಜೈನ ಅಧ್ಯಯನ ಪೀಠ "ದ ಪುನಶ್ಚೇತನಕ್ಕೆ ವಿವಿ ಬದ್ಧವಾಗಿದ್ದು, ಇದಕ್ಕೆ ಜೈನ ಸಮುದಾಯದ ಸಂಘ- ಸಂಸ್ಥೆಗಳ ಸಹಯೋಗ ಅಗತ್ಯವಿದೆ ಎಂದು ಕುಲಪತಿ ಡಾ. ಎ.ಎಂ. ಖಾನ್ ತಿಳಿಸಿದರು.
ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಈಚೆಗೆ ಜರುಗಿದ ಅಧ್ಯಯನ ಪೀಠದ ಸಲಹಾ ಸಮಿತಿ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2006ರಲ್ಲಿ ಡಾ. ಶಿವಾನಂದ ಗಾಳಿ ಸಂಯೋಜಕರಾಗಿದ್ದಾಗ ವಿವಿ 2 ಎಕರೆ ಜಾಗವನ್ನು ಪೀಠಕ್ಕೆ ಕಟ್ಟಡ ನಿರ್ಮಿಸಲು ಅವಕಾಶ ನೀಡಿದ್ದು, ಈ ವರೆಗೂ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕ್ರಮ ಜರುಗಿಸಿಲ್ಲ. ಆದ್ದರಿಂದ ಸರ್ಕಾರದಿಂದ ವಿಶೇಷ ಧನಸಹಾಯ ಪಡೆದುಕೊಳ್ಳಲು ನಾನು ಸ್ವತಃ ಆಸಕ್ತಿ ವಹಿಸುವುದಾಗಿ ತಿಳಿಸಿ, ವಿಶೇಷ ನಿಯೋಗ ರಚನೆ ಮಾಡಲು ಒಪ್ಪಿಗೆ ನೀಡಿದರು.
ಪದವೀಧರ ವಿದ್ಯಾರ್ಥಿಗಳಿಗೆ ಪೀಠದ ಮುಖೇನ ಜೈನಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಲು ವಿವಿಯಲ್ಲಿ ಅವಕಾಶಗಳಿದ್ದು, ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟುವಂತೆ ಪ್ರೇರೇಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಸಾರ ಮಾಡುವಂತೆ ಕರೆ ನೀಡಿದರು.
ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಅವರು ಪೀಠದ ಹಣಕಾಸಿನ ವಿವರ ನೀಡಿದರು. ಸಭೆಯಲ್ಲಿ ಸಲಹಾ ಸಮಿತಿ ಸದಸ್ಯ ಹಾಗೂ ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತಪ್ರಸಾದ, ಶಾಂತರಾಜ ಮಲ್ಲಸಮುದ್ರ, ಧನಪಾಲ ಮುನ್ನೊಳ್ಳಿ, ಡಾ. ಆರ್.ಎ. ಬಾಳಿಕಾಯಿ, ಧರಣೇಂದ್ರ ಜವಳಿ, ಶಾಂತಿನಾಥ ಹೊಟಪೇಟಿ, ವಿವಿ ಹಣಕಾಸು ಅಧಿಕಾರಿ ಪ್ರದೀಪ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಹಾಜರಿದ್ದರು. ಸಂಯೋಜಕ ಡಾ. ಜಿನದತ್ತ ಹಡಗಲಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.