ಹರಪನಹಳ್ಳಿ: ಮೂಢನಂಬಿಕೆ ತೊರೆದು ಶಿಕ್ಷಣ, ವೈಚಾರಿಕತೆಯನ್ನು ಅಳವಡಿಸಿಕೊಂಡಾಗ ಮಾತ್ರ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಚಿತ್ರದುರ್ಗಭೋವಿ ಗುರುಪೀಠ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಸೀಕೆರೆ ಹೋಬಳಿಯ ಕೆರೆ ಗುಡಿಹಳ್ಳಿ ಗ್ರಾಮದಲ್ಲಿ ನೂತನ ಕರಗಲ್ಲು ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ದೇವಸ್ಥಾನಕ್ಕೆ ದೇವರ ಪೂಜೆಗೆ ತಗೆದುಕೊಂಡು ಹೋಗುವ ಹಣ್ಣುಕಾಯಿ ಪೂಜೆಯ ಬಳಿಕ ಪ್ರಸಾದ ಎನಿಸಿಕೊಳ್ಳುವ ಸಂಸ್ಕಾರ ನಮ್ಮಲ್ಲಿದೆ. ದೇವರಗುಡಿಯ ಗಡಿ ಪ್ರವೇಶ ಕರಿಗಲ್ಲು ಮೂಲಕ ನಡೆಯಲಿದೆ. ಭಕ್ತರು ಸದ್ವಿಚಾರ ಸದ್ಗುಣಗಳ ಮೂಲಕ ಸಂಸ್ಕಾರಯುತ ಬದುಕು ನಡೆಸಬೇಕು ಎಂದರು.
ಇಂದಿನ ಮಕ್ಕಳು ಶೈಕ್ಷಣಿಕವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಜ್ಞಾನ, ವಿಜ್ಞಾನದ ಅರಿವು ಪಡೆದುಕೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ. ಮೌಢ್ಯ, ಕಂದಾಚಾರಗಳ ಮೂಲಕ ಶೋಷಣೆ ನಡೆಯುತ್ತಿದೆ. ವೈಚಾರಿಕತೆ ಮೂಲಕ ಧಾರ್ಮಿಕ ಆಚರಣೆ ತಿಳಿದವರಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯ ಎಂದರು.ರಾಮಘಟ್ಟ ಕಟ್ಟೆಮನೆ ಪುರವರ್ಗ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಐತಿಹಾಸಿಕ ಪರಂಪರೆಯನ್ನು ಸಾರುವ ಪ್ರತೀಕವಾಗಿರುವ ಕರಗಲ್ಲು ನಶಿಸಿ ಹೋಗಿರುವ ಗ್ರಾಮಗಳ ಪುರಾವೆಗೆ ಸಾಕ್ಷಿಯಾಗಿದೆ. ಅವುಗಳ ರಕ್ಷಣೆ ಆಗಬೇಕು ಎಂದರು.
ಧಾರ್ಮಿಕತೆ ಒಳಗೊಂಡ ಶಿಕ್ಷಣ ಅಗತ್ಯವಿದೆ. ಸರ್ವರನ್ನು ಕೃತಜ್ಞತರನ್ನಾಗಿ ನೋಡಿದ ಭೋವಿ ಸಮಾಜದ ಹಿನ್ನಲೆಯನ್ನು ಅರಿತು ಮಾದರಿ ಜೀವನ ನಡೆಸಬೇಕ ಎಂದು ಹೇಳಿದರು.ಅರಸೀಕೆರೆ ಕೋಲ ಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಿಂದುಳಿದ ಸಮುದಾಯಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕರಗಲ್ಲು ಸದೃಢ ಗ್ರಾಮ ನಿರ್ಮಾಣದ ಸಂಕೇತವಾಗಿದೆ ಎಂದರು.
ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ದೇವರು, ದೇವಸ್ಥಾನದ ಪೂಜೆ ಪುನಸ್ಕಾರಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಕರಗಲ್ಲು ಗ್ರಾಮಕ್ಕೆ ತಗಲುವಂತ ಸೋಂಕು, ಅನಿಷ್ಟಗಳು ತಗುಲದಂತೆ ತಡೆಯುವ ದಿವ್ಯಶಕ್ತಿ ಇದೆ ಎನ್ನುವ ನಂಬಿಕೆ ಇದೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎಂ.ಬಿ. ಅಂಜಿನಪ್ಪ, ಅರ್ಜುನಪ್ಪ, ಚಂದ್ರಧರ ಭಟ್, ಬಸವರಾಜಯ್ಯ, ವೀರೇಶ್, ಕೆಂಗಪ್ಪ, ಸಿ.ಶಿವಪ್ಪ, ಪೂಜಾರಿ ತಿಮ್ಮೇಶ, ಶೇಖರಪ್ಪ, ದುರುಗಪ್ಪ, ಗುಡಿಹಳ್ಳಿ ಹಾಲೇಶ್, ಹೊನ್ನಪ್ಪ ಇತರರು.